ಚಿತ್ರದುರ್ಗ; ವೇದಿಕೆಯಲ್ಲಿ ಕಿತ್ತಾಡಿಕೊಂಡ ಕಾಂಗ್ರೆಸ್ ನಾಯಕರು
ಚಿತ್ರದುರ್ಗ, ಅಕ್ಟೋಬರ್ 04; ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ಮಾಜಿ ಜಿಲ್ಲಾಧ್ಯಕ್ಷರು ನೂರಾರು ಕಾರ್ಯಕರ್ತರ ಮುಂದೆಯೇ ಕೈ ಕೈ ಮಿಲಾಯಿಸುವಂತೆ ಕಿತ್ತಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರೇಗೊಂಟನೂರು ಗ್ರಾಮದಲ್ಲಿ ನಡೆದಿದೆ.
ಈ ಘಟನೆಯಿಂದ ಜಿಲ್ಲಾ ಕಾಂಗ್ರೆಸ್ನಲ್ಲಿ ಮತ್ತೆ ಒಡಕು ಉಂಟಾಗಿರುವುದು ಎದ್ದು ಕಾಣುತ್ತಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಿರೇಗುಂಟನೂರು ಗ್ರಾಮದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ನಿಂದ ಹಮ್ಮಿಕೊಳ್ಳಲಾಗಿದ್ದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮೋತ್ಸವ ಹಾಗೂ ಮಹಾತ್ಮ ಗಾಂಧಿ ಗ್ರಾಮಸ್ವರಾಜ್ಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಜಿ. ಎಸ್. ಮಂಜುನಾಥ್ ವೇದಿಕೆಯ ಮೇಲೆಯೇ ಜಗಳಕ್ಕಿಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ವಂಚನೆ ಮಾಡಿದ್ದು, ನನಗೆ ಮೋಸ ಮಾಡಿದ್ದು ಹಾಗೂ ಸರ್ವ ಅಭ್ಯರ್ಥಿಗಳು ಸೋಲಿಗೆ ಆಂಜನೇಯ ಕಾರಣ. ಗೆಲ್ಲಿಸೋ ತಾಕತ್ತಿಲ್ಲದವರು ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಜಿ. ಎಸ್. ಮಂಜುನಾಥ್ ಆಂಜನೇಯ ವಿರುದ್ಧ ಹರಿಹಾಯ್ದಿದ್ದಾರೆ.

ಇತ್ತ ಮೈಕ್ ಹಿಡಿದು ಮಾತನಾಡಿದ ಮಾಜಿ ಸಚಿವ ಆಂಜನೇಯ ಮಾತಿನ ಭರದಲ್ಲಿ ಮತ್ತೆ ಜಗಳಕ್ಕೆ ಆರಂಭಿಸಿದರು. "ಅದೇನ್ ಮಾಡ್ತಾನೋ ನೋಡೋಣ" ಎಂದ ಆಂಜನೇಯ ಮತ್ತೆ ಜಗಳಕ್ಕೆ ಪಂಥಹ್ವಾನ ಕೊಟ್ಟರು. ಏಕಾಏಕಿ ಜಗಳಕ್ಕಿಳಿದ ಆಂಜನೇಯನ ವಿರುದ್ಧ ಜಿ. ಎಸ್. ಮಂಜುನಾಥ್ ಮುಖಾಮುಖಿ ವಾಗ್ವಾದಕ್ಕಿಳಿದರು. ಅಪರೂಪಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಇವರ ಜಗಳ ನಿಜಕ್ಕೂ ಮುಜುಗರ ತಂದೊಡ್ಡಿತು.
"ಲಿಂಗಾಯತ ಸಮುದಾಯದ ಸಾದರು ನಿನಗೆ ಮತ ಹಾಕಿದ್ದೇವೆ. ನಿನ್ನ ಗೆಲುವಿಗೆ ಎಲ್ಲರ ಶ್ರಮ ಇದೆ. ಕಾಂಗ್ರೆಸ್ನ ಮರ್ಯಾದೆ ಹಾಳು ಮಾಡಲು ಇಷ್ಟು ಸಾಕು, ಸಚಿವನಾಗಿ ನೀನು ಮಾಡಿದ್ದೇನು?. ನೀನು ಎಲ್ಲರ ಬೆನ್ನಿಗೆ ಚೂರಿ ಹಾಕಿದ್ದೆ" ಎಂದು ಏಕವಚನದಲ್ಲಿ ಮಾಜಿ ಸಚಿವರನ್ನು ಮಂಜುನಾಥ್ ನಿಂದಿಸಿದರು.
ಇತ್ತ ಆಂಜನೇಯ ಜಗಳ ಸುಧಾರಿಸುವ ಬದಲು ಬೆಂಕಿಗೆ ತುಪ್ಪ ಸುರಿದು ಯಡವಟ್ಟು ಮಾಡಿದ್ದು ಒಂದು ಕಡೆಯಾದರೆ ಕೆಲ ಕೈ ನಾಯಕರ ಹಿಂಬಾಲಕರು ವೇದಿಕೆ ಹತ್ತಿ ಇನ್ನೂ ಜಗಳ ಬಿಡಿಸುವ ಬದಲು ಅದನ್ನು ಮತ್ತಷ್ಟು ದೊಡ್ಡದು ಮಾಡಿದರು. ನಾಯಕರ ಜಗಳಕ್ಕೆ ಅಲ್ಲಿ ನೆರೆದಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೇಸರ ಹೊರಹಾಕಿದರು.
ಇನ್ನೂ ವೇದಿಕೆಯ ಮೇಲೆ ನಡೆದ ಜಟಾಪಟಿಗೆ ಮಾಜಿ ಸಂಸದ ಬಿ. ಎನ್. ಚಂದ್ರಪ್ಪ, ಜಿಲ್ಲಾಧ್ಯಕ್ಷರಾದ ತಾಜ್ ಪೀರ್, ಕಾರ್ಯಾಧ್ಯಕ್ಷರಾದ ಹಾಲೇಶ್ ಮತ್ತು ಇತರೆ ಘಟಕಗಳ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿಯಾದರು.












Click it and Unblock the Notifications