ಶೃಂಗೇರಿ ಅತ್ಯಾಚಾರ ಪ್ರಕರಣ; ಮೌನ ಮುರಿದ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಫೆಬ್ರವರಿ 03: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.
ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ಈ ಕುರಿತು ವಿಷಯ ಪ್ರಸ್ತಾಪಿಸಿದ್ದರು. "ಪ್ರಕರಣದಲ್ಲಿ ಆರೋಪಿಗಳಾದ ಬಹುತೇಕರು ರಾಜಕೀಯ ಪಕ್ಷದಲ್ಲಿ, ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ನಿಷ್ಪಕ್ಷಪಾತ ತನಿಖೆಯಾಗಬೇಕು" ಎಂದು ಒತ್ತಾಯಿಸಿದ್ದರು.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿತ್ತು. ಬುಧವಾರ ಪ್ರಕರಣದ ಕುರಿತು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಸಂಸದೆ ಹೇಳಿದ್ದೇನು?;
ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಬಲಾತ್ಕಾರ, ಅತ್ಯಾಚಾರ ಅತ್ಯಂತ ಖಂಡನೀಯವಾದುದು. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ತಪ್ಪಿತಸ್ತರನ್ನು ಬಂಧಿಸಲು, ಮತ್ತು ಬಾಲಕಿಗೆ ಸೂಕ್ತ ರಕ್ಷಣೆ ಕೊಡವಂತೆ ಸೂಚಿಸಿರುತ್ತೇನೆ.
ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ತಕ್ಷಣದಲ್ಲಿಯೇ ತಪ್ಪಿತಸ್ತರನ್ನು ಪೊಲೀಸರು ಬಂಧಿಸಿರುತ್ತಾರೆ. ಬಾಲಕಿಯನ್ನು ಕರೆತಂದು ದುರುಪಯೋಗ ಮಾಡಿದ ಅವಳ ಚಿಕ್ಕಮ್ಮ ಎಂದು ಕರೆಯಲ್ಪಡುವ ಗೀತಳನ್ನು ಕೂಡ ಬಂಧಿಸಿ ವಿಚಾರಿಸಲಾಗುತ್ತಿದೆ.
ಶೃಂಗೇರಿಯಲ್ಲಿ ನಡೆದಿರುವ ಪ್ರಖರಣ ಅತ್ಯಂತ ಖಂಡನೀಯ, ಈ ಕುರಿತು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
— Shobha Karandlaje (@ShobhaBJP) February 3, 2021
ಪ್ರಕರಣ ಅಪ್ರಾಪ್ತ ಬಾಲಕಿಯ ಭವಿಷ್ಯದ ವಿಚಾರವಾದುದರಿಂದ, ಮಾಧ್ಯಮ ಹೇಳಿಕೆಗಳನ್ನು ನೀಡದೆ, ಪ್ರತಿನಿತ್ಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. pic.twitter.com/QfrLrT7Use
SSLC ಓದುವ ಹುಡುಗಿ ತನ್ನ ಊರಿನಿಂದ ಇಲ್ಲಿಗೆ ಯಾಕೆ ಬಂದಳು? ಯಾಕೆ ಅವಳನ್ನು ಚಿಕ್ಕಮ್ಮ ದುರುಪಯೋಗ ಮಾಡಿದಳು? ಇದೇ ರೀತಿ ಇನ್ಯಾವ ಹುಡುಗಿಯ ಜೊತೆ ಗೀತಾ ಸಂಪರ್ಕ ಬೆಳೆಸಿದ್ದಾಳೆ ಎಂಬುದರ ಕುರಿತು ಕೂಡ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ.
ಪ್ರಕರಣ ಗಂಭೀರವಾಗಿದ್ದು, ಅಪ್ರಾಪ್ತ ಬಾಲಕಿಯ ಭವಿಷ್ಯದ ವಿಚಾರವಾಗಿರುವುದರಿಂದ, ಮಾಧ್ಯಮಕ್ಕೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಪ್ರತಿನಿತ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಈ ಕೇಸನ್ನು ನಿಗಾವಹಿಸಿ ಗಮನಿಸಲಾಗುತ್ತಿದೆ.












Click it and Unblock the Notifications