ನಾನು ಕೂಡಾ ರೈತನ ಮಗನೇ, ಸಮೀಕ್ಷೆ ಚೆನ್ನಾಗಿ ಗೊತ್ತಿದೆ: ಕೃಷಿ ಸಚಿವ ಬಿ.ಸಿ. ಪಾಟೀಲ್
ಚಿತ್ರದುರ್ಗ, ಆಗಸ್ಟ್ 17: "ಇಲ್ಲಿ ಕೇಳ್ರಪ್ಪ, ನಮ್ಮಲ್ಲಿ ಬಾಂಬೆ ಟೀಮ್ ಇಲ್ಲ, ಯಾವ್ ಟೀಮೂ ಇಲ್ಲ. ರೈತರ ಬಗ್ಗೆ ಕೇಳಿ," ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಪತ್ರಕರ್ತರಿಗೆ ಟಾಂಗ್ ನೀಡಿದರು.
ಬೆಳೆ ಸಮೀಕ್ಷೆಗೆ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ಆಗಮಿಸಿದ್ದ ಬಿ.ಸಿ. ಪಾಟೀಲ್ ಸುದ್ದಿಗಾರರ ಜತೆ ಮಾತನಾಡಿದರು. "ನಮ್ಮಲ್ಲಿ ಯಾವ ಟೀಮ್ ಇಲ್ಲ. ನಾಲ್ಕು ಜನ ಸೇರಿದರೆ ಏನೋ ನಡೆಯುತ್ತದೆ ಎನ್ನುತ್ತೀರಿ. ಆಗ ಸರ್ಕಾರ ತೆಗೆಯಬೇಕಿತ್ತು, ಎಲ್ಲರೂ ಒಟ್ಟಾಗಿ ಇದ್ದೆವು. ಸರ್ಕಾರ ತೆಗೆದ ಬಳಿಕ ಸರ್ಕಾರ ರಚನೆ ಆಗಿದೆ. ಅವರವರಿಗೆ ವಹಿಸಿದ ಕೆಲಸವನ್ನು ಮಾಡುತ್ತಿದ್ದೇವೆ. ನಾನೇನು ಅವರನ್ನೆಲ್ಲ ಬೆಳೆ ಸಮೀಕ್ಷೆಗೆ ಕರೆದುಕೊಂಡು ಬರಬೇಕಾ," ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
"ಒಬ್ಬರೂ, ಇಬ್ಬರಿಗೆ ಬಿಟ್ಟರೇ ಯಾರಿಗೂ ಅನ್ಯಾಯ ಆಗಿಲ್ಲ, ಎಲ್ಲಾ ಸರಿ ಹೋಗುತ್ತದೆ. ಒಂದು ಮನೆಯಲ್ಲೇ ಎಲ್ಲವೂ ಸರಿ ಇರುವುದಿಲ್ಲ. ತಂದೆ- ತಾಯಿ ಸರಿ ಮಾಡುವ ಆಶಾ ಭಾವನೆ ಇದೆ. ನೋಡಿ, ಸರ್ಕಾರಕ್ಕೆ ಏನೇನು ಆಗಲ್ಲ. ಮುಂದೆಯೂ ನಾವು ಅಧಿಕಾರಕ್ಕೆ ಬರುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರೋಕ್ಷವಾಗಿ ಆನಂದ್ ಸಿಂಗ್ಗೆ ಟಾಂಗ್
"ಇನ್ನು ಆನಂದ್ ಸಿಂಗ್ ಯಲ್ಲಾಪುರಕ್ಕೆ ಹೋಗಿದ್ದಾರೆಂದು ಹೇಳಿದ್ದಾರೆ. ಈಗಾಗಲೇ ಅವರು ಸಿಎಂ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಆಗಿದೆ. ಅವರು ಅದನ್ನು ಸರಿ ಪಡಿಸಿದ್ದು ಆಗಿದೆ. ನೀವು ರೈತರ ಬಗ್ಗೆ ಏನಾದರು ಕೇಳಿ, ನಾ ಕೇಳುತ್ತೇನೆ ಎಂದರು. ಆ ಇಲಾಖೆ ಹೆಚ್ಚು, ಈ ಇಲಾಖೆ ಹೆಚ್ಚು ಎಂದು ಮಾತನಾಡುವುದಕ್ಕೆ ಆಗಲ್ಲ. ಯಾವುದೇ ಇಲಾಖೆ ಇದ್ದರೂ ಅದು ಸರ್ಕಾರದ ಇಲಾಖೆ, ಸರ್ಕಾರದ ಕೆಲಸ ದೇವರ ಕೆಲಸ. ಕೊಟ್ಟ ಖಾತೆ ಒಪ್ಪಿಕೊಳ್ಳಬೇಕು," ಎಂದು ಪರೋಕ್ಷವಾಗಿ ಆನಂದ್ ಸಿಂಗ್ಗೆ ಕುಟುಕಿದರು.
