ಪಕ್ಷ ಯಡಿಯೂರಪ್ಪಗೆ ಸಾಕಷ್ಟು ಅವಕಾಶ ನೀಡಿದೆ; ಸಿ. ಟಿ. ರವಿ
ಚಿಕ್ಕಮಗಳೂರು, ಜುಲೈ 25; "ಪಕ್ಷ ಯಡಿಯೂರಪ್ಪ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಇದಕ್ಕಾಗಿಯೇ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಕರ್ನಾಟಕ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ" ಎಂದು ಸಿ. ಟಿ. ರವಿ ಹೇಳಿದರು.
ಭಾನುವಾರ ಗೋವಾದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮಾಧ್ಯಮಗಳ ಜೊತೆ ಮಾತನಾಡಿದರು. "ಯಡಿಯೂರಪ್ಪನವರು ಜನಪ್ರಿಯ ನಾಯಕರು ಅವರ ಜನಪ್ರಿಯತೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ, ಅವರೊಬ್ಬ ಉತ್ತಮ ನಾಯಕ" ಎಂದರು.
"ವಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಇದು ಕಾಂಗ್ರೆಸ್, ಜನತಾದಳವರು ಅವಕಾಶ ನೀಡಿಲ್ಲ ಬಿಜೆಪಿ ಪಕ್ಷ ಈ ಎಲ್ಲಾ ಅವಕಾಶ ನೀಡಿದ್ದು, ಬಿಜೆಪಿ ಕಾರ್ಯಕರ್ತನಿಂದ ಹಿಡಿದು ನಾಯಕನಾಗಿ ಬೆಳೆಯುವಂತೆ ಅವಕಾಶ ನೀಡಿದೆ" ಎಂದು ಹೇಳಿದರು.

"ಎಲ್ಲಾ ಕಾರ್ಯಕರ್ತರ ಶಕ್ತಿಯಿಂದ ಇವತ್ತು ಬಿಜೆಪಿ ಪಕ್ಷಕ್ಕೆ ಶಕ್ತಿ ಬಂದಿದೆ. ಯಡಿಯೂರಪ್ಪ ಬಗ್ಗೆ ಸಚಿವರು, ಶಾಸಕರು ಬೇಸರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ನೋಡಿಕೊಳ್ಳುತ್ತಾರೆ" ಎಂದು ಸ್ಪಷ್ಟಪಡಿಸಿದರು.
"ರಾಜಕಾರಣದಲ್ಲಿ ಇವೆಲ್ಲವೂ ಆಗುತ್ತವೆ. ಹೋಗುತ್ತವೆ. ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ" ಎಂದು ಸಿ. ಟಿ. ರವಿ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಗೋವಾ ಪ್ರವಾದಲ್ಲಿದ್ದಾರೆ. ಸಿ. ಟಿ. ರವಿ ಸಹ ಅವರ ಜೊತೆ ರಾಜ್ಯ ಪ್ರವಾಸವನ್ನು ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಸಿ. ಟಿ. ರವಿ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ರಾಜೀನಾಮೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications