ಬಿಜೆಪಿ 37 ಸ್ಥಾನಕ್ಕೆ ಬಂದು ಕೂರುವ ಕಾಲ ದೂರವಿಲ್ಲ; ಮಧು ಬಂಗಾರಪ್ಪ
ಚಿಕ್ಕಮಗಳೂರು, ನವೆಂಬರ್ 28: ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ದರ್ಶನವನ್ನು ಸೋಮವಾರ ನಡೆಸಿದ್ದಾರೆ. 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕಾರ ಮಾಡಿದ್ದಾರೆ, ಅಲ್ಲದೇ ಹಲವ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಿಎಂ ಸಿದ್ದರಾಮಯ್ಯನವರ ಜನತಾ ದರ್ಶನಕ್ಕೆ "ಬೋಗಸ್ ಜನತಾ ದರ್ಶನ" ಎಂದು ಕರೆದಿದ್ದರು. ಇದಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವರು, "ಬಿಜೆಪಿಯವರು 100ರಿಂದ 67ಕ್ಕೆ ಬಂದಿದ್ದಾರೆ. 37 ಸ್ಥಾನಕ್ಕೆ ಬಂದು ಕೂರುವ ಕಾಲ ದೂರವಿಲ್ಲ" ಎಂದು ವ್ಯಂಗ್ಯವಾಡಿದರು.
"ಆರ್. ಅಶೋಕ ಅವರಿಗೆ ಅನುಭವದ ಕೊರತೆ ಇದೆ. ವಿರೋಧ ಪಕ್ಷದ ನಾಯಕರಾಗಿ ಒಂದು ವಾರವಾಗಿದೆ. ಬಿಜೆಪಿ ಆರು ತಿಂಗಳು ರಜೆ ನೀಡಿತ್ತು. ಹಾಗಾಗಿ, ಈಗ ಅನುಭವದ ಕೊರತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ" ಎಂದರು.
"ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿದೆ. ಅವರ ಕುಂದು-ಕೊರತೆಗಳನ್ನು ಆಲಿಸಿದೆ. ಆದರೆ, ಉಪಮುಖ್ಯಮಂತ್ರಿ ಆಗಿದ್ದವರು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. 100 ರಿಂದ 67ಕ್ಕೆ ಬಂದಿದ್ದಾರೆ. ಬಹುಶಃ ಅವರು 37ಕ್ಕೆ ಬಂದು ಕೂರುವ ಕಾಲ ದೂರವಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ" ಎಂದು ಮಧು ಬಂಗಾರಪ್ಪ ಹೇಳಿದರು.
ವಿ. ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, "ಯಾರೇ ಪಕ್ಷ ಸೇರಿದರು. ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರೇ ಹೇಳಿದ್ದಾರೆ. ಅದನ್ನು ನಾನೂ ಸ್ವಾಗತ ಮಾಡುತ್ತೇನೆ. ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ" ಎಂದರು.
ಮಕ್ಕಳ ಜೊತೆ ಮಾತನಾಡಿದ ಸಚಿವರು; ಚಿಕ್ಕಮಗಳೂರು ಪ್ರವಾಸದ ವೇಳೆ ಮಕ್ಕಳ ಜೊತೆ ಮಕ್ಕಳಂತೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮಕ್ಕಳ ಬಳಿ ನೀವು ಲಿಂಗಾಯುತರಾ?, ಮೊಟ್ಟೆ ತಿನ್ನೋದಿಲ್ವಾ?, ಬೇಡ ಬಿಡಿ ತಿನ್ನಬೇಡಿ, ಮೊಟ್ಟೆ ಬದಲು ಚಿಕ್ಕಿ ಕೊಡುತ್ತಾರೆ. ತಿನ್ನುತ್ತೀರಾ, ತಿನ್ನಬೇಕು" ಎಂದರು.
"ಶಾಲೆಯಲ್ಲಿ ಹಾಲು, ಮೊಟ್ಟೆ, ಊಟ ಎಲ್ಲಾ ಸರಿಯಾಗಿ ಕೊಡುತ್ತಾರಾ?" ಎಂದು ಮಕ್ಕಳ ಬಳಿ ಕೇಳಿದರು. ಸಮಸ್ಯೆಯನ್ನು ಸಚಿವರ ಬಳಿ ಹೇಳಿಕೊಳ್ಳಲು ಅಲ್ಪ ಸಂಖ್ಯಾತರ ಇಲಾಖೆಯ ಶಿಕ್ಷಕರು ಬಂದಿದ್ದರು. ಸಚಿವರು, "ಸರ್ ಇವರಿಗೆ ಸ್ವಲ್ಪ ಹೆಲ್ಪ್ ಮಾಡಿ" ಎಂದು ಸಿಇಓ ಡಾ. ಗೋಪಾಲಕೃಷ್ಣಗೆ ಸಚಿವರು ಮನವಿ ಮಾಡಿಕೊಂಡರು.
ಪುಟ್ಟ ಮಕ್ಕಳ ಜೊತೆ ಮಕ್ಕಳಂತೆ ಮಾತನಾಡಿದ ಸಚಿವರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ, ನಿಮ್ಮ ಸಮಸ್ಯೆ ಬಗ್ಗೆ ನಾನು ಮಾತನಾಡುತ್ತೆನೆ. ನಿಮ್ಮ ಸಮಸ್ಯೆ ನನ್ನ ವ್ಯಾಪ್ತಿಗೆ ಬರಲ್ಲ. ಮಹದೇವಪ್ಪರಿಗೆ ಹೇಳುತ್ತೇನೆ ಎಂದರು.












Click it and Unblock the Notifications