ಮಗ ಮಾಡಿದ ತಪ್ಪಿಗೆ, ತಂದೆಗೆ ಥಳಿಸಿದ ಹಿರಿಯೂರು ಗ್ರಾಮಾಂತರ ಪಿಎಸ್ಐ
ಚಿತ್ರದುರ್ಗ, ಜುಲೈ 26: ಮಗ ಮಾಡಿದ ತಪ್ಪಿಗೆ ತಂದೆಯನ್ನು ಥಳಿಸಿರುವುದನ್ನು ಚಿತ್ರದುರ್ಗ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ. ಹಿರಿಯೂರು ತಾಲೂಕಿನ ಕಾತ್ರಿಕೇನಹಳ್ಳಿಯಲ್ಲಿ ಮಗ ಮಾಡಿರುವ ತಪ್ಪಿಗೆ ತಂದೆಯ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವ ಹಿರಿಯೂರು ಗ್ರಾಮಾಂತರ ಪಿಎಸ್ಐ ಅವರನ್ನು ಕೂಡಲೇ ಅಮಾನತು ಅಥವಾ ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಡಿವೈಎಸ್ಪಿ ರೋಷನ್ ಜಮೀರ್ ಅವರಿಗೆ ಮನವಿ ಮಾಡಿದ್ದಾರೆ.
Recommended Video
ನಗರದ ಪ್ರವಾಸಿ ಮಂದಿರದಲ್ಲಿ ಮಾತಾಡಿದ ಜಿ.ಪಂ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಆಗಬೇಕು. ಅದುವೇ ನ್ಯಾಯ, ಆದರೆ ತಾಲೂಕಿನ ಕಾತ್ರೀಕೆನಹಳ್ಳಿ ಗ್ರಾಮದಲ್ಲಿ ಮಗ ಮಾಡಿರುವ ತಪ್ಪಿಗೆ, ಕಾನೂನು ರೀತಿಯಲ್ಲಿ ಆತನಿಗೆ ಶಿಕ್ಷಿಸಲಿ. ಆದರೆ ಆತನ ತಂದೆ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದವರೇ ರಕ್ಷಿಸಲಿಲ್ಲವೆಂದರೆ ನ್ಯಾಯ ದೊರಕಿಸಲು ಸಾಧ್ಯವೇ ಎಂದು ಗ್ರಾಮಾಂತರ ಪಿಎಸ್ಐ ನಡೆಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಖಂಡಿಸಿದ್ದಾರೆ.

ಪಿಎಸ್ಐ ವಿರುದ್ಧ ಅಸಮಾಧಾನ
ಚಿತ್ರದುರ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮಾತನಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ವಿವಿ ಪುರ ಕ್ಷೇತ್ರದ ಜಿ.ಪಂ ಸದಸ್ಯ ಆರ್.ನಾಗೇಂದ್ರನಾಯ್ಕ್ ಮಾತನಾಡಿ, ನನ್ನ ಜಿ.ಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಖಂಡನೀಯ ಎಂದು ಪಿಎಸ್ಐ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಡಿವೈಎಸ್ಪಿ ರೋಷನ್ ಜಮೀರ್ ಅವರು ಮನವಿ ಆಲಿಸಿ ಮಾತನಾಡಿ, ಈ ಘಟನೆ ಕುರಿತು ಕೂಲಂಕೂಷವಾಗಿ ಮಾಹಿತಿ ಪಡೆಯುತ್ತೇನೆ. ನಮ್ಮ ಸಿಬ್ಬಂದಿಯಿಂದ ತಪ್ಪು ಆಗಿರುವುದು ಕಂಡುಬಂದಲ್ಲಿ ಸೂಕ್ತ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹಲ್ಲೆ ನಡೆಸಿದ ಪಿಎಸ್ಐಯನ್ನು ವರ್ಗಾವಣೆ ಮಾಡಿ
ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ತಪ್ಪು. ಅದಕ್ಕೆ ನಾವ್ಯಾರು ಬೆಂಬಲವಾಗಲಿ ಅಥವಾ ಪ್ರೋತ್ಸಾಹ ನೀಡುವುದಿಲ್ಲ. ತಪ್ಪಿತಸ್ಥ ಬೈರೇಶ್ ಎಂಬ ವ್ಯಕ್ತಿಯ ಮೇಲೆ ಕೇಸು ದಾಖಲಿಸಿ, ಶಿಕ್ಷೆ ನೀಡಲಿ. ಆದರೆ ಯಾವುದೇ ತಪ್ಪು ಮಾಡದಿರುವ ಅಮಾಯಕ, ಆತನ ತಂದೆ ಗಿರಿಸ್ವಾಮಿ ಮೇಲೆ ಗ್ರಾಮಾಂತರ ಪಿಎಸ್ಐ ಅವರು ಹಲ್ಲೆ ನಡೆಸಿರುವುದು ಹಿರಿಯೂರಿನ ಪೊಲೀಸ್ ಇಲಾಖೆಗೆ ಶೋಭೆ ತರುವುದಿಲ್ಲ. ಆದ್ದರಿಂದ ಆ ವ್ಯಕ್ತಿಗೆ ನ್ಯಾಯ ಒದಗಿಸಿ ಹಲ್ಲೆ ನಡೆಸಿದ ಪಿಎಸ್ಐಯನ್ನು ವರ್ಗಾವಣೆ ಮಾಡಿ ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದರು.

ಪಿಎಸ್ಐ ಅವರು ಹಿಗ್ಗಾಮುಗ್ಗಾ ಹೊಡೆದರು
ಸರ್, ನಾನು ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೆ. ಕಳೆದ ನಾಲ್ಕೈದು ದಿನಗಳಿಂದ ಮದ್ಯ ಮಾರಾಟ ಮಾಡಲು ಆರಂಭಿಸಿದ್ದೆ. ಆದರೆ ಶುಕ್ರವಾರ ಪೊಲೀಸರು ದಾಳಿ ನಡೆಸಿದ್ದು, ನನ್ನನ್ನು ಠಾಣೆಗೆ ಕರೆದುಕೊಂಡು ಬಂದರು. ಈ ವೇಳೆಯಲ್ಲಿ ನಾನು ನನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದೆ. ಆ ತಕ್ಷಣವೇ ನಮ್ಮ ತಂದೆ ಕೂಡಾ ಠಾಣೆಗೆ ಬಂದರು. ಈ ವೇಳೆಯಲ್ಲಿ ಪಿಎಸ್ಐ ಅವರು ಬಂದು ನಮ್ಮಿರನ್ನು ಸೇರಿಸಿ ಹಿಗ್ಗಾಮುಗ್ಗಾ ಹೊಡೆದರು ಎಂದು ಭೈರೇಶ್ ಹೇಳಿದರು.

ಏನೂ ಮಾಡದ ನಮ್ಮ ತಂದೆಯನ್ನು ಹೊಡೆಯುವುದು ನ್ಯಾಯವೇ.?
ನಮ್ಮ ಕೈ, ಕಾಲುಗಳಿಗೆ ಗಾಯವಾಗಿದ್ದು, ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವುದು ತಪ್ಪು. ನಾನು ಒಪ್ಪಿಕೊಳ್ಳುತ್ತೇನೆ, ನನಗೆ ಶಿಕ್ಷೆ ನೀಡಲಿ. ಆದರೆ ಏನೂ ಮಾಡದ ನಮ್ಮ ತಂದೆಯನ್ನು ಹೊಡೆಯುವುದು ನ್ಯಾಯವೇ.? ನಮ್ಮ ಗ್ರಾಮದಲ್ಲಿಯೇ ಕೆಲವು ಕಡೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಹಾಗಾದರೇ ಅದನ್ನು ಏಕೆ ತಡೆಯಲಿಲ್ಲ. ಇದು ಯಾವ ನ್ಯಾಯ ಎಂದು ಕಾತ್ರಿಕೇನಹಳ್ಳಿ ಗ್ರಾಮದ ಭೈರೇಶ್ ಆಸ್ಪತ್ರೆಯಲ್ಲಿ ಅಳಲು ತೊಡಿಕೊಂಡಿದ್ದಾನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ತಾ.ಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ನಗರಸಭೆ ಸದಸ್ಯ ಅಜೇಯ ಕುಮಾರ್, ಜೆಡಿಎಸ್ ಅಧ್ಯಕ್ಷ ಶಿವಪ್ರಸಾದ್ ಗೌಡ, ತಾ.ಪಂ ಸದಸ್ಯ ಮುಕುಂದ್ ಇತರರು ಒತ್ತಾಯಿಸಿದರು.












Click it and Unblock the Notifications