"ನಾನು ಪಂಜಾಬ್ನಲ್ಲಿ ಹುಟ್ಟಿಲ್ಲ, ನಾನು ಕೂಡಾ ರೈತನ ಮಗ, ರಾಜ್ಯದ ರೈತರ ಸಮೀಕ್ಷೆ ಚೆನ್ನಾಗಿ ಗೊತ್ತಿದೆ," ಎಂದು ಕೇವಲ ಹೆದ್ದಾರಿ ಬದಿಯಲ್ಲಿ ಮಾತ್ರ ಸಮೀಕ್ಷೆ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದರು.

ನಾವು ನೀವು ರೈತರ ಬಗ್ಗೆ ಗುದ್ದಾಡೋಣ
"ಹಸಿವಿಗೂ ಇಂದಿರಾ ಗಾಂಧಿಯವರಿಗೆ ಸಂಬಂಧ ಇದೇನಾ, ಇಂದಿರಾ ಗಾಂಧಿ ಬಗ್ಗೆ ಗೌರವ ಇದೆ. ಈ ರೀತಿ ಹೋಲಿಕೆ ಮಾಡುವುದು ಮಾಜಿ ಸಿಎಂ ಘನತೆಗೆ ಸರಿಯಲ್ಲ ಎಮದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಸಿ.ಟಿ. ರವಿ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ವಾಕ್ಸಮರಕ್ಕೆ ಡಿವಿಜಿ ಮಾತು ನೆನಪಿಸಿದ ಬಿ.ಸಿ. ಪಾಟೀಲ್, 'ಮದ್ದಾನೆ- ಮದ್ದಾನೆ ಗುದ್ದಾಡುವಾಗ, ಗುಬ್ಬಿ ಹೋಗಿ ಬುದ್ಧಿ ಹೇಳುವುದು ಪೆದ್ದಲ್ಲವೇನೆ ಸರಸಿ.' ಮದ್ದಾನೆಗಳು ಹುಕ್ಕಾ ಬಾರ್, ಆ ಬಾರ್ ಎಂದು ಗುದ್ದಾಡಲಿ, ನಾವು ನೀವು ರೈತರ ಬಗ್ಗೆ ಗುದ್ದಾಡೋಣ," ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚು
"ಕೃಷಿ ನಾಶ ಆದರೆ ರಾಜ್ಯಕ್ಕೆ ದುರ್ಭೀಕ್ಷೆ ಬರುತ್ತದೆಂದು ಹೇಳುತ್ತಾರೆ. 'ಒಕ್ಕಲಿಗ ಒಕ್ಕಿದರೆ ಉಕ್ಕುವುದು ಜಗವೆಲ್ಲ, ಒಕ್ಕಲಿಗ ಹೊಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ' ಎಂಬ ಸರ್ವಜ್ಞನ ನುಡಿ ಹೇಳುವ ಮೂಲಕ ನಾನು ಸರ್ವಜ್ಞ ನಾಡಿನಿಂದ ಬಂದವನು ಎಂದ ಸಚಿವ ಬಿ.ಸಿ. ಪಾಟೀಲ್, ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿ ಇಲ್ಲ ಎಂದರೆ, ಕೃಷಿಕ ಅವನ ಕಾಯಕತ್ವ ಮಾಡಲಿಲ್ಲ ಎಂದರೆ ಜಗತ್ತು ಅನ್ನವಿಲ್ಲದೆ ಉಪವಾಸವಿರಬೇಕಾಗುತ್ತದೆ," ಎಂದು ಹೇಳಿದರು.

ಇಂದು ಕೃಷಿಗೆ ಪ್ರಾಧಾನ್ಯತೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ನೇರವೇರಿಸಿ ನಂತರ ಮಾತನಾಡಿದ ಸಚಿವರು, "ಇಂದು ಕೃಷಿಗೆ ಪ್ರಾಧಾನ್ಯತೆ ಇದೆ. ಹಿಂದೆ ಹಿರಿಯೂರು ಪೊಲೀಸ್ ಅಧಿಕಾರಿಯಾಗಿದ್ದೆ. ಅಂದು ಎಳೆ ಮೀಸೆ ಇದ್ದಂತವನು, ಇಂದು ಬಿಳಿ ಮೀಸೆಗೆ ಬಂದಿದ್ದೇನೆ," ಎಂದು ನಗೆ ಚಟಾಕಿ ಹಾರಿಸಿದರು.
"ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಮ್ಮ ಸರ್ಕಾರ ಸಂಪೂರ್ಣ ರೈತರ ಪರವಾಗಿದೆ. ರೈತರು ಧೃತಿಗೆಡಬಾರದು ಎಂದು ರೈತರಿಗೆ ಧೈರ್ಯ ತುಂಬಿದರು. ನನಗೆ ಸಚಿವ ಸಂಪುಟದಲ್ಲಿ ಅರಣ್ಯ ಖಾತೆ ನೀಡಿದ್ದರು. ರೈತರಿಗೆ ಒಳ್ಳೆಯ ಕೃಷಿ ಯೋಜನೆಗಳನ್ನು ಜಾರಿಗೆ ತರಲು ಹಾಗೂ ರೈತರ ಕೃಷಿ ಸಮಸ್ಯೆಗಳನ್ನು ಬಗೆಹರಿಸಲು ಸಿಎಂ ಭೇಟಿಯಾಗಿ ಕೃಷಿ ಖಾತೆಯನ್ನು ಪಡೆದುಕೊಂಡಿದ್ದೇನೆ," ಎಂದು ಸಚಿವರು ತಿಳಿಸಿದರು.

ರೈತರಿಗೆ ಪರಿಹಾರ ರೂಪಿಸುವ ಬಗ್ಗೆ ಅಧ್ಯಯನ
"ಕೃಷಿ ಬದಲಾವಣೆ ಬಗ್ಗೆ ಅಧ್ಯಯನ ಮಾಡಲು, ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಿಂದ ಪ್ರಾರಂಭಿಸಿ ಎಂಟು ಜಿಲ್ಲೆಗಳಲ್ಲಿ ಕೃಷಿ ಅಧ್ಯಯನ ಪೂರೈಸಿದ್ದೇನೆ. ಈ ಅಧ್ಯಯನದಲ್ಲಿ ಆಯಾ ಪ್ರದೇಶದ ಮಣ್ಣಿನ ಹೋಲಿಕೆ, ಬಿತ್ತನೆ, ರೈತರ ಸಂಕಷ್ಟಗಳ ಬಗ್ಗೆ ಸರ್ಕಾರ ಯಾವ ರೀತಿ ರೈತರಿಗೆ ಪರಿಹಾರ ರೂಪಿಸುವ ಬಗ್ಗೆ ಅಧ್ಯಯನ ಮಾಡಿದ್ದೇನೆ," ಎಂದು ತಿಳಿಸಿದರು.
