ಚಿತ್ರದುರ್ಗ: ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ 7 ಮಂದಿ ಬಂಧನ
ಚಿತ್ರದುರ್ಗ, ಅಕ್ಟೋಬರ್ 12: ಚಿತ್ರದುರ್ಗದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ 7 ಮಂದಿಯನ್ನು ಅರಣ್ಯಾಧಿಕಾರಿಗಳು ಇಂದು ಬಂಧಿಸಿದ್ದಾರೆ.
ಏಳು ಮಂದಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಅವರಿಂದ ಅತ್ಯಾಧುನಿಕವಾದ ನಾಲ್ಕು ಬಂದೂಕುಗಳು, ಒಂದು ಪಿಸ್ತೂಲು ಹಾಗೂ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಎರಡು ಮಹೀಂದ್ರ ಜೀಪ್ ಹಾಗೂ ಮಹೀಂದ್ರ ಸ್ಕಾರ್ಪಿಯೋ ವಾಹನಗಳನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಧ ಕಡೆಗಳ ಕಾಡಂಚಿನಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಯಾಡಲು ಏಳು ಮಂದಿ ಬೇಟೆಗಾರರು ಬಂದಿರುವ ಖಚಿತ ಮಾಹಿತಿ ತಿಳಿದ ಅರಣ್ಯಾಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಗಳೆಲ್ಲರೂ ಶಿವಮೊಗ್ಗ ಮತ್ತು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಇದರಲ್ಲಿ ನಾಲ್ಕು ಮಂದಿ ಬೇಟೆಗಾರರು ಮತ್ತು ಮೂರು ಮಂದಿ ಚಾಲಕರಾಗಿದ್ದಾರೆ. ಬೇಟೆಗಾರರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾದ ಎಚ್.ಜಿ. ರಘುರಾಮ್, ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರೀಹರ್ಷ, ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿ, CCF ಲಿಂಗರಾಜು ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಬೇಟೆಗಾರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications