ಸರ್ಕಾರ ಸತ್ತು ಹೋಗಿದೆ, Go Back ಅಂದ್ರೆ ಎಲ್ಲಿಗೆ ಹೋಗ್ಲಿ: ಸಿದ್ದರಾಮಯ್ಯ
ಶೃಂಗೇರಿ, ಆಗಸ್ಟ್ 19: ''ರಾಜ್ಯ ಬಿಜೆಪಿ ಸರ್ಕಾರದ ಪ್ರಾಯೋಜಕತ್ವದಲ್ಲಿ ನನ್ನ ವಿರುದ್ಧದ ಪ್ರತಿಭಟನೆ ನಡೆದಿದೆ. ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಹತಾಶವಾಗಿರುವ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸತ್ತು ಹೋಗಿದೆ'' ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಿದ್ದು, ಬಾಸಪುರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ''ಕೊಡಗಿನಲ್ಲಿ ನನ್ನ ವಿರುದ್ಧದ ಪ್ರತಿಭಟನೆಗೆ ಬಿಜೆಪಿ ಸರ್ಕಾರವೇ ಕಾರಣ. ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಸರ್ಕಾರ ಸತ್ತು ಹೋಗಿದೆ ಎಂಬುದಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಹೇಳಿಕೆಯೇ ಸಾಕ್ಷಿ'' ಎಂದು ವಾಗ್ದಾಳಿ ನಡೆಸಿದರು.
''ಮಡಿಕೇರಿ ನಂತರ ಸಹ ನಾಲ್ಕು ಕಡೆ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಆದರೆ ಪ್ರತಿಭಟನೆ ಕಾರಣಕ್ಕೆ ಹೋಗಲಾಗಲಿಲ್ಲ. ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿದ್ದರೆ ಅವರನ್ನು ಬಂಧಿಸಬಹುದಿತ್ತು. ಆದರೆ ಪೊಲೀಸರು ದುರುದ್ದೇಶಪೂರ್ವಕವಾಗೇ ಮುಂಜಾಗ್ರತೆ ವಹಿಸಿಲ್ಲ. ಗೋ ಬ್ಯಾಕ್ ಎಂದರೆ ನಾನು ಎಲ್ಲಿಗೆ ಹೋಗಲಿ ಹೇಳಲಿ'' ಎಂದು ಅವರು ಪ್ರಶ್ನಿಸಿದರು.

ಕೊಡಗಿನಲ್ಲಿ 26 ರಂದು ಎಸ್ಪಿ ಕಚೇರಿಯ ಮುಂದೆ ಕಾಂಗ್ರೆಸ್ ಪ್ರತಿಭಟನೆ
ಜಿಲ್ಲೆಯ ಭೇಟಿ ವೇಳೆ ನಡೆದ ಪ್ರತಿಭಟನೆ, ಕಾರಿನ ಮೇಲೆ ದಾಳಿ ವಿರುದ್ಧ ಕೊಡಗು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿ ಮುಂದೆ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಿದ್ದೇವೆ. ಈ ಸಂಬಂಧ ಕರೆ ನೀಡಿಲಾಗಿದ್ದು, ಸರ್ಕಾರ ಹಾಗೂ ಪೊಲೀಸ್ ನಡೆ ವಿರೋಧಿಸಿ ಧರಣಿ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರತಿಭಟನಾಕಾರರನ್ನು ಪೊಲೀಸರು ತಡೆದಿಲ್ಲ. ಆರ್ಎಸ್ಎಸ್ ಸಂಘ ಪರಿವಾರದವರ ಜತೆ ಎಸ್ಪಿ ಸೇರಿಕೊಂಡಿದ್ದಾರೆ. ಕರ್ತವ್ಯಕ್ಕೆ ದ್ರೋಹ ಬಗೆಯುವ ಪೊಲೀಸ್ ಅಧಿಕಾರಿಗೆ ಏನಾಗಿದೆಯೋ? ಗೊತ್ತಿಲ್ಲ. ದುರುದ್ದೇಶಪೂರ್ವಕವಾಗಿ ಅವರು ಹೇಳಿದಂತೆ ಕೇಳಿಕೊಂಡು ಸೂಕ್ತ ರಕ್ಷಣೆ ನೀಡಿಲ್ಲ. ಮುಂಜಾಗೃತೆ ವಹಿಸಿ ಪ್ರತಿಭಟನಾಕಾರರನ್ನು ಬಂಧಿಸಲಿಲ್ಲ ಎಂದು ಸಿದ್ದರಾಮಯ್ಯ ಪೊಲೀಸರು ಹಾಗೂ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
1 ಕಡೆ ಕಪ್ಪು ಬಟ್ಟೆ ತೋರಿಸಿದವರನ್ನು ಬೇರೆಡೆ ಏಕೆ ತಡೆಯಲಿಲ್ಲ?
ಒಂದು ಕಡೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದು ಪೊಲೀಸರಿಗೆ ಗೊತ್ತಿದೆ. ಹೀಗಿದ್ದರು ಮತ್ತೊಂದು ಕಡೆಗೂ ಅದರ ರೀತಿ ಆಗಲು ಕಾರಣವೇನು. ಅವರನ್ನು ಪೊಲೀಸರು ತಡೆಯಬಹುದಿತ್ತು. ನಮ್ಮ ಅವಧಿಯಲ್ಲಿ ಈ ರೀತಿಯಾಗದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ಕೆಟ್ಟ, ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಈ ಬಗ್ಗೆ ಬಿಜೆಪಿ ಸಚಿವರ ಹೇಳಿಕೆ ನೀಡಿದ್ದನ್ನೆ ಗಮನಿಸಬಹುದು. ಇನ್ನು ಬಿಜೆಪಿ ವಿರುದ್ಧ ಅವರ ಪಕ್ಷದ ಕಾರ್ಯಕರ್ತರೆ ಪ್ರತಿಭಟನೆ ಮಾಡಿದ್ದನ್ನು ನಾವು ನೋಡಿದ್ದೇವೆ ಎಂದು ಕಿಡಿ ಕಾರಿದರು.

ಗಾಂಧಿಯನ್ನೇ ಬಿಡದವರು ನನ್ನ ಬಿಡುತ್ತಾರಾ?: ಸಿದ್ದು
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯವರನ್ನೇ ಕೊಲೆ ಮಾಡಿದವರು ನನ್ನ ಬಿಡುತ್ತಾರೆಯೇ? ಎಂದು ಬಿಜೆಪಿ ಸರ್ಕಾರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಗಾಂಧೀಜಿಯನ್ನು ನಾಥುರಾಂ ಗೋಡ್ಸೆ ಎಂಬಾತ ಗುಂಡಿಟ್ಟು ಕೊಂದ. ಅಂತಹ ಗೋಡ್ಸೆಯ ಭಾವಚಿತ್ರವನ್ನು ಇಟ್ಟುಕೊಂಡು ಪೂಜೆ ಮಾಡುವ ಮನಸ್ಥಿತಿಯವರು ಈ ಬಿಜೆಪಿಗರು. ಇನ್ನೂ ಇವರು ನನ್ನನ್ನು ಬಿಡುತ್ತಾರೆಯೇ! ಎಂದು ಕೊಡಗಿನಲ್ಲಿ ಕಾರಿಗೆ ಮುತ್ತಿಗೆ, ಕಪ್ಪು ಬಟ್ಟೆ ಪ್ರದರ್ಶನ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.












Click it and Unblock the Notifications