"ಹಿರಿಯೂರು ತಾಲ್ಲೂಕಿನ ರೈತರೊಂದಿಗೆ ಸಂಪೂರ್ಣ ಒಂದು ದಿನ ಇದ್ದು, ರೈತರ ಸಮಸ್ಯೆಗಳೊಂದಿಗೆ ಚರ್ಚಿಸುತ್ತೇನೆ. ರೈತರಿಗೆ ಕೊಡುವ ಯಾವುದೇ ಯೋಜನೆಗಳನ್ನು ತಡೆ ಹಿಡಿಯದಂತೆ ಸಿಎಂ ಆರ್ಥಿಕ ಇಲಾಖೆಗೆ ತಿಳಿಸಿದ್ದಾರೆ. ರೈತರು ಕೇವಲ ಕೃಷಿಗೆ ಅವಲಂಬಿತವಾಗದೆ ಸಾವಯವ ಕೃಷಿ, ವೈಜ್ಞಾನಿಕ ಕೃಷಿ, ಜೊತೆಗೆ ಉಪಕಸುಬುಗಳ ಕಡೆ ಗಮನ ಹರಿಸಬೇಕು."

ಚಿತ್ರದುರ್ಗಕ್ಕೆ 906 ಕೋಟಿ ರೂ. ಬಿಡುಗಡೆ
"ಸಾವಯವ ಕೃಷಿಗೆ ಸರ್ಕಾರದಿಂದ ಈ ವರ್ಷದಲ್ಲಿ 500 ಕೋಟಿ ರೂ. ಮೀಸಲಿಟ್ಟಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ಚಿತ್ರದುರ್ಗಕ್ಕೆ 906 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನೀರು ಇಲ್ಲದ ಕೋಲಾರದ ರೈತರು ಹೆಚ್ಚು ಮುಂದುವರಿದ್ದು, ಎಲ್ಲ ಸೌಲಭ್ಯ ಇರುವ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕಂಡು ಬರುತ್ತವೆ."
"ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಚಿತ್ರದುರ್ಗ ಜಿಲ್ಲೆಗೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ 23,300 ಆಹಾರ ಕಿಟ್ಗಳನ್ನು 23 ಸಾವಿರ ಕುಟುಂಬಗಳಿಗೆ ವಿತರಿಸಲಾಗಿದೆ. ರೈತರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು," ಎಂದು ಕರೆ ನೀಡಿದರು.
Recommended Video

ಗಾಯಿತ್ರಿ ಜಲಾಶಯಕ್ಕೆ ನೀರು
"ಹಿರಿಯೂರಿನ ಶಾಸಕರು ಯಾವಾಗಲೂ ಕ್ಷೇತ್ರ, ರೈತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಹಿಂದೆ ನಾನು ಇಲ್ಲದಾಗ ವಿವಿ ಸಾಗರ ಜಲಾಶಯದಲ್ಲಿ 70 ಅಡಿ ದಾಟಿರಲಿಲ್ಲ. ಬಿಎಸ್ವೈ ಸಿಎಂ ಆದ ಮೇಲೆ ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಲಾಗಿದೆ. ಈ ಜೆಜಿ ಹಳ್ಳಿ ಹೋಬಳಿಯ ಜನರು ಹಾಗೂ ಶಾಸಕಿಯ ಕೋರಿಕೆಯ ಮೇರೆಗೆ ವಿವಿ ಸಾಗರದಿಂದ ಗಾಯಿತ್ರಿ ಜಲಾಶಯಕ್ಕೆ ನೀರು ಹರಿಸಲು ಶಾಸಕಿ ಜೊತೆಗೆ ಸಿಎಂ ಬಳಿ ತೆರಳಿ ನೀರು ಹರಿಸುವಂತೆ ಒತ್ತಡ ಹಾಕಲಾಗುವುದು," ಎಂದು ಭರವಸೆ ನೀಡಿದರು.
ಕೃಷಿ ಇಲಾಖೆಯಲ್ಲಿ ರೈತರಿಗೆ ಕಳಪೆ ಬೀಜ ವಿತರಣೆ ಎಂಬ ರೈತರ ಆರೋಪದ ಹಿನ್ನಲೆಯಲ್ಲಿ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಇಂತಹ ಪ್ರಕರಣಗಳು ನನ್ನ ಗಮನ ಬಂದರೆ, ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡು ಬಂಧಿಸಲಾಗುವುದು ಎಂದರು.












Click it and Unblock the Notifications