Vani Vilasa Sagara Dam: ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಡ್ಯಾಂ ಕಡೆ ಮುಖ ಮಾಡಿದ ಭದ್ರೆ
Vani Vilasa Sagara Dam: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಕಾರ್ಯ ಭಾನುವಾರ (ಆಗಸ್ಟ್ 04) ರಾತ್ರಿ 8:30ರ ಸಮಯಕ್ಕೆ ಆರಂಭಗೊಂಡಿದೆ. ಹಾಗಾದರೆ ಎಷ್ಟು ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭದ್ರಾ ಜಲಾಶಯದಿಂದ ವಿವಿ ಸಾಗರ ಡ್ಯಾಂಗೆ ಪ್ರತಿದಿನ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಬೆಟ್ಟದ ತಾವರೆಕೆರೆ ಲಿಫ್ಟ್ ಮೂಲಕ ವೈ ಜಂಕ್ಷನ್ ಕಾಲುವೆ ಮೂಲಕ ನೀರು ವೇದಾವತಿ ನದಿ ಸೇರಿಕೊಂಡು ವಿವಿ ಸಾಗರ ಡ್ಯಾಂ ತಲುಪಲಿದೆ. ಡ್ಯಾಂನಿಂದ 2 ಟಿಎಂಸಿ ನೀರನ್ನು ಸುಮಾರು ಮೂರು ತಿಂಗಳುಗಳ ಕಾಲ ಈ ಕಾಲುವೆ ಮೂಲಕ ವಿವಿ ಸಾಗರ ಜಲಾಶಯ ಸೇರಲಿದೆ.

ವಾಣಿ ವಿಲಾಸ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 114.65 ಅಡಿ ಇದೆ. ಮೂರು ತಿಂಗಳುಗಳ ಕಾಲ ಭದ್ರಾ ನೀರು ಹರಿದು ಬಂದರೆ, ಜಲಾಶಯದ ನೀರಿನ ಮಟ್ಟ 120 ಅಡಿಗೆ ತಲುಪುವ ಸಾಧ್ಯತೆ ಇರುತ್ತದೆ. ಮತ್ತೊಂದು ಕಡೆ ಮಳೆ ಹೆಚ್ಚಾಗಿ ನೀರು ಹರಿದು ಬಂದು 130 ಅಡಿ ದಾಟಿದರೆ, ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. 89 ವರ್ಷಗಳ ಬಳಿಕ ಡ್ಯಾಂ 2022ರಲ್ಲಿ ಕೋಡಿ ಬಿದ್ದು ಇತಿಹಾಸ ನಿರ್ಮಿಸಿತ್ತು.
ಹಿರಿಯೂರಿನಿಂದ 20 ಕಿಲೋ ಮೀಟರ್ ದೂರದ ವಾಣಿವಿಲಾಸ ಪುರ ಬಳಿ ಕಟ್ಟಲಾಗಿರುವ ಮಾರಿಕಣಿವೆ ಜಲಾಶಯದ ಎತ್ತರ 50 ಮೀಟರ್, ಉದ್ದ 405 ಮೀಟರ್ ಇದೆ. ಇನ್ನು 135 (30 ಟಿಎಂಸಿ) ಅಡಿಗಳವರೆಗೆ ನೀರು ಸಂಗ್ರಹವಾಗುತ್ತದೆ. ಹಿರಿಯೂರು ತಾಲ್ಲೂಕಿನ ಸುಮಾರು 1/3 ರಷ್ಟು ರೈತರ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲಾಗುತ್ತದೆ.
(ಸುಮಾರು 12,000 ಹೆಕ್ಟೇರ್ ಪ್ರದೇಶ) ಜೊತೆಗೆ ಹಿರಿಯೂರು, ಚಳ್ಳಕೆರೆ ಮತ್ತು ಚಿತ್ರದುರ್ಗ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಸಿಮೆಂಟ್ ಉಪಯೋಗ ಇಲ್ಲದೆ, ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದೆ. ಒಂದು ಬದಿಯಿಂದ ನೋಡಿದರೆ 'ಭಾರತದ ಭೂಪಟ'ವನ್ನು ಓಲುವ ದೃಶ್ಯ ಕಾಣುತ್ತದೆ.
ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 1933ರಲ್ಲಿ 135.25 ಅಡಿ ನೀರು ಸಂಗ್ರಹ ಆಗಿದ್ದು, 1934ರಲ್ಲಿ 130.24 ಅಡಿ ನೀರು ಹರಿದು ಬಂದಿತ್ತು. 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ ನೀರು ಸಂಗ್ರಹ ಆಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು.
ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ಎಂಬ ನದಿಯನ್ನು ಸೇರಿ ಅವು ಮುಂದೆ ವೇದಾವತಿ ನದಿಯಾಗಿ ಹರಿಯುತ್ತದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ. ಇನ್ನೂ ವಾಣಿವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ.












Click it and Unblock the Notifications