ಚಿತ್ರದುರ್ಗ ಜಿಲ್ಲೆಯ ಮಾರುಕಟ್ಟೆಗಳಲ್ಲಿ ದಸರಾ ಹಬ್ಬದ ಖರೀದಿ ಜೋರು: ದರ ಹೇಗಿದೆ?
ಚಿತ್ರದುರ್ಗ, ಅಕ್ಟೋಬರ್ 14: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ನಡುವೆಯೂ ಗುರುವಾರ ಹಾಗೂ ಶುಕ್ರವಾರ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಕ್ಕಾಗಿ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ.
ಮಾರುಕಟ್ಟೆ ಹಾಗೂ ಪ್ರಮುಖ ಬೀದಿಗಳಲ್ಲಿ ರಾಶಿ ರಾಶಿಗಟ್ಟಲೆ ಬಾಳೆಕಂದು, ಹೂವು, ಬೂದುಗುಂಬಳ ಕಾಯಿ ವ್ಯಾಪಾರ ಸೇರಿದಂತೆ ಬಟ್ಟೆ ಅಂಗಡಿ ಹಾಗೂ ದಿನಸಿ ಅಂಗಡಿಗಳಲ್ಲಿ ಖರೀದಿ ನಡೆಯುತ್ತಿದೆ. ಆಯುಧ ಪೂಜೆಯ ದಿನದಂದು ವಾಹನಗಳು, ಯಂತ್ರೋಪಕರಣಗಳು, ಪ್ಯಾಕ್ಟರಿಗಳು, ಕಂಪನಿಗಳು, ವಾಹನ ಶೋರೂಂಗಳು, ಗ್ಯಾರೇಜ್ ಅಂಗಡಿಗಳು, ಮನೆಗಳಲ್ಲಿ ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಪೂಜಾ ಕಾರ್ಯಕ್ರಮಗಳು ಬಲು ಜೋರಾಗಿಯೇ ನಡೆಯಲಿದ್ದು, ಇದಕ್ಕಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತ್ತಿದೆ. ಹಬ್ಬದ ನಡುವೆ ಹೂವು, ಹಣ್ಣು, ತರಕಾರಿ ಬೆಲೆಗಳು ಹೆಚ್ಚಳವಾಗಿವೆ.

ಅಕ್ಕಪಕ್ಕದ ಜಿಲ್ಲೆಗಳಿಂದ ಬಂದ ಹೂವು, ಹಣ್ಣು
ಅಕ್ಕಪಕ್ಕದ ಜಿಲ್ಲೆಗಳಿಂದಲೂ ಬಾಳೆಕಂದು, ಬೂದುಗುಂಬಳ ಕಾಯಿ, ಹೂವು ಸಾಕಷ್ಟು ಪ್ರಮಾಣದಲ್ಲಿ ಚಿತ್ರದುರ್ಗ ಜಿಲ್ಲೆ ಮಾರುಕಟ್ಟೆಗೆ ಬಂದಿದೆ. ಸೂಕ್ತ ಮಾರುಕಟ್ಟೆ ಹಾಗೂ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮಳೆಯಿಂದಾಗಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆಯಿಲ್ಲ. ಹೀಗಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ದಸರಾ ಹಬ್ಬಕ್ಕೆ ಒಂದು ಕೆ.ಜಿ ಬೂದುಗುಂಬಳ 20 ರೂ.ನಿಂದ 60, 70 ರೂ.ವರೆಗೆ ಇದೆ ಎನ್ನುತ್ತಾರೆ ಬೂದುಗುಂಬಳ ಕಾಯಿ ವ್ಯಾಪಾರಸ್ಥರು.

