ಚಿಕ್ಕಮಗಳೂರು; ಟ್ರಾಕ್ಟರ್ ಮೂಲಕ ಬೆಳೆ ನಾಶ ಮಾಡಿದ ರೈತ
ಚಿಕ್ಕಮಗಳೂರು, ಮಾರ್ಚ್ 21: ರೈತರಿಗೆ ಸದಾ ಒಂದಿಲ್ಲೊಂದು ಸಂಕಷ್ಟಗಳು ಬರುತ್ತಲೇ ಇರುತ್ತವೆ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದ ಕಾರಣ ರೈತರೊಬ್ಬರು ಟ್ರಾಕ್ಟರ್ ಮೂಲಕ ಬೆಳೆ ನಾಶ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.
ಹಿರೇಗೌಜ ಗ್ರಾಮದ ರೈತ ತನುಜ್ ಕುಮಾರ್ 4 ತಿಂಗಳ ಹಿಂದೆ ಒಂದೂವರೆ ಎಕರೆ ಜಮೀನಿನಲ್ಲಿ 75 ಸಾವಿರ ರೂಪಾಯಿ ವೆಚ್ಚ ಮಾಡಿ ಎಲೆಕೋಸು ಬೆಳೆದಿದ್ದರು. ಉತ್ತಮ ಬೆಳೆ ಬಂದಿದ್ದು, ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷಿತ ಬೆಲೆ ಸಿಕ್ಕಿಲ್ಲ.
ರೈತ ಮಕ್ಕಳ ವಿದ್ಯಾರ್ಥಿವೇತನಕ್ಕೆ ಪಹಣಿ ಅವಶ್ಯಕತೆ ಇಲ್ಲ; ಕೃಷಿ ಸಚಿವ ಬಿ.ಸಿ. ಪಾಟೀಲ್
ಬೆಳೆ ಉತ್ತಮವಾಗಿದ್ದರೂ ಬೆಲೆ ಕುಸಿತದಿಂದ ಬೇಸತ್ತು ತಾವು ಬೆಳೆದ ಬೆಳೆಯನ್ನು ಟ್ರಾಕ್ಟ್ರರ್ ಹೊಡೆದು ನಾಶಪಡಿಸಿ ಬೆಲೆ ಏರಿಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕೋಸು ಕೆಜಿಗೆ 2 ರೂ. ಇದ್ದು, ಯಾರು ಕೇಳದಂತಹ ಪರಿಸ್ಥಿತಿ ಇದೆ.
ಬೊಮ್ಮಾಯಿ ಬಜೆಟ್ನಲ್ಲಿ ದೂರದೃಷ್ಟಿಯಿಲ್ಲ ಎಂದಿದ್ದೇಕೆ ರಾಜ್ಯ ರೈತ ಸಂಘ?
"ಮಧ್ಯವರ್ತಿಗಳು ಎಕರೆಗೆ 5 ಸಾವಿರ ರೂಪಾಯಿ ನೀಡುತ್ತೇವೆ ಎನ್ನುತ್ತಾರೆ. ಸಾಲಮಾಡಿ ಬೆಳೆ ಬೆಳೆದಿದ್ದು, ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ" ಎಂದು ತನುಜ್ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.
ತಿಳಿಯಿರಿ; ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್ಬಿಮಾ ಯೋಜನೆ
ಈ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಪ್ರಯೋಜನವಿಲ್ಲ. ನೋಡುತ್ತೇವೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. ರೈತರು ಈ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ.
ಸಾಲ ಮಾಡಿ ಬೆಳೆ ಬೆಳೆದರೇ ಅದಕ್ಕೆ ಸರಿಯಾದ ಬೆಲೆ ಸಿಗದಿದ್ದರೇ ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿರುವ ರೈತರು, ಬೆಳೆ ಬೆಳೆದ ರೈತರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕೇವಲ ಎಲೆಕೋಸು ಬೆಳೆ ಮಾತ್ರವಲ್ಲ. ಇನ್ನೊಂದೆಡೆ ಟಮೊಟೋ ಕೂಡ ಬೆಳೆದಿದ್ದರು. ಟೊಮೊಟೋವನ್ನು ಕೇಳೋರಿಲ್ಲ. ಹೊಲದಲ್ಲಿ ಟೊಮೆಟೋ ಬೆಳೆ ಕೂಡ ಹುಲುಸಾಗಿ ಬೆಳೆದಿದೆ. ಆದರೆ 2-3 ರೂಪಾಯಿಗೂ ಕೇಳುವವರೇ ಇಲ್ಲದಂತಾಗಿದೆ.
ಒಂದು ಬೆಳೆಗೆ ಬೆಲೆ ಇಲ್ಲ ಎಂದರೇ ತಡೆದುಕೊಳ್ಳೋಲೆ ಆಗುವುದಿಲ್ಲ. ಈಗ ರೈತ ಬೆಳೆದ ಎರಡು ಮೂರು ಬೆಳೆಗೂ ಬೆಲೆ ಇಲ್ಲ ಎಂದರೆ ಅನ್ನದಾತ ಬದುಕೋದಾದರು ಹೇಗೆ?. ಮಿಶ್ರ ಬೆಳೆ ಬೆಳೆದರೆ ರೈತನಿಗೆ ನಷ್ಟ ಆಗಲ್ಲ ಅನ್ನೋ ಮಾತು ಕೂಡ ಸುಳ್ಳಾದಂತಿದೆ ಎಂದು ರೈತರು ಹೇಳಿದ್ದಾರೆ.
ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ, ರೈತ ಆತ್ಮಹತ್ಯೆ ಮಾಡಿಕೊಂಡ ಮೇಲೆ ಸರ್ಕಾರ ಬಂದು ಸಾಂತ್ವನ ಹೇಳಿ ಪರಿಹಾರ ನೀಡುವ ಬದಲು, ರೈತರ ಬೆಳೆಗಳಿಗೆ ಕನಿಷ್ಠ ಪಕ್ಷ ಬೆಂಬಲ ಬೆಲೆಯನ್ನಾದರೂ ನೀಡಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಒಟ್ಟಾರೆ, ರೈತ ಈ ದೇಶದ ಆಸ್ತಿ, ಬೆನ್ನೆಲುಬು ಎಂದು ಹೇಳುವ ಸರ್ಕಾರ ರೈತರ ಹಿತ ಕಾಯುವುದರಲ್ಲಿ ಅನುಮಾನವಿದೆ. ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಸರ್ಕಾರ ನಿಲ್ಲುತ್ತಿಲ್ಲ. ಕಷ್ಟಪಟ್ಟು ದುಡಿದ ಬೆಳೆಗೆ ಲಾಭ ಇರಲಿ, ನಷ್ಟವಾಗದಂತೆ ತಡೆಯೋ ಕೆಲಸವನ್ನೂ ಸರ್ಕಾರ ಮಾಡುತ್ತಿಲ್ಲ.
ಸರ್ಕಾರದ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ಜಾಣ ಕುರುಡುತನ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ನಮ್ಮದು ರೈತ ಪರ ಸರ್ಕಾರ ಅಂತ ವೇದಿಕೆಯಲ್ಲಿ ಭಾಷಣ ಮಾಡುವ ಸರ್ಕಾರದ ಪ್ರತಿನಿಧಿಗಳು ಅದ್ಯಾವಾಗ ರೈತರ ಹಿತ ಕಾಪಾಡುತ್ತಾರೋ ಕಾದು ನೋಡಬೇಕು.
Recommended Video