ಚಳ್ಳಕೆರೆ: ಜೆಡಿಎಸ್ ಫ್ಲೆಕ್ಸ್ ಹರಿದು, ವಾಹನಕ್ಕೆ ಕಲ್ಲು ಎಸೆತ, 'ರೌಡಿ ರಾಜಕೀಯ'ದ ಆರೋಪ
ಚಳ್ಳಕೆರೆ, ಫೆಬ್ರವರಿ 06: ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಫ್ಲೆಕ್ಸ್ಗಳನ್ನು ಕೆಲವು ಕಿಡಿಗೇಡಿಗಳು ಹರಿದಿದ್ದು, ಈ ರೌಡಿ ಕೃತ್ಯ ಕಾಂಗ್ರೆಸ್ ಶಾಸಕ ರಘುಮೂರ್ತಿಯವರ ಬೆಂಬಲಿಗರದ್ದೇ ಎಂದು ಜೆಡಿಎಸ್ ಆರೋಪಿಸಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತುರೂವುರು ಹೋಬಳಿಯ ಜಾತ್ರೆಯ ಪ್ರಯುಕ್ತ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಫ್ಲೆಕ್ಸ್ಗಳನ್ನು ಹಾಕಿದ್ದರು. ಆದರೆ ಕೆಲವು ಕಿಡಿಗೇಡಿಗಳು ಜೆಡಿಎಸ್ ಅಭ್ಯರ್ಥಿ ರವೀಶ್ ಅವರ ಚಿತ್ರಗಳುಳ್ಳ ಫ್ಲೆಕ್ಸ್ಗಳನ್ನು ಹರಿದಿದ್ದಾರೆ.
ಜೆಡಿಎಸ್ ಪಕ್ಷದ ಫ್ಲೆಕ್ಸ್ಗಳನ್ನು ಹರಿದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರ ಈ ಪುಂಡಾಟಿಕೆಗೆ ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯನ್ನು ನಡೆಸಿರುವ ಜೆಡಿಎಸ್ ಅಭ್ಯರ್ಥಿ ರವೀಶ್, ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ರಘುಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

''ಚಳ್ಳಕೆರೆ ಕ್ಷೇತ್ರದಲ್ಲಿ, ಕಾಂಗ್ರೆಸ್ ಹೀಗೆ 'ರೌಡಿಸಂ ರಾಜಕೀಯ' ತೋರುತ್ತಿರುವುದು ಇದು ಮೊದಲೇನೂ ಅಲ್ಲ, ಕೆಲವು ದಿನಗಳ ಹಿಂದೆ ತುರುವೂರಿನ ಬಳಿಯೇ ಜೆಡಿಎಸ್ನ 'ಪಂಚರತ್ನ' ಕಾರ್ಯಕ್ರಮದ ಜಾಹೀರಾತು ಉಳ್ಳ ಎಲ್ಇಡಿ ಪ್ರೊಜೆಕ್ಟರ್ ಹೊಂದಿದ್ದ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ವಾಹನದ ಡ್ರೈವರ್ ಮೇಲೆ ಹಲ್ಲೆ ಮಾಡಲಾಗಿದೆ'' ಎಂದು ಅವರು ಮಾಹಿತಿ ನೀಡಿದ್ದಾರೆ.
ಹುಣಸೆಕಟ್ಟೆ ಬಳಿ ಜೆಡಿಎಸ್ ಪೋಸ್ಟರ್ ಹಚ್ಚುತ್ತಿದ್ದ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಪೋಸ್ಟರ್ ವಾಹನವನ್ನು ಜಖಂಗೊಳಿಸುವ ಯತ್ನ ಮಾಡಿದ್ದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು.
ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಶ್, ''ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉಂಟಾಗಲಿರುವ ಸೋಲಿನ ಸುಳಿವು ಸಿಕ್ಕಿದ್ದು, ಅದೇ ಹತಾಶೆಯಿಂದ ಆ ಪಕ್ಷದ ಕಾರ್ಯಕರ್ತರು ಹೀಗೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಹಾಲಿ ಶಾಸಕ ರಘುಮೂರ್ತಿ ಅವರು ರಾಜಕೀಯ ಮಾಡಬೇಕೆ ಹೊರತು ರೌಡಿಸಂ ಮಾಡಬಾರದು'' ಎಂದು ಅವರು ಸಲಹೆ ನೀಡಿದ್ದಾರೆ.

ಇನ್ನು ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ, ''ಜೆಡಿಎಸ್ ಕಾರ್ಯಕರ್ತರ ಜೊತೆ ನಾನಿದ್ದೇನೆ, ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಇಂಥ ಬೆದರಿಕೆಗೆ ಎದೆಗುಂದದೇ ನಮ್ಮ ಪಕ್ಷ ಸಂಘಟನೆಯನ್ನು ಇನ್ನೂ ಹೆಚ್ಚಾಗಿ ಬಲ ವರ್ಧಿಸಿ, ಈ ಬಾರಿ ಚಳ್ಳಕೆರೆ ವಿಧಾನಸಭಾ ಚುನಾವಣೆಯಲ್ಲಿ ಇದಕ್ಕೆ ಉತ್ತರ ಕೊಡುವುದರ ಮೂಲಕ ನಿಮ್ಮ ಶಕ್ತಿಯನ್ನು ತೋರಿಸಿ'' ಎಂದು ಕರೆ ನೀಡಿದ್ದಾರೆ ರವೀಶ್.
ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪ್ರಬಲ ಸ್ಪರ್ಧೆ ಇದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ರವೀಶ್ ಅವರು ತುರುಸಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಉಂಟಾದ ಅಲ್ಪ ಮತಗಳ ಹಿನ್ನಡೆಯ ಮುಯ್ಯಿ ತೀರಿಸುವ ಸೂಚನೆ ನೀಡಿದ್ದಾರೆ. ಇನ್ನು ಹಾಲಿ ಶಾಸಕ ರಘುಮೂರ್ತಿ ಸಹ ಕಳೆದ ಬಾರಿಯ ಗೆಲುವನ್ನು ಪುನರಾವರ್ತಿಸುವ ಭರವಸೆಯಲ್ಲಿದ್ದಾರೆ.












Click it and Unblock the Notifications