1 ರಿಂದ 5ನೇ ತರಗತಿ ಆರಂಭಿಸುವುದಿಲ್ಲ; ಸಚಿವ ಸುರೇಶ್ ಕುಮಾರ್
ಚಿತ್ರದುರ್ಗ, ಜನವರಿ 20: "ಒಂದರಿಂದ ಐದನೇ ತರಗತಿಗಳನ್ನು ಆರಂಭ ಮಾಡುವುದಿಲ್ಲ. ನಲಿಕಲಿ ಮತ್ತು ರೇಡಿಯೋ ಮೂಲಕ ಪಾಠ ಕಲಿಸಲಾಗುತ್ತದೆ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಬುಧವಾರ ಚಿತ್ರದುರ್ಗದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, "ಶಾಲೆಗೆ ಹಾಜರಾತಿ ಕಡ್ಡಾಯವಿಲ್ಲ, ನಾವು ಈ ಸರಿ ಅದನ್ನು ಪರೀಕ್ಷೆಯ ಗಣನೆಗೆ ತೆಗೆದುಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ದ್ವಿತೀಯ ಪಿಯುಸಿ ಮತ್ತು 10 ತರಗತಿ ಮಕ್ಕಳಿಗೆ ದಿನ ಪೂರ್ತಿ ಶಾಲೆ ನಡೆಸಲು ಅನುಮತಿ ಕೋರಿದ್ದಾರೆ. ಪ್ರಥಮ ಪಿಯುಸಿ, ಎಂಟನೇ ತರಗತಿ ಹಾಗೂ ಒಂಬತ್ತನೆಯ ತರಗತಿಗಳನ್ನು ಆರಂಭಿಸಬೇಕಾಗಿದೆ. ಹಾಗಾಗಿ ತಾಂತ್ರಿಕ ಸಲಹಾ ಸಮಿತಿ ಜೊತೆ ಮಾತನಾಡಿ ನಂತರ ತೀರ್ಮಾನಿಸಲಾಗುವುದು" ಎಂದರು.

"ಶಾಲೆಗೆ ಕಡ್ಡಾಯವಾಗಿ ಬರಬೇಕು ಎನ್ನುವ ಶಾಲೆಗಳ ಬಗ್ಗೆ ಗಮನಕ್ಕೆ ಬರಬೇಕು, ಆಗ ಕ್ರಮ ತೆಗೆದುಕೊಳ್ಳುತ್ತೇವೆ. ಖಾಸಗಿ ಶಾಲಾ ಶುಲ್ಕ ಪಾವತಿ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಚರ್ಚಿಸಿದ್ದಾರೆ. ಚರ್ಚೆಯ ವರದಿ ನಮಗೆ ಇಂದು ಬಂದಿದೆ. ವರದಿಯನ್ನು ಪರಿಶೀಲಿಸಿ ಪೋಷಕರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಈಗ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ. 1 ರಿಂದ 5ನೇ ತರಗತಿಯನ್ನು ಆರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.












Click it and Unblock the Notifications