ಮನೆಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ: ವಸತಿ ಸಚಿವರಿಗೆ ದೂರು ನೀಡಿದ ಚಿಕ್ಕಮಗಳೂರಿನ ನಿವಾಸಿಗಳು
ಚಿಕ್ಕಮಗಳೂರಿನ ಹಲವೆಡೆ ಮನೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಲಾಗಿದ್ದು, ವಸತಿ ಸಚಿವರಿಗೆ ಚಿಕ್ಕಮಗಳೂರಿನ ನಿವಾಸಿಗಳು ಈ ಬಗ್ಗೆ ದೂರು ನೀಡಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ, 28: ನಗರದ ತಮಿಳು ಹಾಗೂ ಬೋವಿ ಕಾಲೋನಿಗಳ ನಿವಾಸಿಗಳಿಗೆ ಸರ್ಕಾರದ ವತಿಯಿಂದ ನಿರ್ಮಾಣವಾಗುತ್ತಿರುವ ಮನೆಗಳು ಕಳಪೆಯಿಂದ ಕೂಡಿವೆ. ಇವುಗಳನ್ನು ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ನಗರದ ನಿವಾಸಿಗಳು ವಸತಿ ಸಚಿವ ವಿ.ಸೋಮಣ್ಣನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕೆಂಪನಹಳ್ಳಿ ರಸೂಲ್ಖಾನ್, ಕಳೆದ ಐವತ್ತು ವರ್ಷಗಳಿಂದ ತಮಿಳು ಹಾಗೂ ಬೋವಿ ಕಾಲೋನಿಯಲ್ಲಿ ಅನೇಕ ಕುಟುಂಬಗಳು ದಿನನಿತ್ಯ ಕೂಲಿ ಕೆಲಸ ಮಾಡಿಕೊಂಡು ಗುಡಿಸಲುಗಳಲ್ಲಿ ವಾಸವಾಗಿದ್ದರು. ನಂತರ ಸೂರು ಎಂಬ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡುತ್ತೇವೆ ಎಂದು ಹೇಳಿ ಇರುವ ಮನೆಗಳನ್ನು ಕೆಡವಿದ್ದು, ಇದುವರೆಗೂ ಮನೆ ನಿರ್ಮಿಸಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆ ನಿರ್ಮಾಣದಲ್ಲಿ ಕಳಪೆ ಕಾಮಾಗರಿ
ಕೆಲವರಿಗೆ ಮೂರ್ನಾಲ್ಕು ವರ್ಷಗಳ ಮುಂಚೆ ಹಾಗೂ ಕೆಲವರ ಬಳಿ ಆರು ತಿಂಗಳ ಹಿಂದೆಯೇ ಹಣದ ಡಿಡಿಯನ್ನು ಕಟ್ಟಿಸಿಕೊಂಡು ಅರ್ಧಂಬರ್ಧ ಮನೆಗಳನ್ನು ನಿರ್ಮಿಸಲಾಗಿದೆ. ಒಂದೆಡೆ ಮನೆಯಿಲ್ಲದೇ ಜನರು ಕಂಗಾಲಾದರೆ, ಮತ್ತೊಂದೆಡೆ ಹಣ ಇಲ್ಲದಂತೆ ನಿವಾಸಿಗಳು ಬೀದಿಗೆ ಬಂದು ನಿಲ್ಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ
ಈ ಸಂಬಂಧ ಅಧಿಕಾರಿಗಳಿಗೆ ಕೇಳಿದರೆ ಉಡಾಫೆ ಉತ್ತರಗಳನ್ನು ನೀಡಿ ಬೆದರಿಕೆ ಹಾಕುತ್ತಾರೆ. ಗುತ್ತಿಗೆದಾರರು ಸ್ಥಳೀಯರಿಗೆ ಸಬ್ಕಾಂಟ್ರಕ್ಟ್ ನೀಡಿರುವ ಪರಿಣಾಮ ಬೇಕಾಬಿಟ್ಟಿಯಾಗಿ ಕೆಲಸ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಹಾಗೂ ಫಲಾನುಭವಿಗಳಿಗೆ ವಂಚಿಸುತ್ತಾ ಹಣವನ್ನು ದುರುಪಯೋಗ ಮಾಡಿಕೊಂಡು ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಇಲ್ಲಿನ ನಿವಾಸಿಗಳಿಗೆ ಮಕ್ಕಳ ಭವಿಷ್ಯ ಕಟ್ಟುವ ಸಮಯದಲ್ಲಿ ಬೀದಿಯಲ್ಲಿ ನಿಂತು ಜೀವನ ನಡೆಸುವ ಹಂತಕ್ಕೆ ತಂದು ನಿಲ್ಲಿಸಲಾಗಿದೆ. ಕೂಡಲೇ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲದೇ ಕಳಪೆ ಕಾಮಗಾರಿಗೆ ಮುಂದಾಗಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಂಡು ತುರ್ತಾಗಿ ಮನೆಗಳನ್ನು ನಿರ್ಮಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications