ಚಿಕ್ಕಮಗಳೂರಿನಲ್ಲಿ ಬಿರುಸು ಮಳೆ; ಎಲ್ಲೆಲ್ಲಿ ಏನಾಗಿದೆ?
Recommended Video
ಚಿಕ್ಕಮಗಳೂರು, ಅಕ್ಟೋಬರ್ 21: ಕಳೆದ ಐದು ವರ್ಷಗಳಿಂದ ಮಳೆಯಾಗದೇ ಬರಕ್ಕೆ ತುತ್ತಾಗಿದ್ದ ಮಲೆನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆಯಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ತರೀಕೆರೆ, ಅಜ್ಜಂಪುರ, ಕಡೂರು ಭಾಗದಲ್ಲಿ ಮಳೆಯಾಗುತ್ತಿದ್ದು ಕೆರೆಕಟ್ಟೆ, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರಿನ ಎಲ್ಲೆಲ್ಲಿ ಏನು ಹಾನಿಯಾಗಿದೆ ಎಂಬುದರ ಕಿರುನೋಟ ಇಲ್ಲಿದೆ.

ಐದು ವರ್ಷದ ನಂತರ ತುಂಬಿದ ಶಿವನಿ ಕೆರೆ
ಶಿವನಿ ಹೋಬಳಿಯ ಜೀವನಾಡಿಯಾಗಿರುವ ಶಿವನಿ ಕೆರೆ ನಿನ್ನೆ ರಾತ್ರಿ ಸುರಿದ ಮಳೆಗೆ ತುಂಬಿ ಕೋಡಿಬಿದ್ದಿದೆ. ಕೆರೆಯ ಕೋಡಿ ನೀರು ಶಿವನಿ- ಚಿತ್ರದುರ್ಗ ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿದ್ದು ರಾತ್ರಿಯಿಂದ ಸಂಚಾರ ಸ್ಥಗಿತಗೊಂಡಿದೆ. ಇನ್ನು ಮುಗುಳಿ-ತಮ್ಮಟನಹಳ್ಳಿಯ ರಸ್ತೆ ಸಂಚಾರವು ಬಂದ್ ಆಗಿದೆ. ಐತಿಹಾಸಿಕ ಕೆರೆಯಾದ ಬುಕ್ಕಾಂಬುದಿಯ ಬುಕ್ಕರಾಯನ ಕೆರೆಯೂ ಭರ್ತಿಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕೆರೆಯಲ್ಲಿ ಬೃಹತ್ ಸುಳಿ ನಿರ್ಮಾಣ ಆಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಸ್ವಾತಿ ಮಳೆ ಅಬ್ಬರಕ್ಕೆ ತರೀಕೆರೆ ಕಂಗಾಲು
ತರೀಕೆರೆ ಸುತ್ತಮುತ್ತಲೂ ಸಾಕಷ್ಟು ಮಳೆಯಾಗಿದ್ದು ಜಂಬದಹಳ್ಳ ಡ್ಯಾಂ ಕಳೆದ 10 ವರ್ಷದ ನಂತರ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೂರಾರು ಎಕರೆ ತೋಟಗಳು ಜಲಾವೃತವಾಗಿ ರಸ್ತೆಗಳಲ್ಲಿ ನೀರು ತುಂಬಿದೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಸಹ ಕಡಿತಗೊಂಡಿದೆ. ಕಟ್ಟೆಹೊಳೆ ಹಳ್ಳ ಸಂಪೂರ್ಣ ಭರ್ತಿಯಾಗಿ ಉಕ್ಕಿ ಹರಿಯುತ್ತಿದ್ದು ಅವಾಂತರ ಸೃಷ್ಟಿಮಾಡಿದೆ.

ತುಂಬಿ ಹರಿದ ವೇದಾವತಿ
ಬಯಲು ಸೀಮೆ, ಬರಪೀಡಿತ ತಾಲೂಕು ಕಡೂರಿನಲ್ಲಿಯೂ ವರ್ಷಧಾರೆ ಅವಾಂತರ ಸೃಷ್ಟಿಸಿದೆ. ಹಲವು ವರ್ಷಗಳಿಂದ ತನ್ನ ಕುರುಹನ್ನೇ ಕಳೆದುಕೊಂಡಿದ್ದ ವೇದಾವತಿ ನದಿ ಉಕ್ಕಿ ಹರಿಯುತ್ತಿದೆ. ಕರಿಕಲ್ಲು ಹೊಳೆ ತುಂಬಿದೆ. ತಾಲೂಕಿನ ಶಂಕರಾಪುರ ಗ್ರಾಮದಲ್ಲಿ ನೂರಾರು ಎಕರೆ ರಾಗಿ ಜಲಾವೃತಗೊಂಡು ರೈತರು ಕಂಗಾಲಾಗಿದ್ದಾರೆ. ನರಸೀಪುರ ಗ್ರಾಮದಲ್ಲಿ ಮನೆ, ಕೊಟ್ಟಿಗೆಗಳು ಕುಸಿದಿದ್ದು, ಕೊಟ್ಟಿಗೆಯಲ್ಲಿದ್ದ ದನಕರುಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋದ ಸಾವಿರಾರು ಚೀಲ ಈರುಳ್ಳಿ
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅಜ್ಜಂಪುರ, ಶಿವನಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ಕೊಯ್ದು ಮಾರಾಟಕ್ಕೆ ಸಿದ್ಧವಾಗಿದ್ದ ಸಾವಿರಾರು ಚೀಲ ಈರುಳ್ಳಿ ಜಲಾವೃತವಾಗಿದೆ. ಇನ್ನು ಕೆಲೆವೆಡೆ ನೀರಿನಲ್ಲಿ ಕೊಚ್ಚಿಹೋದ ಈರುಳ್ಳಿ ರಸ್ತೆಗಳಿಗೆ ಬಂದು ಬಿದ್ದಿವೆ. ಬಹು ಬೆಲೆಯ ನಿರೀಕ್ಷೆಯಲ್ಲಿದ್ದ ರೈತರು ಬೆಳೆದ ಬೆಳೆ ಕೈಗೆ ಸಿಗದೆ ಚಿಂತೆಗೀಡಾಗಿದ್ದಾರೆ.
ಒಟ್ಟಿನಲ್ಲಿ ಕಳೆದ ಎರಡು ತಿಂಗಳು ಮಲೆನಾಡನ್ನು ತತ್ತರಿಸಿದ್ದ ಮಳೆ ಈಗ ಬಯಲು ಸೀಮೆಗೆ ಕಾಲಿಟ್ಟಿದ್ದು ಒಂದೇ ದಿನಕ್ಕೆ ಬಯಲು ಸೀಮೆ ಮಂದಿಯನ್ನು ಭಯಬೀತಗೊಳಿಸಿದೆ.












Click it and Unblock the Notifications