ಹೂವು ಹಾಗೂ ಹಣ್ಣುಗಳ ದರ
ಒಂದು ಮಾರು ಸೇವಂತಿಗೆ ಹೂವು 80-100, 120 ರೂ., ಮಲ್ಲಿಗೆ ಹೂವು 100- 120 ರೂ., ಕನಕಾಂಬರ 100- 120 ರೂ., ಚೆಂಡು ಹೂವು 50, 60, 80 ರೂ. ಒಂದು ಮಾರಿಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಸುಗಂಧರಾಜ ಹೂವಿನ ಹಾರ 100, 150, 200, 500 ರೂ. ವರೆಗೆ ಮಾರಾಟ ನಡೆಯುತ್ತಿದೆ.
ಆಯುಧ ಪೂಜೆ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಹಬ್ಬಕ್ಕೆ ಏಲಕ್ಕಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಾಳೆಹಣ್ಣಿನ ದರದಲ್ಲಿ ಸ್ವಲ್ಪ ಏರಿಕೆಯಾಗಿದ್ದು, ಒಂದು ಕೆಜಿ ಬಾಳೆ ಹಣ್ಣಿಗೆ 50- 80 ರೂ.ವರೆಗೆ ಇದ್ದರೆ, ಪಚ್ಚಬಾಳೆ 30- 40 ರೂ. ಇದೆ. ಸೇಬು ಕೆಜಿಗೆ 100- 120 ರೂ., ಸೀಬೆಹಣ್ಣು ಕೆಜಿಗೆ 40- 50 ರೂ., ಕಿತ್ತಳೆ ಹಣ್ಣು 50- 60, ರೂ. ಸೇರಿದಂತೆ ಇತರೆ ಹಣ್ಣುಗಳು ವ್ಯಾಪಾರ ವಹಿವಾಟು ಭಾರಿ ಜೋರಾಗಿದೆ.
ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ನಗರ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ, ಫುಟ್ಪಾತ್ನಲ್ಲಿ ವ್ಯಾಪಾರ ತಲೆಯೆತ್ತಿವೆ. ಆದರೂ ಪ್ರಮುಖ ಮಾರುಕಟ್ಟೆಯಲ್ಲಿ ಖರೀದಿ ಆರಂಭವಾಗಿದೆ. ಮಾರುಕಟ್ಟೆಗಳು ಜನಜಂಗುಳಿಯಿಂದ ಕೂಡಿದೆ. ಮತ್ತೊಂದು ಕಡೆ ಹಬ್ಬದ ದಿನ ಕಾರ್ಮಿಕರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಸೇರಿದಂತೆ ಮತ್ತಿತರರಿಗೆ ಉಡುಗೊರೆ ನೀಡಲು ಬೇಕರಿಯ ಸಿಹಿ ತಿನಿಸುಗಳಾದ ಲಾಡು, ಮೈಸೂರ್ ಪಾಕ್, ಪೇಡಾ ಇತ್ಯಾದಿ ತಿನಿಸುಗಳ ಖರೀದಿಯ ಭರಾಟೆ ಜೋರಾಗಿ ಕಂಡುಬಂತು.

ಕಚೇರಿಗಳಿಗೆ ಪೂಜೆ
ಗುರುವಾರ, ಶುಕ್ರವಾರ ಸರಕಾರಿ ರಜೆ ಇರುವುದರಿಂದ ಬಹುತೇಕ ಸರ್ಕಾರಿ ಬ್ಯಾಂಕ್ಗಳು, ಜಿಲ್ಲಾಡಳಿತ, ತಾಲೂಕು ಕಚೇರಿ, ಸೇರಿದಂತೆ ಇತರೆ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಹಾಗೂ ಸರ್ಕಾರದ ವಾಹನಗಳಿಗೆ ಬುಧವಾರ ದಿನವೇ ದಸರಾ ಪೂಜೆ ಸಲ್ಲಿಸಿದರು. ಹಿರಿಯೂರಿನ ತಾಲ್ಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಸರ್ಕಾರಿ ಮಹಿಳಾ ಸಿಬ್ಬಂದಿಗಳು ಬಣ್ಣ ಬಣ್ಣದ ರಂಗೋಲಿ ಹಾಕಿರುವುದು ಹಬ್ಬದ ವಿಶೇಷವಾಗಿತ್ತು.
ಜಿಲ್ಲೆಯಾದ್ಯಂತ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು ಜಿಲ್ಲೆಯ ಹಲವು ಭಾಗಗಳಲ್ಲಿ ಕೆರೆ, ಕಟ್ಟೆಗಳು, ಚೆಕ್ ಡ್ಯಾಂ ಭರ್ತಿಯಾಗಿವೆ. ಆದರೆ ಗುರುವಾರ ಹಬ್ಬದ ದಿನವಾಗಿರುವುದರಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಯಾವಾಗ ಬೇಕಾದರೂ ಮಳೆ ಸುರಿಯಬಹುದು. ಮಳೆ ಬಂದರೆ ಹಬ್ಬದ ದಿನವಾದ ಇಂದು ಪೂಜೆ ಪುನಸ್ಕಾರಗಳ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ.

ತರಕಾರಿ ಬೆಲೆ ಎಷ್ಟಿದೆ
ಮಳೆ ಹೆಚ್ಚು ಸುರಿದಿದ್ದರಿಂದ ತರಕಾರಿ ಬೆಳೆಗಳು ಹಾಳಾಗಿ ಹೋಗಿವೆ. ಅದರಲ್ಲೂ ಅಲ್ಪಸ್ವಲ್ಪ ಉಳಿದ ತರಕಾರಿಗಳನ್ನು ರೈತರು ಮಾರುಕಟ್ಟೆಗೆ ಕೊಂಡೊಯ್ದರೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಪಾಲಾಗುತ್ತಿದೆ ಎನ್ನಬಹುದು. ಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ ದರ ಕೆಜಿಗೆ 20-30, ಟೊಮೆಟೊ 30-35, ಬಿನ್ಸ್ 60-80, ಆಲೂಗಡ್ಡೆ 30, ಕ್ಯಾರೆಟ್ 60, ಮೆಣಸಿನಕಾಯಿ 40, ಕೊತ್ತಂಬರಿ ಸೊಪ್ಪು 5, ಪಾಲಕ್ ಸೊಪ್ಪು -10, ಮೆಂತೆ ಸೊಪ್ಪು 10, ಬೆಂಡೆಕಾಯಿ 40 ರೂ. ಚಿಲ್ಲರೆ ವ್ಯಾಪಾರದಲ್ಲಿ ತರಕಾರಿ ಮಾರಾಟ ನಡೆಯುತ್ತಿದೆ.












Click it and Unblock the Notifications