ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಮೇಲೆ ಡಿ.ಸುಧಾಕರ್ ಬೆಂಬಲಿಗರಿಂದ ಹಲ್ಲೆ ಆರೋಪ
ಚಿತ್ರದುರ್ಗ, ಡಿಸೆಂಬರ್ 22 : ಕಾಂಗ್ರೆಸ್ ಮುಖಂಡ ಹಾಗೂ ಎಂಎಲ್ಸಿ ಪರಾಜಿತ ಅಭ್ಯರ್ಥಿ ಬಿ.ಸೋಮಶೇಖರ್ ಕೊರಳು ಪಟ್ಟಿ ಹಿಡಿದು ಎಳೆದಾಡಿ, ಅವರ ಮೇಲೆ ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ನಡೆದಿದೆ. ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಅವರು ವೀಕ್ಷಣೆಗೆ ಧರ್ಮಪುರ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.
ವೇದಿಕೆಯಲ್ಲಿ ನಾಯಕರು ಕುಳಿತಿದ್ದಾಗ ಮಾಜಿ ಸಚಿವ ಡಿ ಸುಧಾಕರ್ ಬೆಂಬಲಿಗರು ಜೈಕಾರ ಹಾಕಿದ್ದಾರೆ. ಇತ್ತ ಬಿ. ಸೋಮಶೇಖರ್ ಅವರ ಬೆಂಬಲಿಗರು ಕೂಡ ಜೈಕಾರ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಸುಧಾಕರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಲ್ಲೆಗೊಳಗಾದ ಕಾಂಗ್ರೆಸ್ ನಾಯಕ ಬಿ. ಸೋಮಶೇಖರ್ ಅವರು ಹಾಗೂ ಅವರ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಹಿಂದೆ ಹಿರಿಯೂರು ನಗರದ ಹೊರವಲಯದಲ್ಲಿ ನಡೆದ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಪ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಸಹ ಇಬ್ಬರು ನಾಯಕರ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿತ್ತು.
ಮಾಜಿ ಸಚಿವ ಡಿ ಸುಧಾಕರ್ ಬೆಂಬಲಿಗರ ಮೇಲೂ ಸಹ ಗಲಾಟೆಯಲ್ಲಿ ಹಲ್ಲೆಯಾಗಿದೆ ಎನ್ನಲಾಗಿದ್ದು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ ಹಾಗೂ ತಿಪ್ಪೇಸ್ವಾಮಿ ಮಲ್ಲಪ್ಪನ ಹಳ್ಳಿ ಕೂಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮಶೇಖರ್ ಅವರನ್ನು ಕಾರ್ಯಕ್ರಮಕ್ಕೆ ಯಾಕೆ ಬಂದಿದ್ದಿರಾ ಎಂದು ಪ್ರಶ್ನೆ ಮಾಡಲಾಯಿತು. ಅದಕ್ಕೆ ಇದನ್ನು ಕೇಳಲು ನೀವು ಯಾರು ಎಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಧಾಕರ್ ಬೆಂಬಲಿಗರು ಸೋಮಶೇಖರ್ ವಿರುದ್ಧ ಆರೋಪಿಸಿದ್ದಾರೆ. ಅಬ್ಬಿನಹೊಳೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications