ಚುಚ್ಚು ಮಾತಾಡಲ್ಲ; ನನ್ನನ್ನು ಕ್ಷಮಿಸಿ ಅಣ್ಣ ಎಂದು ಕೇಳಿಕೊಂಡ ಶ್ರೀರಾಮುಲು
Recommended Video
ಚಿತ್ರದುರ್ಗ, ಸೆಪ್ಟೆಂಬರ್ 3: ಇಡಿ ವಿಚಾರಣೆಯಿಂದಾಗಿ ತನ್ನ ತಂದೆಗೆ ಎಡೆ ಇಡಲಿಕ್ಕೂ ಆಗಲಿಲ್ಲ ಎಂದು ನಿನ್ನೆ ಡಿ.ಕೆ. ಶಿವಕುಮಾರ್ ಕಣ್ಣೀರಿಟ್ಟಿದ್ದರು. ಅದಕ್ಕೆ ಮರುಗಿರುವ ಆರೋಗ್ಯ ಮಂತ್ರಿ ಬಿ.ಶ್ರೀರಾಮುಲು, "ನನ್ನನ್ನು ಕ್ಷಮಿಸಿ ಡಿ.ಕೆ.ಶಿವಕುಮಾರ್ ಅಣ್ಣ" ಎಂದು ಕೇಳಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಹೊನ್ನೂರು ಗ್ರಾಮದಲ್ಲಿ ಮಾತನಾಡಿದ ಶ್ರೀರಾಮುಲು, "ರಾಜಕೀಯವಾಗಿ ಡಿ.ಕೆ ಶಿವಕುಮಾರ್ ಅವರು ನನ್ನನ್ನು ಕೆಣಕುವಂತೆ ಮಾತನಾಡಿದ್ದರು. ನಾನೂ ಅವರನ್ನು ಕೆಣಕುವಂತೆ ಮಾತನಾಡುತ್ತಿದ್ದೆ. ಆದರೆ ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವಾಗಿತ್ತು. ಅದರ ಹೊರತು ವೈಯಕ್ತಿಕವಾಗಿ ಡಿಕೆಶಿ ಅವರ ಬಗ್ಗೆ ನಾನು ಮಾತನಾಡಿಲ್ಲ" ಎಂದಿದ್ದಾರೆ ಶ್ರೀರಾಮುಲು.

"ಡಿ.ಕೆ.ಶಿವಕುಮಾರ್ ಅವರು ಈಗ ಕಷ್ಟದಲ್ಲಿದ್ದಾರೆ, ಕಾನೂನು ಏನು ಮಾಡಬೇಕೋ ಅದನ್ನು ಮಾಡುತ್ತದೆ, ಇಂಥ ಸಮಯದಲ್ಲಿ ಅವರ ಬಗ್ಗೆ ಚುಚ್ಚು ಮಾತನಾಡಲು ನಾನು ಇಷ್ಟಪಡುವುದಿಲ್ಲ, ನನ್ನಿಂದ ನಿಮಗೆ ನೋವಾಗಿದ್ದರೆ, ಕೈಮುಗಿದು ಕೇಳಿಕೊಳ್ತೇನೆ. ನನ್ನನ್ನು ಕ್ಷಮಿಸಿಬಿಡಿ ಶಿವಕುಮಾರ್ ಅಣ್ಣ" ಎಂದು ಬಹಿರಂಗವಾಗಿ ಮಾಧ್ಯಮಗಳೆದುರು ಕೇಳಿಕೊಂಡಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರ ಮಧ್ಯಂತರ ಚುನಾವಣೆಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣ್ತಿದ್ದಾರೆ, ಅವರ ಕನಸು ನನಸಾಗುವುದಿಲ್ಲ, ಈಗಾಗಲೇ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿದೆ" ಎಂದು ವ್ಯಂಗ್ಯವಾಡಿದರು.












Click it and Unblock the Notifications