ಕಾಶ್ಮೀರ ಗಡಿ ಭಾಗದ ತ್ರಿತ್ವಾಲ್ ಶಾರದಾ ದೇಗುಲಕ್ಕೆ ಶೃಂಗೇರಿ ಮೂರ್ತಿ ಹಸ್ತಾಂತರ
ಚಿಕ್ಕಮಗಳೂರು,ಅಕ್ಟೋಬರ್ 6: ಕಾಶ್ಮೀರದ ಗಡಿ ಭಾಗದ ತ್ರಿತ್ವಾಲ್ ನಲ್ಲಿ ಶಾರದಾದೇವಿ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೃಂಗೇರಿಯ ಶಾರದೆ ಸನ್ನಿಧಿಯಿಂದ ವಿಜಯದಶಮಿಯ ದಿನ ಪಂಚಲೋಹ ಮೂರ್ತಿ ಹಸ್ತಾಂತರ ಕಾರ್ಯ ನಡೆದಿದೆ.
ಕಾಶ್ಮೀರದ ಸೇವ್ ಶಾರದಾ ಸಮಿತಿಯವರು ಶೃಂಗೇರಿಗೆ ಬಂದು ಪಂಚಲೋಹ ವಿಗ್ರಹ ಪಡೆದಿದ್ದಾರೆ. ಪಂಚಲೋಹದ ಮೂರ್ತಿಗೆ ಶೃಂಗೇರಿ ಜಗದ್ಗುರು ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ಪೂಜೆಯನ್ನು ನೆರವೇರಿಸಿ ಹಸ್ತಾಂತರ ಮಾಡಿದ್ದಾರೆ.
ವಿಜಯದಶಮಿಯ ಶುಭ ದಿನ ಪಂಚಲೋಹದಿಂದ ನಿರ್ಮಾಣ ಮಾಡಲಾಗಿರುವ ದೇವಿಯ ವಿಗ್ರಹವನ್ನು ಶೃಂಗೇರಿಯಲ್ಲಿ ವಿಶೇಷವಾಗಿ ಪೂಜಿ ಸಲ್ಲಿಸಿದ ಬಳಿಕ ಹಸ್ತಾಂತರ ಮಾಡಿದ್ದಾರೆ. ಸಮಿತಿಯ ಸದಸ್ಯರು ಶ್ರೀಮಠದಲ್ಲಿ ವಾಸ್ತವ್ಯ ಹೂಡಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಬುಧವಾರ ವಿಜಯದಶಮಿಯ ಶುಭ ದಿನವಾದ ಹಿನ್ನೆಲೆಯಲ್ಲಿ ಜಗದ್ಗುರುಗಳು ಪಂಚಲೋಹದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರಿಸಿದರು.
ಉಭಯ ಜಗದ್ಗುರುಗಳ ಸಾನಿಧ್ಯದಲ್ಲಿ ಕೆತ್ತನೆ ಮಾಡಿರುವ ದೇವಿಯ ವಿಗ್ರಹದ ಹಸ್ತಾಂತರ ಕಾರ್ಯವು ಅತ್ಯಂತ ಅದ್ಧೂರಿಯಾಗಿ ನಡೆಯಿತು. ಈ ಕುರಿತು ಮಾಹಿತಿ ನೀಡಿದ ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ್ ಸಮಿತಿಯ 12 ಮಂದಿ ಶೃಂಗೇರಿಗೆ ಆಗಮಿಸಿ ಪಂಚಲೋಹ ಮೂರ್ತಿಯನ್ನು ಪಡೆದಿದ್ದೇವೆ. ದೇಗುಲ ನಿರ್ಮಾಣಕ್ಕೆ 1.5 ಕೋಟಿ ರೂ ವೆಚ್ಚ ಅಂದಾಜಿಸಲಾಗಿದೆ. ಈವರೆಗೆ 1 ಕೋಟಿ ರೂ ಖರ್ಚಾಗಿದೆ. ಗರ್ಭಗುಡಿ 12X12 ವಿಸ್ತೀರ್ಣ ಇರಲಿದೆ. ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳು ಇವೆ. ಚಾವಣಿ, ನೆಲಹಾಸು, ಅಲಂಕಾರ ಕಾಮಗಾರಿಗಳು ಬಾಕಿ ಇದೆ ಎಂದು ಮಾಹಿತಿ ನೀಡಿದರು.

ದೇಗುಲಕ್ಕೆ ಸಾಗುವ ಹಾದಿ ಹದಗೆಟ್ಟಿದ್ದು ರಸ್ತೆ ನಿರ್ಮಾಣಕ್ಕೆ ಜಮ್ಮು-ಕಾಶ್ಮೀರ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದರೂ ಈವರೆಗೆ ಕಾಮಗಾರಿಗೆ ಕ್ರಮ ವಹಿಸಿಲ್ಲ. 2021 ಡಿಸೆಂಬರ್ 2ರಂದು ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. 2023ರ ನವರಾತ್ರಿಗೆ ಉದ್ಘಾಟನೆ ನೆರವೇರಿಸಲು ಉದ್ದೇಶಿಸಿದ್ದೇವೆ ಎಂದು ಮಾಹಿತಿಯನ್ನು ಹಂಚಿಕೊಂಡರು.
ಆದಿಶಂಕರಾಚಾರ್ಯರರು 8ನೇ ಶತಮಾನದಲ್ಲಿ ನಿರ್ಮಿಸಿದ್ದ ಶೃಂಗೇರಿಯ ಶಾರದಾಂಬೆ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲೊಂದು. ಇಲ್ಲಿ ವೀಣಾಪಾಣಿ ತುಂಗಾತೀರ ನಿವಾಸಿನಿಯಾಗಿ, ಶೃಂಗೇರಿಪುರವಾಸಿನಿಯಾಗಿ ಕುಳಿತಿದ್ದಾಳೆ. ಭಕ್ತರ ಸಂಕಷ್ಟಗಳನ್ನೆಲ್ಲಾ ದೂರ ಮಾಡುತ್ತಿರುವ ದೇವಿಗೆ ಅಪಾರ ಭಕ್ತರ ಬಳಗವಿದೆ. ಇದು ಸರಸ್ವತಿ ದೇವಿ ದೇವಸ್ಥಾನವಾಗಿದ್ದು, ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. 2 ರಿಂದ 5 ವರ್ಷದೊಳಗಿನ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದು ಓಂ ನಾಮ ಬರೆಸಿ ವಿದ್ಯಾಭ್ಯಾಸ ಆರಂಭಿಸಿದರೆ ಮಕ್ಕಳು ವಿದ್ಯಾವಂತರಾಗ್ತಾರೆ ಎನ್ನುವ ನಂಬಿಕೆಯಿದೆ.
ಈ ಕಾರಣದಿಂದಲೇ ಪೋಷಕರು ದೊಡ್ಡ ಸಂಖ್ಯೆಯಲ್ಲಿಅಕ್ಷರಾಭ್ಯಾಸಕ್ಕೆ ಮಕ್ಕಳನ್ನು ಇಲ್ಲಿಗೆ ಕರೆತರುತ್ತಾರೆ. ಇದೀಗ ಕಾಶ್ಮೀರದಲ್ಲೂ ಶಾರದಾ ದೇವಿಯ ದೇಗುಲ ನಿರ್ಮಾಣವಾವಗುತ್ತಿದ್ದು, ಈ ದೇಗುಲಕ್ಕೆ ಇಲ್ಲಿಂದಲೇ ವಿಗ್ರಹವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.












Click it and Unblock the Notifications