ನನಗೆ ಸಚಿವ ಸ್ಥಾನದ ಆಸೆ ಇರಲಿಲ್ಲ: ಸಂಸದ ಎ.ನಾರಾಯಣ ಸ್ವಾಮಿ
ಚಿತ್ರದುರ್ಗ, ಜೂನ್ 03: ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೂ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಂತೆ ನಾನು ಇರುತ್ತೇನೆ ಎಂದು ಚಿತ್ರದುರ್ಗದ ನೂತನ ಸಂಸದ ಆನೇಕಲ್ ಎ. ನಾರಾಯಣ ಸ್ವಾಮಿ ಹೇಳಿದರು. ಜೊತೆಗೆ ನನಗೆ ಯಾವುದೇ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ ಎಂದರು.
'ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿರುವ ರಾಜ್ಯದ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ ಏಕೆ' ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ವರಿಷ್ಠರ ನಿರ್ಧಾರಕ್ಕೆ ಮತ್ತು ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿದ್ದು, ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದಿದ್ದೆ. ಚಿತ್ರದುರ್ಗ ಲೋಕಸಭಾದ ಪ್ರಜ್ಞಾವಂತ ಮತದಾರರು ಹಾಗೂ ವಿದ್ಯಾವಂತ ಯುವಸಮೂಹ ಬೆಂಬಲ ನೀಡಿದ್ದರಿಂದ ನಾನು 80 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು. ಚಿತ್ರದುರ್ಗ ಜಿಲ್ಲೆಯ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 5 ಶಾಸಕರ ವರ್ಚಸ್ಸು ಹಾಗೂ ಪಕ್ಷ ಸಂಘಟನೆಯ ಫಲವಾಗಿ ಗೆಲುವು ದೊರಕಿದೆ. ಜನರ ಈ ನಂಬಿಕೆ, ವಿಶ್ವಾಸ, ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆಂದು ಆಶ್ವಾಸನೆ ನೀಡಿದರು.

ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತದಾರರು ದೇಶಭಕ್ತಿಯನ್ನು ಮೆರೆದಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬುದ್ಧಿಶಕ್ತಿ ಮತ್ತು ಐದು ವರ್ಷದ ಸಾಧನೆ, ರಾಷ್ಟ್ರೀಯತೆಯ ಬಗ್ಗೆ ಹೊಂದಿರುವ ಭಾವನೆಯನ್ನು ಮೆಚ್ಚಿ ಬಿಜೆಪಿಗೆ ಜನ ಜಯ ದೊರಕಿಸಿದ್ದಾರೆ ಎಂದರು.












Click it and Unblock the Notifications