ಹೊಸ ವರ್ಷ ಹಿನ್ನೆಲೆ: ಕಾಫಿನಾಡಿನ ಗಿರಿಗಳಿಗೆ ಬಂದ ಸಾವಿರಾರು ಪ್ರವಾಸಿಗರು
ಚಿಕ್ಕಮಗಳೂರು, ಜನವರಿ 1: ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಿಗರ ಸ್ವರ್ಗ ಕಾಫಿನಾಡಿನ ಗಿರಿಧಾಮಗಳು ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಶನಿವಾರ ಪ್ರವಾಸಿಗರ ದಂಡು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ಹೊಸ ವರ್ಷವನ್ನು ಕೊರೊನಾ ಮಾರ್ಗಸೂಚಿಗಳ ನಡುವೆಯೂ ಸಂಭ್ರಮದಿಂದ ಆಚರಣೆ ಮಾಡಿದರು.
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬರುವ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನ ಹಳ್ಳ, ಸಗೀರ್ ಫಾಲ್ಸ್ ಸೇರಿದಂತೆ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಭಾಗದಲ್ಲಿಯೂ ಸಹ ಶನಿವಾರ ರಾಜ್ಯ, ಹೊರ ರಾಜ್ಯಗಳಿಂದಲೂ ಸೇರಿದಂತೆ ಸಾವಿರಾರು ಜನ ಪ್ರವಾಸಿಗರು ಆಗಮಿಸಿ ಗಿರಿಪ್ರದೇಶದ ಸ್ವಚ್ಚಂದ ಪರಿಸರದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಉಳಿದಂತೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್, ದೇವರಮನೆ ಬೆಟ್ಟ, ಕುದುರೆಮುಖ, ಮಲ್ಲಂದೂರು ಗುಡ್ಡ, ಕಾಮೇನಹಳ್ಳಿ ಫಾಲ್ಸ್, ಉಕ್ಕುಂದ ಜಲಪಾತ, ಸಿರಿಮನೆ ಫಾಲ್ಸ್ ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದಾರೆ.

ಗಿರಿಭಾಗದಲ್ಲಿ ಟ್ರಾಫಿಕ್ ಜಾಮ್
ಗಿರಿಪ್ರದೇಶಕ್ಕೆ ಸಾಗುವ ರಸ್ತೆಗಳಲ್ಲಿ ಶನಿವಾರ ಇಡೀ ದಿನ ಪ್ರವಾಸಿಗರು ಟ್ರಾಫಿಕ್ ಜಾಮ್ಗೆ ಸಿಲುಕಿ ಹೈರಾಣಾದರು. ಕೈಮರ ಚೆಕ್ಪೋಸ್ಟ್ನಿಂದ ಗಿರಿಭಾಗಕ್ಕೆ 414 ದ್ವಿಚಕ್ರ ವಾಹನ, 1148 ನಾಲ್ಕು ಚಕ್ರದ ವಾಹನಗಳು(ಕಾರು) ಸೇರಿದಂತೆ 89 ಟಿಟಿ, ಮಿನಿಬಸ್ಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಗಿರಿಪ್ರದೇಶಕ್ಕೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಗಂಟೆಗೊಮ್ಮ ಟ್ರಾಫಿಕ್ ಜಾಮ್ನಲ್ಲಿ ಪ್ರವಾಸಿಗರು ಸಿಲುಕಿದರು.
ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಾಕೃತಿಕ ಸ್ಥಳಗಳಿಗೆ ಅಷ್ಟೇ ಅಲ್ಲದೇ, ಧಾರ್ಮಿಕ ಕ್ಷೇತ್ರಗಳಾದ ಹೊರನಾಡು, ಕಳಸ, ಶೃಂಗೇರಿ, ಕಿಗ್ಗಾ, ಕಲ್ಲತ್ತಿಗಿರಿ, ಅಮೃತಾಪುರ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಿಗೂ ಪ್ರವಾಸಿಗರು ಆಗಮಿಸಿ ಹೊಸ ವರ್ಷವನ್ನು ಆಚರಣೆ ಮಾಡಿದರು.

ಕೊರೊನಾ ಮಾರ್ಗಸೂಚಿ ಮರೆತ ಪ್ರವಾಸಿಗರು
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳ ಜೊತೆಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಹ ವಿಶೇಷವಾದ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಹಾಗೂ ಪ್ರವಾಸಿತಾಣಗಳ ಮೇಲೆ 600ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸುವ ಮೂಲಕ ಪೊಲೀಸ್ ಇಲಾಖೆ ನಿಗಾ ಇಟ್ಟಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾಹಿತಿ ನೀಡಿದ್ದರು. ಆದರೆ ಪ್ರವಾಸಿ ತಾಣಗಳಲ್ಲಿ ಕೊರೊನಾ ಮಾರ್ಗಸೂಚಿಗಳ ಪಾಲನೆ ಎಲ್ಲೂ ಕಂಡುಬರದಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭಕ್ತರ ದಂಡು
ಹೊಸ ವರ್ಷಾಚರಣೆ ಹಿನ್ನೆಲೆ ಹಾಸನ ಜಿಲ್ಲೆಯ ಬೇಲೂರಿನ ಐತಿಹಾಸಿಕ ಶ್ರೀಚನ್ನಕೇಶವ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಿಗ್ಗೆಯಿಂದ ಕಡಿಮೆಯಿದ್ದ ಪ್ರವಾಸಿಗರ ಸಂಖ್ಯೆ, ಮಧ್ಯಾಹ್ನದ ನಂತರ ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.












Click it and Unblock the Notifications