ಹಿರಿಯೂರಿನ ಹೊಸಯಳನಾಡು ಸರ್ಕಾರಿ ಶಾಲೆಗೆ ಬಂದಿದೆ ಬಣ್ಣದ ಮೆರುಗು
ಚಿತ್ರದುರ್ಗ, ಡಿಸೆಂಬರ್ 14: ಸರ್ಕಾರಿ ಶಾಲೆಗಳು ನೋಡಲು ಆಕರ್ಷಕವಾಗಿರುವುದಿಲ್ಲ, ಅಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲ ಎಂಬುದು ಬಹು ಜನರ ಅಭಿಪ್ರಾಯ. ಆದರೆ ಸರ್ಕಾರಿ ಶಾಲೆಯೆಡೆಗಿನ ಈ ಅಭಿಪ್ರಾಯವನ್ನು ಬದಲಿಸುವ ಉದ್ದೇಶದಿಂದ ಎಬಿವಿಪಿಯ ತಂಡವೊಂದು ಕೆಲಸ ಮಾಡುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆಗೆ ಸುಮಾರು 50 ಚಿತ್ರಕಲಾ ವಿದ್ಯಾರ್ಥಿಗಳು ಬಂದಿದ್ದು, ಇಡೀ ಶಾಲೆಗೆ ಬಣ್ಣದ ಮೆರಗು ನೀಡಿದ್ದಾರೆ. ಎಬಿವಿಪಿ ಕ್ಯಾಂಪಸ್ ಕಮಿನಿಟಿ ಪೋಗ್ರಾಂ ವತಿಯಿಂದ ಇಲ್ಲಿಯವರೆಗೂ ಸುಮಾರು 150 ಸರ್ಕಾರಿ ಶಾಲೆಗಳಿಗೆ ಬಣ್ಣದ ಮೆರಗು ನೀಡಿ, ಇದೀಗ 151ನೇ ಸರ್ಕಾರಿ ಶಾಲೆಯಾದ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಸ್ಕೂಲನ್ನು ರಂಗಾಗಿಸಲಾಗುತ್ತಿದೆ.
ಕೋಟೆನಾಡಿನ ಹೆಮ್ಮೆಯಿದು ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ
ಈ ಚಿತ್ರಕಲಾ ವಿದ್ಯಾರ್ಥಿಗಳು ಶಾಲೆಯ ಆಯಾ ತರಗತಿಗಳಿಗೆ, ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಗೋಡೆಗಳ ಮೇಲೆ ಚಿತ್ತಾರ ಮೂಡಿಸುತ್ತಿದ್ದಾರೆ. ಚಿತ್ರದುರ್ಗದ ಕೋಟೆ, ಗಾಂಧಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ವ್ಯಕ್ತಿಗಳ ಚಿತ್ರವನ್ನೂ ಮೂಡಿಸಿದ್ದಾರೆ. ಶಾಲೆಯ ಹೊರಗೆ ಹಾಗೂ ಒಳಗೆ ಬಿಡಿಸಲಾಗಿರುವ ಈ ಚಿತ್ರಗಳು ಮಕ್ಕಳ, ನೋಡುಗರ ಚಿತ್ತಾಕರ್ಷಿಸುತ್ತಿವೆ.
ಬೆಂಗಳೂರು ವಿಶ್ವವಿದ್ಯಾಲಯ, ಚಿತ್ರಕಲಾ ಪರಿಷತ್, ಕಲಾಮಂದಿರ ಬೆಂಗಳೂರು, ದಾವಣಗೆರೆಯ ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ. ಈಗಾಗಲೇ ಹಾಸನ, ಬೆಂಗಳೂರು, ದಾವಣಗೆರೆ, ಮೈಸೂರು, ರಾಜ್ಯದ ವಿವಿಧ ಕಡೆ ಶಾಲೆಗಳಿಗೆ ಭೇಟಿ ಕೊಟ್ಟು ಚಿತ್ರಗಳನ್ನು ಬಿಡಿಸಿದ್ದು, ಇದೀಗ ಚಿತ್ರದುರ್ಗಕ್ಕೆ ಕಾಲಿಟ್ಟಿದ್ದಾರೆ.
ವರ್ಷದಿಂದ ವರ್ಷಕ್ಕೆ ಈ ಸರ್ಕಾರಿ ಶಾಲೆಗೆ ದಾಖಲಾತಿ ಏರುತ್ತಿರುವುದೇಕೆ?
"ಈ ಕೆಲಸಕ್ಕೆ ನಾವು ಹಣ ಪಡೆಯುವುದಿಲ್ಲ, ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸುವುದು ನಮ್ಮ ಕರ್ತವ್ಯ ಎಂದುಕೊಂಡಿದ್ದೇವೆ. ಕೆಲವು ಶಾಲೆಗಳಲ್ಲಿ ಹಳ್ಳಿಯವರು ಬಣ್ಣದ ವ್ಯವಸ್ಥೆ ಮಾಡಿರುತ್ತಾರೆ. ಅದರ ಜೊತೆಗೆ ನಾವು ಕೂಡ ಒಂದಿಷ್ಟು ಹಣ ಹಾಕಿ ಬಣ್ಣ ತೆಗೆದುಕೊಂಡು ಚಿತ್ರ ಬಿಡಿಸುತ್ತೇವೆ. ಸಮಾಜಕ್ಕೆ ಸಂದೇಶವನ್ನು ಕೊಡುವಂತಹ ಕೆಲಸ ಮಾಡಬೇಕೆಂದು ಈ ರೀತಿ ಮಾಡುತ್ತಿದ್ದೇವೆ. ಸರ್ಕಾರಿ ಶಾಲೆಗಳನ್ನು ಉಳಿಸಲು ನಮ್ಮದೂ ಒಂದು ಪ್ರಯತ್ನ" ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಈ ಚಿತ್ರಕಲಾ ವಿದ್ಯಾರ್ಥಿಗಳು.