ಗುಡಿಸಲು ಮುಕ್ತ ಆಗುವತ್ತ ಹಿರಿಯೂರು ತಾಲೂಕು: 4448 ಮನೆ ಮಂಜೂರು
ಚಿತ್ರದುರ್ಗ, ಸೆಪ್ಟೆಂಬರ್ 18: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅಲೆಮಾರಿ, ಅರೆ ಅಲೆಮಾರಿ ವರ್ಗಕ್ಕೆ ರಾಜ್ಯ ಸರ್ಕಾರದಿಂದ 4,448 ಮನೆಗಳು ಮಂಜೂರು ಮಾಡಲಾಗಿದ್ದು, ಇದರಿಂದ ಹಿರಿಯೂರು ತಾಲ್ಲೂಕು ಗುಡಿಸಲು ಮುಕ್ತ ತಾಲ್ಲೂಕಾಗಲಿದೆ. ಹಿರಿಯೂರು ತಾಲ್ಲೂಕಿಗೆ ಇಷ್ಟೊಂದು ಮನೆ ಮಂಜೂರು ಮಾಡಿಸಿಕೊಂಡು ಬರಲು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಶ್ರಮ ಮಹತ್ವದ್ದಾಗಿದೆ.
ತಾಲೂಕಿನಲ್ಲಿ ಬಹುತೇಕ ಅಲೆಮಾರಿ, ಅರೆ ಅಲೆಮಾರಿ ವರ್ಗಕ್ಕೆ ಸೇರಿದವರು ಹೆಚ್ಚಾಗಿದ್ದು, ಈ ವರ್ಗದ ಜನರು ಮನೆಗಳಿಲ್ಲದೆ ಇಂದಿಗೂ ಸಹ ಗುಡಿಸಿಲಿನಲ್ಲಿ ವಾಸಮಾಡುತ್ತಿರುವುದು ಕಾಣಬಹುದಾಗಿದೆ. ಅದರಲ್ಲೂ ಬಹುತೇಕ ಗೊಲ್ಲರಹಟ್ಟಿಗಳಲ್ಲಿ ಗುಡಿಸಲು ಸೂರುಗಳು ಹೆಚ್ಚಾಗಿ ಕಂಡುಬರುತ್ತವೆ.
ಮನೆ ಕಟ್ಟಿಕೊಳ್ಳುವ ಕಾಲ ಸನ್ನಿಹಿತವಾಗಿದೆ
ಇದೀಗ ಹಿರಿಯೂರು ತಾಲೂಕಿಗೆ ಮನೆಗಳು ಮಂಜೂರಾಗಿದ್ದು, ಬಹಳ ದಿನಗಳಿಂದ ಸೂರು ಕಟ್ಟಿಸಿಕೊಳ್ಳಲು ಕನಸು ಕಾಣುತ್ತಿದ್ದ ಬಡ ಜನರು ಹಾಗೂ ನಿರ್ಗತಿಕರು ಮನೆ ಕಟ್ಟಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎನ್ನಬಹುದು. ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿಗೆ 4448 ಮನೆಗಳು ಮಂಜೂರಾಗಿವೆ.
ಹಿರಿಯೂರು: ಪೋಷಕರ ಬಳಿ ಮಗು ಸೇರಿಸಿ, ಮಾನವೀಯತೆ ಮೆರೆದ ಶಾಸಕಿ ಕೆ.ಪೂರ್ಣಿಮಾ
ದೇವರಾಜು ಅರಸು ವಸತಿ ಯೋಜನೆ ಮನೆ ಮಂಜೂರು
ಇನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ 945, ಶಿರಾ ತಾಲ್ಲೂಕಿಗೆ 2692, ಗುಬ್ಬಿ ತಾಲ್ಲೂಕಿಗೆ 3710, ಪಾವಗಡ ತಾಲ್ಲೂಕಿಗೆ 2939, ಕೊರಟಗೆರೆ ತಾಲ್ಲೂಕಿಗೆ 770, ತಿಪಟೂರು ತಾಲ್ಲೂಕಿಗೆ 745, ತುರುವೇಕೆರೆ ತಾಲ್ಲೂಕಿಗೆ 792, ಕುಣಿಗಲ್ ತಾಲ್ಲೂಕಿಗೆ 728 ಸೇರಿ ಒಟ್ಟು 20,236 ಮನೆಗಳು ಮಂಜೂರಾಗಿದ್ದು, ದೇವರಾಜು ಅರಸು ವಸತಿ ಯೋಜನೆಯಡಿಯಲ್ಲಿ ಮನೆ ಕಲ್ಪಿಸಲು ರಾಜೀವ್ ಗಾಂಧಿ ನಿಗಮಕ್ಕೆ ಅನುಮೋದನೆ ನೀಡಲಾಗಿದೆ.
7 ಸಾವಿರ ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯ
ಜೂನ್ 26 ರಂದು ವಸತಿ ಸಚಿವ ವಿ.ಸೋಮಣ್ಣ ಚಿತ್ರದುರ್ಗಕ್ಕೆ ಭೇಟಿ ನೀಡಿದಾಗ ಶಾಸಕಿ ಕೆ.ಪೂರ್ಣಿಮಾ ಹಿರಿಯೂರು ನಗರಕ್ಕೆ 2000 ಮತ್ತು ಗ್ರಾಮೀಣ ಪ್ರದೇಶಕ್ಕೆ 5000 ಒಟ್ಟು 7 ಸಾವಿರ ಮನೆಗಳನ್ನು ಮಂಜೂರು ಮಾಡುವಂತೆ ಸಚಿವರನ್ನು ಒತ್ತಾಯಿಸಿದ್ದರು. ಇದರಂತೆ ತಾಲೂಕಿಗೆ 4448 ಮನೆಗಳು ಮಂಜೂರಾಗಿವೆ.
ಹಿರಿಯೂರು ಗುಡಿಸಲು ಮುಕ್ತ ತಾಲ್ಲೂಕು
ಹಿರಿಯೂರು ತಾಲೂಕಿನ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗಕ್ಕೆ ಮನೆಗಳು ಮಂಜೂರಾಗಿದ್ದು, ಹಿರಿಯೂರು ತಾಲೂಕನ್ನು ಗುಡಿಸಲು ಮುಕ್ತ ತಾಲ್ಲೂಕನ್ನಾಗಿ ಮಾಡಲು ನಾನು ಬದ್ಧಳಾಗಿದ್ದೇನೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಭರವಸೆ ನೀಡಿದರು.
ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಹಾಗೂ ತಾಲೂಕಿನಲ್ಲಿ ಇತರೆ ವರ್ಗಗದ ಜನರುಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಇರುತ್ತದೆ. ಹಿರಿಯೂರು ತಾಲ್ಲೂಕನ್ನು ಗುಡಿಸಲು ಮುಕ್ತ ತಾಲ್ಲೂಕನ್ನಾಗಿ ಮಾಡುವುದೇ ನನ್ನ ಗುರಿ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.