ಆಲ್ದೂರು ಪೊಲೀಸ್ ಠಾಣೆ ಸಮೀಪದಲ್ಲೇ ಟೊಮೆಟೊ ಕಳ್ಳತನ: ವ್ಯಾಪಾರಿ ಕಂಗಾಲು
ಚಿಕ್ಕಮಗಳೂರು, ಜುಲೈ 12: ರಾತ್ರಿ ಹೊತ್ತು ಮನೆಗಳ್ಳತನ, ಚಿನ್ನದಂಗಡಿಗೆ ಕನ್ನ ಹಾಕುತ್ತಿದ್ದ ಕಳ್ಳರು ಇದೀಗ ನೇರವಾಗಿ ತರಕಾರಿ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ, ಟೊಮೆಟೊ ಕಳ್ಳತನ ಮಾಡುತ್ತಿದ್ದಾರೆ. ಇತ್ತೀಚಿಗೆ ಟೊಮೆಟೊ ಕಳ್ಳತನ ಪ್ರಕರಣ ಒಂದಾದ ಮೇಲೊಂದು ದಾಖಲಾಗುತ್ತಿದ್ದು, ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ.
ಅಂಗಡಿಯಲ್ಲಿದ್ದ 3,000 ರೂಪಾಯಿ ಮೌಲ್ಯದ 40 ಕೆ.ಜಿ. ಟೊಮೆಟೊ ಇದ್ದ ಎರಡು ಟ್ರೇಗಳನ್ನು ಕಿಡಿಗೇಡಿಗಳು ಕದ್ದೊಯ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮೆಟೊ ಕಳ್ಳತನವಾಗಿದೆ.

ನದೀಂ ಸೋಮವಾರ ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿ ಟೊಮೆಟೊ ಸೇರಿದಂತೆ ತರಕಾರಿಗಳ ಎಲ್ಲಾ ಟ್ರೇಗಳನ್ನು ಅಂಗಡಿಯೊಳಗೆ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ ಮಂಗಳವಾರ ಬೆಳಗ್ಗೆ ಅಂಗಡಿ ತೆರೆದಾಗ ಟೊಮೊಟೊ ಮಾತ್ರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನದೀಂ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯ ಟಾರ್ಪಲ್ ಸರಿಸಿರುವುದು ಕಂಡುಬಂದಿದೆ.
ಆಲ್ದೂರು ಪೊಲೀಸ್ ಠಾಣೆಯ ಕಾಂಪೌಂಡ್ಗೆ ಹೊಂದಿಕೊಂಡಂತಿರುವ ತರಕಾರಿ ಅಂಗಡಿಯಲ್ಲಿಯೇ ಟೊಮೆಟೊ ಕಳ್ಳತನವಾಗಿದೆ. ಸಾಲ ಮಾಡಿ ತರಕಾರಿ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ನದೀಂ ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನದೀಂ ಅವರ ತರಾಕಾರಿ ಅಂಗಡಿಗೆ ಬಾಗಿಲು ಇರಲಿಲ್ಲ. ಟಾರ್ಪಲ್ ಕಟ್ಟಿ ಹೋಗುತ್ತಿದ್ದರು. ಈ ಬಗ್ಗೆ ತಿಳಿದಿದ್ದ ಖದೀಮರು ಟೊಮೊಟೊ ಟ್ರೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ನದೀಂ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಾಸನಲ್ಲಿ ಲಕ್ಷಾಂತರ ರೂ ಟೊಮೆಟೊ ಕಳ್ಳತನ
ಇನ್ನು ಇತ್ತೀಚಿಗಷ್ಟೇ ಹಾಸನದಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿದ್ದು, ಖದೀಮರು ನೇರವಾಗಿ ಟೊಮೊಟೊ ಜಮೀನಿಗೆ ಕನ್ನ ಹಾಕಿದ್ದರು. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಟೊಮೊಟೊ ಕಳ್ಳತನ ನಡೆದಿತ್ತು. ಗೋಣಿ ಸೋಮನಹಳ್ಳಿಯ ಧರಣಿ ಎನ್ನುವ ರೈತನ ಜಮೀನಿನಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮೆಟೊವನ್ನು ಕಳ್ಳರು ಕದ್ದೊಯ್ದಿದ್ದರು. ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 50 ರಿಂದ 60 ಚೀಲದಷ್ಟು ಟೊಮೆಟೊ ಕಳ್ಳತನ ಮಾಡಿ ಪರಾರಿಯಾಗಿದ್ದರು. ಘಟನೆ ಸಂಬಂಧ ಹಳೇಬೀಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.












Click it and Unblock the Notifications