ಚಿಕ್ಕಮಗಳೂರು ಜಿ.ಪಂ; ಸ್ವಪಕ್ಷದ ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದ ಸದಸ್ಯರು
ಚಿಕ್ಕಮಗಳೂರು, ಅಕ್ಟೋಬರ್ 20: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ಸ್ವ- ಪಕ್ಷದ ಸದಸ್ಯರೇ ತಿರುಗಿ ಬಿದ್ದಿದ್ದು ಮಂಗಳವಾರ ನಡೆಯಬೇಕಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರು ಸಾಮೂಹಿಕವಾಗಿ ಗೈರಾಗುವ ಮೂಲಕ ಜಿ.ಪಂ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದೆ.
ಮಂಗಳವಾರ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಅಧ್ಯಕ್ಷರಾದ ಸುಜಾತ ಕೃಷ್ಣಪ್ಪ ನೇತೃತ್ವದಲ್ಲಿ ನಡೆಸಲು ನಿಗದಿಪಡಿಸಲಾಗಿತ್ತು. ಈ ಸಭೆಗೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಆಗಮಿಸಿದ್ದರು. ಆದರೆ ಬಿಜೆಪಿ ಸದಸ್ಯರು ಮಾತ್ರ ಸಾಮೂಹಿಕವಾಗಿ ಗೈರಾಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ-ಜೆಡಿಎಸ್ ಮೈತ್ರಿ?
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ: ಅತಿಹೆಚ್ಚು ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ಗೆದ್ದು ಜಿಲ್ಲಾ ಪಂಚಾಯತ್ ಗದ್ದುಗೆಯನ್ನು ಬಿಜೆಪಿ ತನ್ನ ವಶಕ್ಕೆ ಪಡೆದಿತ್ತು. ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾಗಿತ್ತು. ಈ ಪಕ್ಷದಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳು ಇದ್ದ ಕಾರಣ ಇಬ್ಬರಿಗೂ ಅವಧಿ ಹಂಚಿಕೆ ಮಾಡಲಾಗಿತ್ತು. ಈ ರಾಜಿಯೊಂದಿಗೆ ಮೊದಲ ಅವಧಿಯಲ್ಲಿ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಜಿ.ಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ಚೈತ್ರಶ್ರೀ ಮೊದಲು ಅಧ್ಯಕ್ಷ ಗಾದಿಗೆ ಏರಿದ್ದರು.
ಎರಡನೇ ಅವಧಿಯಲ್ಲಿ ಜಯಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾದ ಸುಜಾತ ಕೃಷ್ಣಪ್ಪ ಅವರಿಗೆ ನೀಡಲಾಗಿತ್ತು. ಮೊದಲ ಅವಧಿಯಲ್ಲಿ ಆಯ್ಕೆಯಾದ ಚೈತ್ರಶ್ರೀ ಅವರು 20 ತಿಂಗಳು ಅಧಿಕಾರ ನಡೆಸಿದ್ದರು. ನಂತರ ರಾಜೀನಾಮೆ ನೀಡಲು ಹಿಂದೇಟು ಹಾಕಿದ ಪರಿಣಾಮ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ನಂತರ ನಿಗದಿಯಂತೆ ಸುಜಾತ ಕೃಷ್ಣಪ್ಪ ಅವರಿಗೆ ಅಧಿಕಾರ ನೀಡಲಾಗಿತ್ತು. ಈಗ ಅವರ ಅವಧಿ 6 ತಿಂಗಳು ಇರುವಾಗಲೇ ರಾಜೀನಾಮೆ ನೀಡುವಂತೆ ಪಕ್ಷ ಸೂಚನೆ ನೀಡಿರುವುದು ಭಿನ್ನಮತಕ್ಕೆ ಕಾರಣವಾಗಿದೆ.
ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ ಬಿಜೆಪಿಯ ಸದಸ್ಯರು ತಿರುಗಿ ಬಿದ್ದಿದ್ದಾರೆ. ಪಕ್ಷದ ತೀರ್ಮಾನದಂತೆ ಅಧ್ಯಕ್ಷರು ವರ್ತಿಸುತ್ತಿಲ್ಲ. ಪಕ್ಷದ ಸದಸ್ಯರಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯರು ಅಧ್ಯಕ್ಷರ ವಿರುದ್ಧ ಆರೋಪ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರ ಹಿಡಿಯಲು ಮೇಲ್ವರ್ಗದ ಸದಸ್ಯರ ಪ್ರಯತ್ನ ಆರೋಪ: ನನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಹಿಂಬಾಗಿಲಿನಿಂದ ಪ್ರಭಾರಿಯಾಗಿ ಅಧಿಕಾರ ನಡೆಸಲು ಮೇಲ್ವರ್ಗದ ಸದಸ್ಯರು ಈ ರೀತಿ ಯತ್ನಿಸುತ್ತಿದ್ದಾರೆ ಎಂದು ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿ ಅನ್ವಯ ಇಬ್ಬರು ಅಭ್ಯರ್ಥಿಗಳು ಇದ್ದಾರೆ. ಈ ಮೊದಲು ಅಧ್ಯಕ್ಷ ಸ್ಥಾನದಲ್ಲಿದ್ದ ಚೈತ್ರಶ್ರೀ ಬಾಣಂತಿಯಾಗಿದ್ದು, ಅವರು ಸದ್ಯಕ್ಕೆ ಅಧಿಕಾರ ನಡೆಸಲು ಸಾಧ್ಯವಿಲ್ಲ. ಇಂತಹ ಸಂದರ್ಭ ಉಪಯೋಗಿಸಿಕೊಂಡು ಜಿ.ಪಂ ಉಪಾಧ್ಯಕ್ಷರು ಪ್ರಭಾರಿಯಾಗಿ ಜಿ.ಪಂ ಅಧ್ಯಕ್ಷ ಗಾದಿಗೆ ಬರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.