ಚಿತ್ರದುರ್ಗ; ಕಲುಷಿತ ನೀರು ಸೇವನೆ ಪ್ರಕರಣ, ಆಸ್ಪತ್ರೆಗೆ ಜಡ್ಜ್ ಭೇಟಿ
ಚಿತ್ರದುರ್ಗ, ಆಗಸ್ಟ್ 02; ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಒಬ್ಬರು ಮೃತಪಟ್ಟಿದ್ದಾರೆ, ಹಲವಾರು ಜನರು ಅಸ್ವಸ್ಥಗೊಂಡಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವರ ಯೋಗಕ್ಷೇಮ ವಿಚಾರಿಸಿದರು.
ಬುಧವಾರ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವರ ಯೋಗಕ್ಷೇಮವನ್ನು ವಿಚಾರಿಸಿದರು. ಜನರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.

ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗದ ಘಟಕಗಳಿಗೆ ತೆರಳಿ ಮಾಹಿತಿ ಪಡೆದ ಅವರು, ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು. ಘಟನೆಯಲ್ಲಿ ಮೃತಪಟ್ಟ ಮಂಜುಳಾ ಅವರಿಗೆ ಇಬ್ಬರು ಮಕ್ಕಳಿದ್ದು, ಅವರಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಅಗತ್ಯ ನೆರವು ನೀಡಲಾಗುವುದು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನೂ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಕಾನೂನಿನ ನೆರವಿನ ಭರವಸೆ; ಎಂ. ವಿಜಯ್ ಮಾತನಾಡಿ, "ಜೀವಿಸುವ ಹಕ್ಕು ಸಂವಿಧಾನಾತ್ಮಕವಾಗಿ ಎಲ್ಲರಿಗೂ ಲಭಿಸಿದೆ. ಶುದ್ಧ ಕುಡಿಯುವ ನೀರು ಪಡೆಯುವುದು ಎಲ್ಲರ ಹಕ್ಕು. ತಕ್ಷಣವೇ ಕವಾಡಿಗರ ಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ನಗರಸಭೆಗೆ ನಿರ್ದೇಶನ ನೀಡಿದ್ದೇನೆ" ಎಂದರು.
"ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಘಟನೆಯಲ್ಲಿ ಬಾಧಿತರಾದವರಿಗೆ ಸೂಕ್ತ ಕಾನೂನಿನ ನೆರವು ಸಹ ನೀಡಲಾಗುವುದು" ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸವರಾಜ ಮುಂತಾದವರು ಜೊತೆಗಿದ್ದರು.
78 ಜನರು ಅಸ್ವಸ್ಥ; ಬುಧವಾರ ಮಧ್ಯಾಹ್ನದ ಮಾಹಿತಿ ಪ್ರಕಾರ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಮೂವರ ಸ್ಥಿತಿ ಗಂಭೀರವಾಗಿದೆ.
ಘಟನೆಯಲ್ಲಿ ಮೃತಪಟ್ಟ ಮಂಜುಳಾ ಅವರ ಅಂತ್ಯಕ್ರಿಯೆಯನ್ನು ಮಾಡದೇ ಜನರು ಪರಿಹಾರ ನೀಡಬೇಕು, ನೀರಘಂಟಿಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯಂತೆ ಕೂಡಲೇ ಪರಿಹಾರ ವಿತರಣೆ ಮಾಡಬೇಕು ಎಂದು ಪಟ್ಟು ಹಿಡಿದರು.
ಮೃತ ಮಹಿಳೆ ಮಂಜುಳಾ ಅವರ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕವಾಡಿಗರಹಟ್ಟಿಗೆ ತರಲಾಯಿತು. ಆಗ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಘೋಷಣೆಗಳನ್ನು ಕೂಗಿದರು. ಘಟನೆಗೆ ಕಾರಣರಾದವರನ್ನು ಬಂಧಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನಾನಿರತ ಜನರು ಹೊಳಲ್ಕೆರೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 48ರ ಸಂಪರ್ಕ ರಸ್ತೆಯನ್ನು ಬಂದ್ ಮಾಡಲು ಮುಂದಾದರು. ಆಗ ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಚದುರಿಸಿದರು.
ಬುಧವಾರ ಬೆಳಗ್ಗೆ 11 ಗಂಟೆಯ ಬಳಿಕ ಸುಮಾರು 20 ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಎಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ 18 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 60 ಜನರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ ಜನರನ್ನು ಬಲಿಪಡೆಯಲೆಂದೇ ಬಂದ ಕಾಂಗ್ರೆಸ್ ಪಕ್ಷದ ತುಘಲಕ್ ಸರ್ಕಾರ, ಕಲುಷಿತ ನೀರು ಪೂರೈಕೆ ಮಾಡಿ ಅಮಾಯಕರ ಜೀವಗಳನ್ನು ತೆಗೆಯುತ್ತಲೇ ಇದೆ ಎಂದು ಆರೋಪಿಸಿದೆ. ಕಲುಷಿತ ನೀರು ಕುಡಿರು ಮೃತಪಟ್ಟವರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
* ಆಗಸ್ಟ್ 1 : ಚಿತ್ರದುರ್ಗದ ಕವಾಡಿಡರಹಟ್ಟಿ ಬಡವಾಣೆ. ಮಹಿಳೆ ಸಾವು, 20ಕ್ಕೂ ಹೆಚ್ಚು ಗಂಭೀರ.
* ಜುಲೈ 30 : ಬೀದರ್ನ ಬರೀದಾಬಾದ್, 14ಕ್ಕೂ ಹೆಚ್ಚು ಮಂದಿ ಅಸ್ವಸ್ಥ.
* ಜುಲೈ 17 : ತುಮಕೂರಿನ ತಾತಯ್ಯನ ಗುಡಿ, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ.
* ಜುಲೈ 03 : ಬಳ್ಳಾರಿಯ ಸಿದ್ದಾಪುರ, 45ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು.
* ಜುಲೈ 02 : ವಿಜಯನಗರದ ಬಡೀಲಡಕು ಗೊಲ್ಲರಹಟ್ಟಿ, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ
* ಜೂನ್ 27 : ಯಾದಗಿರಿಯ ಗುರುಮಠಕಲ್, 54ಕ್ಕೂ ಹೆಚ್ಚು ಮಂದಿ ಅಸ್ವಸ್ಥ.
* ಜೂನ್ 20 : ಬೀದರ್ನ ಔರಾದ್, 20ಕ್ಕೂ ಹೆಚ್ಚು ಜನ ಗಂಭೀರ ಅಸ್ವಸ್ಥ.
* ಜೂನ್ 19 : ಕಲಬುರ್ಗಿಯ ಸೇಡಂ, 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ.
* ಜೂನ್ 8 : ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿ, 118 ಜನ ಅಸ್ವಸ್ಥ.
* ಜೂನ್ 8 : ಕೊಪ್ಪಳದ ಕುಷ್ಟಗಿ, 10ವರ್ಷದ ಬಾಲಕಿ ಸಾವು.
* ಮೇ 28 : ರಾಯಚೂರಿನ ದೇವದುರ್ಗ, 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು.
* ಮೇ 26 : ರಾಯಚೂರಿನ ದೇವದುರ್ಗ, 50ಕ್ಕೂ ಹೆಚ್ಚು ಜನ ಅಸ್ವಸ್ಥ, 5 ವರ್ಷದ ಬಾಲಕ ಮೃತ.
ಪ್ರಿಯಾಂಕ್ ಖರ್ಗೆ ಅವರೇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಬುದೊಂದಿದೆ. ಅದು ನಿಮ್ಮ ಸಚಿವಾಲಯಕ್ಕೆ ಸಂಬಂಧಪಟ್ಟಿದ್ದು. ಬೇರೆ ಇಲಾಖೆಗಳಲ್ಲಿ ಮೂಗು ತೂರಿಸುವುದನ್ನು ಬಿಟ್ಟು ಮೊದಲು ಶುದ್ಧ ಕುಡಿಯುವ ನೀರು ಪೂರೈಕೆ, ಬಲಿಯಾಗುತ್ತಿರುವ ಅಮಾಯಕ ಜೀವಗಳ ಬಗ್ಗೆ ಸೊಲ್ಲೆತ್ತಲು ಸಮಯ ಕೊಡಿ ಎಂದು ಬಿಜೆಪಿ ಟೀಕೆ ಮಾಡಿದೆ.












Click it and Unblock the Notifications