ಆದ್ಯತೆ ಯಾವುದಕ್ಕೆ ನೀಡಬೇಕೆಂಬ ಅರಿವು ಸರ್ಕಾರಕ್ಕಿರಬೇಕು; ಕೋಡಿಹಳ್ಳಿ ಚಂದ್ರಶೇಖರ್
ಚಿತ್ರದುರ್ಗ, ನವೆಂಬರ್ 09: ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಒಂದೆಡೆಯಾದರೆ, ಮತ್ತೊಂದೆಡೆ ಕೊರೊನಾ ವೈರಸ್ ದೇಶವನ್ನು ಕಾಡುತ್ತಿದೆ. ಪರಿಸ್ಥಿತಿ ಹೀಗಿರಬೇಕಾದಾಗ ಇದರ ಬಗ್ಗೆ ಕ್ರಮ ಕೈಗೊಳ್ಳದೆ, ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಅವಶ್ಯಕತೆ ಏನಿತ್ತು ಪ್ರಧಾನಿ ಮೋದಿಯವರೇ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ರೈತರ ಸಮಾವೇಶದಲ್ಲಿ ಭಾಗವಹಿಸಿ ಮಾತಾಡಿದ ಅವರು, ದೇಶದ ಪರಿಸ್ಥಿತಿ ಹೀಗಿರುವಾಗ ಆದ್ಯತೆ ಯಾವುದಕ್ಕೆ ನೀಡಬೇಕು ಎಂಬ ಅರಿವಿರಬೇಕು. ಅದನ್ನು ಬಿಟ್ಟು ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದದ್ದು ಅವತ್ತಿನ ಮಟ್ಟಿಗೆ ಅವಶ್ಯಕತೆ ಇತ್ತಾ? ಎಂದು ಕೇಳಿದರು.
ಕೊರೊನಾ ಸಮಯದಲ್ಲಿ ದೇಶದ ಜನರ ಬಾಯಿಗೆ ಬಟ್ಟೆ ಕಟ್ಟಿ ಕೂರಿಸಿ ಲಾಕ್ ಡೌನ್ ಮಾಡಿ, ಮನೆಯಿಂದ ಹೊರ ಬಂದ ಜನರನ್ನು ಹೊಡೆಯುವಂತೆ ಪೊಲೀಸರಿಗೆ ಅಧಿಕಾರ ಕೊಟ್ಟಿರಲ್ಲಾ, ಕೊರೊನಾ ನಿಯಂತ್ರಣಕ್ಕೆ ಈಗ ಏನು ನೀವು ಏನು ಮಾಡುತ್ತಿದ್ದೀರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ರೋಗ ರುಜಿನಗಳು, ದೇಶಾದ್ಯಂತ ಸಾವು ನೋವು ಸಂಭವಿಸಿದಾಗ, ಯುದ್ಧದ ವಾತಾವರಣ ಇದ್ದರೆ ಸುಗ್ರೀವಾಜ್ಞೆಯನ್ನು ಜಾರಿಗೆ ತರುತ್ತಾರೆ. ಆದರೆ ಇದು ಯಾವುದಕ್ಕೂ ಸಂಬಂಧವಿಲ್ಲದೆ ರೈತರ ವಿಷಯದಲ್ಲಿ ಸುಗ್ರೀವಾಜ್ಞೆ ತಂದರು ಎಂದು ಆಕ್ರೋಶಗೊಂಡರು.

ಇದಕ್ಕೂ ಮೊದಲು ಜಿಲ್ಲೆಯಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು, ಗಾಂಧಿ ವೃತ್ತದಲ್ಲಿ ರೈತ ಸಂಘದ ಕಚೇರಿಯನ್ನು ಉದ್ಘಾಟಿಸಿದರು. ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಎಚ್.ಆರ್. ತಿಮ್ಮಯ್ಯ, ಸಿದ್ದರಾಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications