ಅಕ್ರಮ ಒತ್ತುವರಿ ಪ್ರಶ್ನಿಸಿದ್ದಕ್ಕೆ ಹೊಳಲ್ಕೆರೆ ಶಾಸಕರ ಬೆಂಬಲಿಗನಿಂದ ಹಲ್ಲೆ
ಚಿತ್ರದುರ್ಗ, ಸೆಪ್ಟೆಂಬರ್ 6: ಮುಜರಾಯಿ ಇಲಾಖೆಗೆ ಸೇರಿದ್ದ ಜಾಗವನ್ನು ಅಕ್ರಮ ಒತ್ತುವರಿ ಮಾಡಿದ್ದನ್ನು ಪ್ರಶ್ನಿಸಿದವರ ಮೇಲೆ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಬೆಂಬಲಿಗ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಒಂದು ವಾರದ ಹಿಂದೆ ಹೊಳಲ್ಕೆರೆಯ ರಾಮಗಿರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ರಾಮಗಿರಿ ಸಿದ್ದೇಶ್ವರಸ್ವಾಮಿ ದೇಗುಲಕ್ಕೆ ಸೇರಿರುವ ಜಾಗವನ್ನು ಒತ್ತುವರಿ ಮಾಡಿರುವ ಕುರಿತು ಪ್ರಶ್ನಿಸಿದರು. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ 12 ಗುಂಟೆ ಜಾಗದಲ್ಲಿ ಅಕ್ರಮ ಮಳಿಗೆ ನಿರ್ಮಾಣ ಮಾಡಲಾಗಿದ್ದು, ಇದನ್ನು ಪ್ರಶ್ನಿಸಿದಾಗ ಕೋಪಗೊಂಡ ಬೆಂಬಲಿಗ ವಿ.ರಾಮಪ್ಪ, ತಾನು ಕಟ್ಟಿದ್ದ ಮಳಿಗೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕರ ಮುಂದೆಯೇ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ.
ಆಗಸ್ಟ್ 28ರಂದು ನಡೆದಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಚಂದ್ರಪ್ಪ, ಸಿಇಒ ಸತ್ಯಭಾಮ ಅವರ ಮುಂದೆಯೇ ರಾಮಗಿರಿ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2008ರಲ್ಲಿ ಶಾಸಕರಾಗಿದ್ದ ಚಂದ್ರಪ್ಪ ರಾಮಗಿರಿಯಲ್ಲಿ ಖಾಲಿ ಜಾಗ ಗುರುತಿಸಿ ಬಸ್ ನಿಲ್ದಾಣ ನಿರ್ಮಿಸಲು ಹದಿನೈದು ಲಕ್ಷ ಹಣ ಬಿಡುಗಡೆ ಮಾಡಿದ್ದರು. ಹೀಗಾಗಿ ಖಾಲಿ ಬಿಟ್ಟಿದ್ದ ಮುಜರಾಯಿ ಇಲಾಖೆಯ ಜಾಗವನ್ನು ಚಂದ್ರಪ್ಪನ ಬೆಂಬಲಿಗನಾದ ವಿ.ರಾಮಪ್ಪ ಎನ್ನುವ ಈ ವ್ಯಕ್ತಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮಳಿಗೆಗಳನ್ನು ನಿರ್ಮಾಣ ಮಾಡಿದ್ದಾನೆ ಎನ್ನಲಾಗಿದೆ.












Click it and Unblock the Notifications