ಚಿಕ್ಕಮಗಳೂರು: ಸೆರೆ ಹಿಡಿದ ನಾಗರಹಾವು ಕಡಿದು ಸ್ನೇಕ್ ನರೇಶ್ ಸಾವು
ಚಿಕ್ಕಮಗಳೂರು, ಮೇ 30: ಜಿಲ್ಲಾದ್ಯಂತ ಸ್ನೇಕ್ ನರೇಶ್ ಎಂದು ಖ್ಯಾತಿ ಪಡೆದಿದ್ದ ಉರಗ ತಜ್ಞ ಸೆರೆ ಹಿಡಿದ ನಾಗರಹಾವು ಕಚ್ಚಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಉರಗ ತಜ್ಞ ಸ್ನೇಕ್ ನರೇಶ್(51) ಮೃತ ದುರ್ದೈವಿಯಾಗಿದ್ದು, ಇವರು ಜಿಲ್ಲಾದ್ಯಂತ ಚಿರ ಪರಿಚಿತರಾಗಿದ್ದರು. ಈ ಹಿಂದೆ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಾವು ಸೆರೆ ಹಿಡಿಯುವ ಜೊತೆಗೆ ಶಾಲಾ ಮಕ್ಕಳಿಗೆ ಹಾವಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.

ಮಂಗಳವಾರ ಬೆಳಿಗ್ಗೆ ನಾಗರಹಾವು ಹಿಡಿದುಕೊಂಡು ಬಂದಿದ್ದರು. ನಾಗರ ಹಾವನ್ನು ಚೀಲದಲ್ಲಿ ಗಂಟು ಹಾಕಿ ಬೈಕ್ ಡಿಕ್ಕಿಯಲ್ಲಿಟ್ಟಿದ್ದರು. ಮಧ್ಯಾಹ್ನದ ವೇಳೆ ಮತ್ತೊಂದು ಹಾವು ಹಿಡಿಯಲು ಕರೆ ಬಂದಿದ್ದು, ಈ ವೇಳೆ ಬೈಕ್ ಡಿಕ್ಕಿಯಲ್ಲಿ ಇರಿಸಿದ್ದ ನಾಗರಹಾವು ಇದ್ದ ಚೀಲದ ಗಂಟನ್ನು ಬಿಗಿ ಮಾಡಲು ಸ್ಕೂಟರ್ ಡಿಕ್ಕಿ ತೆರೆದಿದ್ದು. ಈ ವೇಳೆ ನಾಗರಹಾವು ಕಚ್ಚಿದೆ.
ಸ್ನೇಕ್ ನರೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದು, ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಆಸ್ಪತ್ರೆ ಸಿಬ್ಬಂದಿ ಮೃತದೇಹ ವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಮಾಜಿ ಶಾಸಕರ ಮನೆಯಲ್ಲಿ ದರೋಡೆ ಪ್ರಕರಣ - ಮತ್ತೆ ನಾಲ್ವರು ಆರೋಪಿಗಳ ಬಂಧನ
ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿರಗನಹಳ್ಳಿ ಗ್ರಾಮದಲ್ಲಿರುವ ಮಾಜಿ ಶಾಸಕ ಎಂ.ಎಸ್.ರವಿ ನಾಗರಾಜ್ ಅವರ ತೋಟದ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳಲ್ಲಿ ಪೊಲೀಸರು ಮತ್ತೆ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾವತಿ ಮೂಲದ ನಿತಿನ್ ಎಸ್.ಮೂರ್ತಿ, ವೆಂಕಟೇಶ್ ಅಲಿಯಾಸ್ ವೆಂಕಿ, ಕಾರ್ತಿಕ್ ಎಂ.ಎಸ್, ಮಹೇಶ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 27 ಗ್ರಾಂ ಚಿನ್ನದ ಬಳೆ ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೀಂದ್ರ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ಮೇ.6ರಂದು ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶಿರಗನಹಳ್ಳಿಯಲ್ಲಿರುವ ಮಾಜಿ ಶಾಸಕ ಎಂ.ಎಸ್.ನಾಗರಾಜ್ ಅವರ ತೋಟದ ಮನೆಗೆ ನುಗ್ಗಿದ್ದ 15 ರಿಂದ 20 ಜನರ ಗುಂಪು, ಮನೆಯಲ್ಲಿದ್ದ ಮಾಜಿ ಶಾಸಕ ನಾಗರಾಜ್ ಸೇರಿದಂತೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ, ಮಾರಕಾಸ್ತ್ರಗಳನ್ನು ತೋರಿಸಿ ಮನೆಯಲ್ಲಿದ್ದ ಸುಮಾರು 43,33,500 ಲಕ್ಷ ರೂ. ಮೌಲ್ಯದ 963 ಗ್ರಾಂ ಚಿನ್ನಾಭರಣ ಹಾಗೂ 61 ಸಾವಿರ ರೂ. ನಗದು ದರೋಡೆ ಮಾಡಿ ಪರಾರಿಯಾಗಿದ್ದರು.
ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ 7 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ತನಿಖೆ ಆರಂಭಿಸಿದ್ದ ಪೊಲೀಸರು ಶನಿವಾರ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
ಈ ಪ್ರಕರಣ ಸಂಬಂಧ ಇದುವರೆಗೆ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 330 ಗ್ರಾಂ. ಚಿನ್ನ, 2 ಕಾರು, 2 ಬೈಕ್, 8 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಾಕಿ ಆರೋಪಿಗಳಿಗಾಗಿ ತನಿಖೆ ಮುಂದುವರೆಸಿದ್ದಾರೆಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications