ಚಿಕ್ಕಮಗಳೂರಲ್ಲಿ 6 ಮತದ ಸೋಲು; ಕಾಂಗ್ರೆಸ್ ಕೋರ್ಟ್ಗೆ!
ಚಿಕ್ಕಮಗಳೂರು, ಡಿಸೆಂಬರ್ 14; ಚಿಕ್ಕಮಗಳೂರು ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 6 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮರು ಮತ ಏಣಿಕೆ ಮಾಡಬೇಕು ಎಂದು ಆಗ್ರಹಿಸಿ ಮತ ಎಣಿಕೆ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದರು.
ಮಂಗಳವಾರ 12 ಗಂಟೆ ಹೊತ್ತಿಗೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮತ ಏಣಿಕೆ ಕೇಂದ್ರದ ಎದುರು ಜಮಾವಣೆಗೊಂಡ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಮತ ಏಣಿಕೆ ಕೇಂದ್ರಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹರಸಾಹಸಪಟ್ಟು ತಡೆದರು.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ 1,188 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದರು. ಎಎಪಿ ಅಭ್ಯರ್ಥಿ ಡಾ. ಸುಂದರಗೌಡ 1 ಮತ ಪಡೆದರು. ಉಳಿದಂತೆ 39 ಮತಗಳು ತಿರಸ್ಕೃತಗೊಂಡವು.
ಗಾಯತ್ರಿ ಶಾಂತೇಗೌಡ ಮಾತನಾಡಿ, "ತಾಂತ್ರಿಕ ಕಾರಣದಿಂದ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಹಾಗಾಗಿ ಮರು ಎಣಿಕೆಯಾಗಬೇಕೆಂದು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಮರುಎಣಿಕೆ ಮಾಡುವಂತೆ ಹೈಕೋರ್ಟ್ಗೆ ಹೋಗುತ್ತೇವೆ" ಎಂದು ಹೇಳಿದರು.

ಜಿಲ್ಲಾಧಿಕಾರಿ ಕಾರಿಗೆ ಮುತ್ತಿಗೆ
ಮರು ಮತ ಏಣಿಕೆ ನಡೆಸಲು ಪ್ರತಿಭಟನಾಕಾರರು ಒತ್ತಾಯ ಮಾಡುವ ವೇಳೆಯಲ್ಲಿಯೇ ಮತ ಏಣಿಕೆ ಕೇಂದ್ರದಿಂದ ಹೊರಟ ಜಿಲ್ಲಾಧಿಕಾರಿಗಳ ಕಾರನ್ನು ಸುತ್ತುವರೆದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕಾರನ್ನು ಸುತ್ತುವರೆದ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಪಲೀಸರು ಹರಸಾಹಸ ಪಡುವಂತಾಯಿತು. ಸ್ವತ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ಎಚ್. ಅಕ್ಷಯ್ ನೇತೃತ್ವದಲ್ಲಿ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಿ ಕಾರು ತೆರಳಲು ಅವಕಾಶ ಮಾಡಿಕೊಡಲಾಯಿತು.

ಬಿಜೆಪಿ ಅಭ್ಯರ್ಥಿ ಎದುರು ಆಕ್ರೋಶ
ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ಪ್ರಮಾಣ ಪತ್ರ ಪಡೆಯಲು ಮತ ಏಣಿಕೆ ಕೇಂದ್ರಕ್ಕೆ ಆಗಮಿಸಿದ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗುತ್ತಾ ಎಂ. ಕೆ. ಪ್ರಾಣೇಶ್ಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ನೂರಾರು ಪೊಲೀಸರ ನಡುವೆಯೇ ಆಕ್ರೋಶ ವ್ಯಕ್ತಪಡಿಸುತ್ತಾ ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ಮೇಲೆರಗಲು ಯತ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ತ್ರಾಸದಾಯಕವಾಗಿಯೇ ಪ್ರತಿಭಟನಾಕಾರರನ್ನು ಹಿಂದೆಕ್ಕೆ ತಳ್ಳಿ ಎಂ. ಕೆ. ಪ್ರಾಣೇಶ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರನ್ನು ಮತ ಏಣಿಕೆ ಕೇಂದ್ರಕ್ಕೆ ಕಳುಹಿಸಿದರು.

ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ
ಬಿಜೆಪಿ ಅಭ್ಯರ್ಥಿ ಪ್ರಾಣೇಶ್ಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ ವಿಷಯ ತಿಳಿದ ಬಿಜೆಪಿ ಕಾರ್ಯಕರ್ತರು ತಮ್ಮ ಕಚೇರಿಯಿಂದ ಮತ ಏಣಿಕೆ ಕೇಂದ್ರದ ಕಡೆಗೆ ತಂಡೋಪತಂಡವಾಗಿ ಬಂದು ಕಾಂಗ್ರೆಸ್ಗೆ ಧಿಕ್ಕಾರ ಕೂಗತೊಡಗಿದರು. ಇದರಿಂದ ಮತ್ತೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ಈ ವೇಳೆ ಮತ್ತೆ ಮಧ್ಯೆ ಪ್ರವೇಶಿಸಿದ ಪೊಲೀಸರು ಹರಸಾಹಸ ಪಟ್ಟು ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಬ್ಯಾರಿಕೇಡ್ ಹಾಕಿ ಅಂತರ ಇರುವಂತೆ ನೋಡಿಕೊಂಡರು. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರು ಸಹ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಮನವೊಲಿಸುವ ಪ್ರಯತ್ನ ವಿಫಲ
ಕಾಫಿನಾಡಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಯ ಘಳಿಗೆಯವರೆಗೂ ಗೆಲುವು ಯಾರಿಗೆ? ಎಂಬುದು ನಿರ್ಧಾರವಾಗದ ಕಾರಣ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿತ್ತು. ಈ ನಡುವೆ ಕೊನೆಗೆ ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ಕೇವಲ 6 ಮತಗಳಿಂದ ತ್ರಾಸದಾಯಕವಾಗಿ ಗೆದ್ದ ಬಳಿಕ ಬಿಜೆಪಿ ಪಾಳಯದಲ್ಲಿ ಖುಷಿ ಮನೆಮಾಡಿದೆ. ಕೂಡಲೇ ಮರು ಏಣಿಕೆಗೆ ಕಾಂಗ್ರೆಸ್ ಪಟ್ಟು ಹಿಡಿದು ಪ್ರತಿಭಟನೆ ನಡೆಸಿತ್ತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ಹೆಚ್. ಅಕ್ಷಯ್ ಪ್ರತಿಭಟನಾಕರರ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ತಮ್ಮ ಕಾರ್ಯಕರ್ತರನ್ನು ದು:ಖ ಭರಿತರಾಗಿಯೇ ಸಮಾಧಾನ ಪಡಿಸಿದರು. ಈ ವೇಳೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಕಣ್ಣೀರಾಕಿದರು.












Click it and Unblock the Notifications