ಶೃಂಗೇರಿಯಲ್ಲಿ ಸಾಮೂಹಿಕ ಅತ್ಯಾಚಾರ; ಸದನದಲ್ಲಿ ವಿಷಯ ಪ್ರಸ್ತಾಪ
ಚಿಕ್ಕಮಗಳೂರು, ಫೆಬ್ರವರಿ 02: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣದ ಬಗ್ಗೆ ವಿಧಾನಸಭೆಯಲ್ಲಿಯೂ ವಿಷಯ ಪ್ರಸ್ತಾಪವಾಗಿದೆ.
ಮಂಗಳವಾರ ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ಶಾಸಕ ರಾಜೇಗೌಡ ಈ ಕುರಿತು ವಿಷಯ ಪ್ರಸ್ತಾಪಿಸಿದರು. "ಈಗಾಗಲೇ 17 ಜನರ ಬಂಧನವಾಗಿದೆ. ಅದರಲ್ಲಿ ಬಹುತೇಕರು ರಾಜಕೀಯ ಪಕ್ಷದಲ್ಲಿ, ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ನಿಷ್ಪಕ್ಷಪಾತ ತನಿಖೆಯಾಗಬೇಕು" ಎಂದು ಒತ್ತಾಯಿಸಿದರು.
"ಪ್ರಕರಣದಲ್ಲಿ ಬಾಲ ಕಾರ್ಮಿಕ ಕಾಯ್ದೆಯಡಿಯಲ್ಲೂ ಕೇಸು ದಾಖಲಾಗಿದೆ. 17 ಜನರು ವಿರುದ್ಧ ಎಫ್ಐಆರ್ ಆಗಿದ್ದು, ಇದರಲ್ಲಿ ಬಾಲಕಿ ಚಿಕ್ಕಮ್ಮನ ಹೆಸರು ಸೇರಿಸಲಾಗಿದೆ. ಅವರು ಅಮಾಯಕರು ಅವರ ಹೆಸರನ್ನು ಕೈಬಿಡಬೇಕು" ಎಂದು ಶಾಸಕರು ಹೇಳಿದರು.

ವಿಧಾನಸಭೆಯಲ್ಲಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಕುರಿತು ಪ್ರತಿಕ್ರಿಯೆ ನೀಡಿದರು. "ಪ್ರಕರಣದ ತನಿಖೆ ಸಂಬಂಧ ಯಾವುದೇ ಒತ್ತಡವಿಲ್ಲ. ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಯಾಗಲಿದೆ. ಅಮಾಯಕರು ಯಾರು? ಎಂಬುದು ತನಿಖೆ ಬಳಿಕ ತಿಳಿಯಲಿದೆ" ಎಂದರು.
ಸಾಮೂಹಿಕ ಅತ್ಯಾಚಾರ; 15 ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೇಲೆ ಶೃಂಗೇರಿಯಲ್ಲಿ ಸೆಪ್ಟೆಂಬರ್ 2020ರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದಕ್ಕೆ ಬಾಲಕಿ ಚಿಕ್ಕಮ್ಮ ಗೀತಾ ಅವರು ಸಹಕಾರ ನೀಡಿದ್ದಾರೆ ಎಂಬ ಆರೋಪವೂ ಇದ್ದು, ಎಫ್ಐಆರ್ನಲ್ಲಿ ಅವರ ಹೆಸರನ್ನು ಸಹ ಸೇರಿಸಲಾಗಿದೆ.
ವಿದ್ಯಾರ್ಥಿನಿ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿ ಮೂಲದವಳು. ತಾಯಿ ನಿಧನದ ಬಳಿಕ ಚಿಕ್ಕಮ್ಮ ಗೀತಾ ಅವರ ಜೊತೆ ಇದ್ದಳು. ಯೋಗಿ ಮತ್ತು ಅಭಿ ಎಂಬುವವರು ಮೊದಲು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅದನ್ನು ವಿಡಿಯೋ ಮಾಡಿಟ್ಟುಕೊಂಡು ಬೆದರಿಕೆ ಹಾಕಿ ಸ್ನೇಹಿತರು, ಪರಿಚಯದವರು ಅತ್ಯಾಚಾರ ನಡೆಸಲು ಪ್ರೇರೆಪಣೆ ನೀಡಿದ್ದಾರೆ ಎಂಬುದು ಆರೋಪ.
ಕ್ರಷರ್ ಮಾಲೀಕನೊಬ್ಬರ ಅತ್ಯಾಚಾರ ನಡೆಸಲು ಸ್ಥಳ ಮತ್ತು ಇತರ ಸಹಕಾರ ನೀಡಿದ್ದಾನೆ ಎಂಬ ಆರೋಪವಿದ್ದು, ಎಫ್ಐಆರ್ನಲ್ಲಿ ಅವನ ಹೆಸರನ್ನು ಸಹ ದಾಖಲಿಸಲಾಗಿದೆ. ಮಲೆನಾಡನ್ನು ಬೆಚ್ಚಿ ಬೀಳಿಸಿರುವ ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆಯಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ.












Click it and Unblock the Notifications