ಹುಳು ಹಿಡಿದ ಅಕ್ಕಿ, ಬೇಳೆಯಲ್ಲೇ ಬಿಸಿಯೂಟ; ಶಾಲೆಗೆ ಬೀಗ ಜಡಿದ ಬಗ್ಗನಾಡು ಗ್ರಾಮಸ್ಥರು
ಚಿತ್ರದುರ್ಗ, ಫೆಬ್ರವರಿ 05: ಹುಳು ಹಿಡಿದ ಅಕ್ಕಿ, ಬೇಳೆಯನ್ನು ಬಳಸಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವುದನ್ನು ಖಂಡಿಸಿ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಗ್ಗನಾಡು ಗ್ರಾಮದಲ್ಲಿ ನಡೆದಿದೆ. ಅಡುಗೆ ಸಿಬ್ಬಂದಿ ಮತ್ತು ಶಾಲಾ ಶಿಕ್ಷಕಿ ಈ ವಿಷಯದಲ್ಲಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಶಾಲೆಯಲ್ಲಿ ಕಳೆದ ಒಂದು ವಾರದಿಂದ ಹುಳ ಹಿಡಿದಿರುವ ಅಕ್ಕಿ, ಬೇಳೆ ಬಳಸಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ಇಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಅನ್ನದಲ್ಲಿ ಹುಳುಗಳು, ಕಲ್ಲುಗಳು
ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಸುಮಾರು 126 ಮಕ್ಕಳಿದ್ದಾರೆ. ಈ ಮಕ್ಕಳಿಗೆ ಶಾಲೆಯಲ್ಲಿ ನೀಡುವ ಬಿಸಿಯೂಟದ ಅನ್ನದಲ್ಲಿ ಹುಳುಗಳು, ಕಲ್ಲುಗಳು ಸಿಗುತ್ತವೆ. ಇದನ್ನು ಮಕ್ಕಳು ಶಾಲಾ ಶಿಕ್ಷಕರ ಗಮನಕ್ಕೆ ತಂದರೆ, "ತಿನ್ನಂಗಿದ್ರೆ ತಿನ್ನಿ, ಇಲ್ಲಂದ್ರೆ ಮನೆಗೆ ಹೋಗಿ. ನೀವೇನು ಮನೆಯಲ್ಲಿ ದಿನಾ ಹೀಗೇ ತಿಂತೀರಾ?, ಮನೆಗೆ ಹೋಗಿ ಗೊಜ್ಜು ಮುದ್ದೆ ತಿನ್ನಿ" ಅಂತ ಗದರಿಸುತ್ತಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. "ಅನ್ನ ಚೆನ್ನಾಗಿದ್ದರೆ ಸಾಂಬಾರ್ ಚೆನ್ನಾಗಿರಲ್ಲ. ಸಾಂಬಾರ್ ಚೆನ್ನಾಗಿದ್ದರೆ ಅನ್ನ ಚೆನ್ನಾಗಿರುವುದಿಲ್ಲ" ಎಂದು ಓರ್ವ ವಿದ್ಯಾರ್ಥಿನಿ ಆರೋಪಿಸಿದ್ದಾರೆ.

"ಕಳಪೆ ಊಟ ಕೊಡಬೇಡಿ ಅಂದ್ರೂ ಕೇಳಲ್ಲ"
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮುಕುಂದಪ್ಪ ಮಾತನಾಡಿ, ಇಂತಹ ಕಳಪೆ ಊಟವನ್ನು ಮಕ್ಕಳಿಗೆ ಕೊಡಬೇಡಿ. ಪರೀಕ್ಷೆ ಸಮಯದಲ್ಲಿ ಈ ಆಹಾರ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಒಂದು ವಾರದಿಂದ ಹೇಳುತ್ತಾ ಬಂದಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಶಾಲಾ ಶಿಕ್ಷಕರು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಮಾಡುವ ಸಂದರ್ಭ ಒದಗಿಬಂದಿದೆ ಎಂದರು.

ಈ ಊಟ ಕೊಡಲು ಮನಸ್ಸಾದರೂ ಹೇಗೆ ಬಂತು?
ಗ್ರಾಮ ಪಂಚಾಯತಿ ಸದಸ್ಯ ಕರಿಯಣ್ಣ ಮಾತನಾಡಿ, "ಇಲಾಖೆಯಿಂದ ಸರಬರಾಜು ಮಾಡಿರುವ ಬೇಳೆ, ಅಕ್ಕಿ ಅತ್ಯಂತ ಕಳಪೆಯಾಗಿದ್ದು, ಹುಳಗಳು ಹರಿದಾಡುತ್ತಿವೆ. ಇಂತಹ ಪದಾರ್ಥಗಳಿಂದ ಬಿಸಿಯೂಟ ತಯಾರಿಸಲು ಇವರಿಗೆ ಮನಸ್ಸಾದರೂ ಹೇಗೆ ಬಂತು" ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಬಿಇಓ ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಹೊಸ ಆಹಾರ ಪದಾರ್ಥ ಕೊಡುವುದಾಗಿ ಭರವಸೆ
ಪ್ರತಿಭಟನೆ ವಿಷಯ ತಿಳಿದ ಸಿಆರ್ ಪಿ ರಂಗಸ್ವಾಮಿ ಅವರು ಶಾಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು. ನಾಳೆಯಿಂದ ಶಾಲೆಗೆ ಹೊಸ ಆಹಾರ ಪದಾರ್ಥಗಳನ್ನು ಕೊಡುವುದಾಗಿ ಭರವಸೆ ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಮಯ್ಯನವರು, "ಈಗಾಗಲೇ ನಮ್ಮ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಾನು ನಾಳೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ" ಎಂದು ಭರವಸೆ ನೀಡಿದರು.












Click it and Unblock the Notifications