ಚಿಕ್ಕಮಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ನಲ್ಲೇ ದೋಷವಿದೆಯಾ?
ಚಿಕ್ಕಮಗಳೂರು, ಜೂನ್ 15: ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪರೀಕ್ಷಾ ವರದಿಯಲ್ಲಿ ಆದ ಯಡವಟ್ಟು ಮತ್ತೆ ಮರುಕಳಿಸುವಂತಿದೆ. ಇದು ಪರೀಕ್ಷಾ ಲ್ಯಾಬ್ ನಲ್ಲೇ ದೋಷವಿದೆಯಾ ಎಂಬ ಪ್ರಶ್ನೆಯೂ ಹುಟ್ಟುವಂತೆ ಮಾಡಿದೆ.
ಗ್ರೀನ್ ಝೋನ್ ಆಗಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲು ವೈದ್ಯರೊಬ್ಬರಲ್ಲಿ ಹಾಗೂ ಗರ್ಭಿಣಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಇದೆ ಎಂದು ಮಾಹಿತಿ ನೀಡಲಾಗಿತ್ತು. ನಂತರ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ನಿರಂತರ ಏಳು ಬಾರಿ ಪರೀಕ್ಷೆ ನಡೆಸಿದ ನಂತರ ವೈದ್ಯರಲ್ಲಿ ನೆಗೆಟಿವ್ ಎಂಬ ಫಲಿತಾಂಶ ಕಂಡುಬಂದಿತ್ತು. ನಂತರ ಗರ್ಭಿಣಿ ವರದಿಯೂ ನೆಗೆಟಿವ್ ಎಂದೇ ಬಂದಿತ್ತು.
ಹೀಗೆ ಆರೋಗ್ಯದ ವಿಷಯದಲ್ಲಿ ಯಡವಟ್ಟು ಮಾಡಿ, ಜನರಲ್ಲಿ ಅನಗತ್ಯ ಆತಂಕ ಮೂಡಿಸಿದ್ದಕ್ಕೆ ಆಕ್ರೋಶವೂ ವ್ಯಕ್ತಗೊಂಡಿತ್ತು. ಇದೀಗ ಜೂನ್ 11ರಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎನ್ನಲಾದ ಕಡೂರಿನ ವಿದ್ಯಾರ್ಥಿಯಲ್ಲೂ ಅದೇ ಯಡವಟ್ಟು ಆಗಿದೆಯಾ ಎಂಬ ಅನುಮಾನ ಮೂಡಿದೆ.

ಈ ಬಾಲಕ ಐಸೊಲೇಶನ್ ವಾರ್ಡ್ ಗೆ ದಾಖಲಾದ ನಂತರ ಪರೀಕ್ಷಾ ವರದಿ ಮೂರು ಬಾರಿಯೂ ನೆಗೆಟಿವ್ ಬಂದಿರುವುದು ಇದಕ್ಕೆ ಕಾರಣವಾಗಿದೆ. ಸದ್ಯಕ್ಕೆ ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆಗೆ ಮೊದಲ ಬಾರಿ ತೆಗೆದ ಗಂಟಲ ದ್ರವವನ್ನು ರವಾನಿಸಿದ್ದು, ನಾಳೆ ವರದಿ ಲಭ್ಯವಾಗುವ ಸಾಧ್ಯತೆ ಇದೆ. ಬಾಲಕನಿಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆಯನ್ನೂ ನೀಡಲಾಗುತ್ತಿಲ್ಲ. ಆದರೆ ಜಿಲ್ಲೆಯ ಜನರಲ್ಲಿ ಲ್ಯಾಬ್ ನ ಕಾರ್ಯವೈಖರಿ ಮೇಲೆಯೇ ಅನುಮಾನ ಮೂಡಿರುವುದು ಸುಳ್ಳಲ್ಲ.












Click it and Unblock the Notifications