ಬೌನ್ಸರ್ಗಳ ಮೂಲಕ ಶಾಸಕರಿಗೆ ಬೆದರಿಕೆ ಹಾಕಿದ ಗುತ್ತಿಗೆದಾರ!
ಚಿತ್ರದುರ್ಗ, ಡಿಸೆಂಬರ್ 27: ಗುತ್ತಿಗೆದಾರನೊಬ್ಬ ಶಾಸಕರ ಮುಂದೆ ಬೌನ್ಸರ್ಗಳನ್ನು ಬಿಟ್ಟು ಬೆದರಿಕೆ ಹಾಕಲು ಯತ್ನಿಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಐವರು ಬೌನ್ಸರ್ಗಳ ವಿರುದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಿತ್ರದುರ್ಗದ ಬಿಜೆಪಿ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ ಅವರಿಗೆ ಬೆದರಿಕೆ ಹಾಕಲು ಪ್ರಯತ್ನ ನಡೆಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗು ಅರಣ್ಯ ಇಲಾಖೆ ಅನುಮತಿಯನ್ನೇ ಪಡೆಯದೆ ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಗುತ್ತಿಗೆದಾರ ಈ ಕೆಲಸ ಮಾಡಿದ್ದಾನೆ.
ಶಾಸಕರಿಗೆ ಪ್ರಭಾವಿ ರಾಜಕಾರಣಿಗಳು, ಸಚಿವರಿಂದ ಒತ್ತಡ ಹಾಕಿಸಿದ್ದು ಮಾತ್ರವಲ್ಲದೇ ರಸ್ತೆ ಹಾಳಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ ಶಾಸಕರ ಎದುರು ಬೌನ್ಸರ್ಗಳನ್ನು ಬಿಟ್ಟು ಬೆದರಿಕೆ ಹಾಕಲು ಯತ್ನಿಸಿದ್ದಾನೆ. ಪೊಲೀಸರು ಸ್ಥಳದಲ್ಲಿದ್ದ ಕಾರಣ ಬೌನ್ಸರ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಸ್ತೆ ಹಾಳಾಗುತ್ತಿರುವ ಬಗ್ಗೆ ಚಿತ್ರದುರ್ಗ ತಾಲೂಕಿನ ಇಂಗಳದಾಲಕು ಲಂಬಾಣಿಹಟ್ಟಿ ಗ್ರಾಮಸ್ಥರು ಶಾಸಕರಿಗೆ ದೂರು ನೀಡಿದ್ದರು. ಸ್ಥಳ ಪರಿಶೀಲನೆಗೆ ತೆರಳಿದ್ದ ಜಿ. ಹೆಚ್. ತಿಪ್ಪಾರೆಡ್ಡಿ, ಗುತ್ತಿಗೆದಾರನ್ನು ಸ್ಥಳಕ್ಕೆ ಕರೆಸಿದರು. ಈ ವೇಳೆ ಐವರು ಬೌನ್ಸರ್ಗಳನ್ನು ಆತ ಕರೆದುಕೊಂಡು ಬಂದಿದ್ದ.
ಗುತ್ತಿಗೆದಾರ ಚಂದ್ರಶೇಖರ್ ಎಂಬಾತ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿಗಳ ಮಕ್ಕಳು ಹಾಗೂ ಅರಣ್ಯ ಇಲಾಖೆ ಸಚಿವ ಆನಂದ್ ಸಿಂಗ್ ಅವರಿಂದಲೂ ಒತ್ತಡ ಹಾಕುವ ಪ್ರಯತ್ನ ಮಾಡಿದ್ದಾನೆ. ಆದರೆ, ಒತ್ತಡಕ್ಕೆ ಮಣಿಯದ ಶಾಸಕ ತಿಪ್ಪಾರೆಡ್ಡಿ ಅವರು, ಐದಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ರಸ್ತೆ ಹಾಳಾಗಿದೆ, ಅನುಮತಿ ಪಡೆಯದೇ ಮಣ್ಣು ಸಾಗಾಟ ನಡೆಯುತ್ತಿದೆ, ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರಬೇಕೆ? ಎಂದು ಪ್ರಶ್ನಿಸಿದರು.

ಈ ವೇಳೆ ಬೌನ್ಸರ್ಗಳು ಸ್ಥಳಕ್ಕೆ ಆಗಮಿಸಿದರು. ಆಗ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ತಿಪ್ಪಾರೆಡ್ಡಿ ಅವರು ಪೊಲೀಸರ ಬಳಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಬೌನ್ಸರ್ಗಳು ನನ್ನ ಜೊತೆ ಶೂಟಿಂಗ್ಗೆ ಬಂದಿದ್ದರು ಎಂದು ಸಹ ಗುತ್ತಿಗೆದಾರ ಹೇಳಿದ್ದಾನೆ.
ಪಿಎನ್ ಸಿ ಕಂಪನಿಯ ಉಪಗುತ್ತಿಗೆದಾರ ಚಂದ್ರಶೇಖರ್ ಹಾಗೂ ಜೊತೆಯಲ್ಲಿ ಬೆದರಿಕೆ ಹಾಕಲು ಕರೆತಂದಿದ್ದ ಐವರು ಬೌನ್ಸರ್ಗಳ ವಿರುದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.












Click it and Unblock the Notifications