ಸಿ.ಟಿ.ರವಿ 20 ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ?: ಚಿಕ್ಕಮಗಳೂರಿನಲ್ಲಿ ಮತದಾರರ ಪ್ರಶ್ನೆ
ಚಿಕ್ಕಮಗಳೂರು ಕ್ಷೇತ್ರದಲ್ಲಿ 20 ವರ್ಷಗಳಿಂದ ಶಾಸಕರಾಗಿರುವ ಸಿ.ಟಿ.ರವಿ ಏನು ಮಾಡಿದ್ದಾರೆ ಎಂದು ಉದ್ದೇಬೋರನಹಳ್ಳಿ ಮತದಾರರು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು, ಮಾರ್ಚ್, 14: ಕಾಫಿನಾಡಿನಲ್ಲಿ ಚುನಾವಣೆ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಪ್ರಚಾರಕ್ಕೆ ಆಗಮಿಸಿದ್ದ ರಾಜಕೀಯ ನಾಯಕರಿಗೆ ಉದ್ದೇಬೋರನಹಳ್ಳಿ ಮತದಾರರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೇ ಚಿಕ್ಕಮಗಳೂರು ಕ್ಷೇತ್ರದಲ್ಲಿ 20 ವರ್ಷಗಳಿಂದ ಶಾಸಕರಾಗಿರುವ ಸಿ.ಟಿ.ರವಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹಾಗೂ ಶಾಸಕ ಸಿ.ಟಿ. ರವಿ ಬಾಮೈದ ಸುದರ್ಶನ್ ಚುನಾವಣಾ ಪ್ರಚಾರಕ್ಕಾಗಿ ಉದ್ದೇಬೋರನಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಮತದಾರರು, ಸಿ.ಟಿ.ರವಿ 20 ವರ್ಷದಿಂದ ಶಾಸಕರಾಗಿದ್ದಾರೆ. ಆದರೆ ಲಿಂಗಾಯತರ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಅಭಿವೃದ್ಧಿ ಮಾಡಿಲ್ಲ
ಚುನಾವಣೆ ಬಂದಿದೆ ಎಂದು ಈಗ ಬಂದಿದ್ದೀರಾ? ಇಷ್ಟು ವರ್ಷ ಎಲ್ಲಿಗೆ ಹೋಗಿದ್ದೀರಿ. ನಮ್ಮ ಊರನ್ನು ಅಭಿವೃದ್ಧಿ ಮಾಡಲು ಸಿ.ಟಿ. ರವಿಗೆ 20 ವರ್ಷ ಸಾಕಾಗಿಲ್ಲವಾ? ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಪ್ರಚಾರದ ವರಸೆಯನ್ನೂ ಜೋರು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ಟಿ. ರವಿ ಸಂಬಂಧಿಗೆ ಮತದಾರರಿಂದ ಕ್ಲಾಸ್
ಸಿ.ಟಿ.ರವಿ ಸಂಬಂಧಿ ಸುದರ್ಶನ್, ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಗ್ರಾಮ ಮಟ್ಟದಲ್ಲಿ ಸಭೆ ಆರಂಭಿಸಿದ್ದಾರೆ. ಕಳೆದ ರಾತ್ರಿ ಉದ್ದೇಬೋರನಹಳ್ಳಿಗೆ ಹೋದಾಗ ಮತದಾರರು ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡ ಹಿನ್ನೆಲೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಘಟಕ ಕೂಡ ಮುಜುಗರಕ್ಕೀಡಾಗಿದೆ.
ಸೀರೆಗಳನ್ನ ಸುಟ್ಟು ಹಾಕಿದ್ದ ಜನ
ಕಳೆದ ಎಂಟತ್ತು ದಿನಗಳ ಹಿಂದೆಯಷ್ಟೇ ಭಕ್ತರಹಳ್ಳಿಯಲ್ಲಿ ಬಿಜೆಪಿಯವರು ನೀಡಿದ ಸೀರೆಯನ್ನು ಮತದಾರರು ನಡುರಸ್ತೆಯಲ್ಲಿ ಬೆಂಕಿ ಹಾಕಿದ್ದರು. ನಮಗೆ ಸೀರೆ ಬೇಡ, ಸೌಲಭ್ಯ ಬೇಕು ಎಂದು ಐದಾರು ಸೀರೆಗಳನ್ನು ನಡು ರಸ್ತೆಯಲ್ಲಿ ಸುಟ್ಟುಹಾಕಿದ್ದರು. ಇದೀಗ, ಪ್ರಚಾರ ಸಭೆಗೆ ಹೋದಾಗಲೂ ರಸ್ತೆಯಲ್ಲಿ ಕ್ಲಾಸ್ ತೆಗೆದುಕೊಂಡಿರುವುದು ಬಿಜೆಪಿ ವಲಯಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.












Click it and Unblock the Notifications