ಗಾಯತ್ರಿ ಶಾಂತೇಗೌಡ ತಿರುಪತಿ ಪ್ರವಾಸದಲ್ಲಿರುವ ವೇಳೆ ಐಟಿ ದಾಳಿ: ಹೆಚ್ಚಿದ ಅನುಮಾನ
ಚಿಕ್ಕಮಗಳೂರು, ನವೆಂಬರ್17 : ಮಾಜಿ ಎಮ್ಎಲ್ಸಿ, ಕಾಂಗ್ರೆಸ್ ಪಕ್ಷದ ನಾಯಕಿ ಗಾಯತ್ರಿ ಶಾಂತೇಗೌಡರ ನಿವಾಸ ಸೇರಿದಂತೆ ಅವರ ಸಂಬಂಧಿಕರ ಮನೆಗಳ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿರುವ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ಹಾಗೂ ಬೇಲೂರಿನಲ್ಲಿರುವ ಗಾಯತ್ರಿ ಶಾಂತೇಗೌಡ ಅವರ ಅಳಿಯನ ಮನೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಗಾಯತ್ರಿ ಶಾಂತೇಗೌಡ ಮನೆ ಮೇಲೆ ಐಟಿ ದಾಳಿ: ಸಿ.ಟಿ ರವಿ ಹುನ್ನಾರ ಎಂದ ಕಾಂಗ್ರೆಸ್ ಕಾರ್ಯಕರ್ತರು
ಐಟಿ ಅಧಿಕಾರಿಗಳ ತಂಡ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿರುವ ಗಾಯತ್ರಿ ಶಾಂತೇಗೌಡ ಒಡೆತನದಲ್ಲಿರುವ ಕ್ರಷರ್ ಮೇಲೆ ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುವವರ ಮನೆಗಳ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ತಿರುಪತಿ ಪ್ರವಾಸದಲ್ಲಿರುವ ಗಾಯತ್ರಿ ಶಾಂತೇಗೌಡ
ಗಾಯತ್ರಿ ಶಾಂತೇಗೌಡ ಹಾಗೂ ಅವರ ಪತಿ ಕಳೆದ ಎರಡು ದಿನಗಳ ಹಿಂದೆ ತಿರುಪತಿ ಯಾತ್ರೆಗೆ ತೆರಳಿದ್ದಾರೆ. ಅವರು ಮನೆಯಲ್ಲಿ ಇಲ್ಲದಿರುವ ಸಂದರ್ಭದಲ್ಲೇ ಐಟಿ ದಾಳಿ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಗುರುವಾರ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಅವರ ಮನೆಯಲ್ಲಿ ಕೆಲಸದವರು ಮತ್ತು ಸಂಬಂಧಿಕರು ಮಾತ್ರ ಇದ್ದು, ದಿಢೀರ್ ದಾಳಿಯಿಂದ ಮನೆಯಲ್ಲಿದ್ದವರು ಕಂಗಾಲಾಗಿದ್ದಾರೆ. ಮನೆ ಮಾಲೀಕರು ಇಲ್ಲದಿರುವುದನ್ನು ಕೆಲಸದವರು ಅಧಿಕಾರಿಗಳ ಗಮನಕ್ಕೆ ತಂದರೂ ಐಟಿ ಸಿಬ್ಬಂದಿ ಪರಿಶೀಲನೆಯನ್ನು ಮುಂದುವರಿಸಿದ್ದಾರೆಂದು ತಿಳಿದು ಬಂದಿದೆ.
ತಿರುಪತಿಯಾತ್ರೆಗೆ ತೆರಳಿರುವ ಗಾಯತ್ರಿ ಶಾಂತೇಗೌಡ ದಂಪತಿ ಇನ್ನೂ ಹಿಂದಿರುಗಿಲ್ಲ. ಮನೆ ಮಾಲೀಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಐಟಿ ದಾಳಿ ನಡೆಸಿರುವುದನ್ನು ಕಾಂಗ್ರೆಸ್ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಗಾಯತ್ರಿ ಶಾಂತೇಗೌಡ ಅವರ ಮನೆ ಮುಂದೆ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದ್ದು, ಶಾಸಕ ಸಿ.ಟಿ ರವಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಟಿ ದಾಳಿಯ ಹಿಂದೆ ಸಿ.ಟಿ.ರವಿ ಹುನ್ನಾರ ಇದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಕಾಂಗ್ರೆಸ್ ನಾಯಕಿ, ಮಾಜಿ ಎಮ್ಎಲ್ಸಿ ಗಾಯತ್ರಿ ಶಾಂತೇಗೌಡ ಮನೆ ಸೇರಿದಂತೆ ಸಂಬಂಧಿಕರ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ಶಾಸಕ ಸಿ.ಟಿ.ರವಿ ಷಡ್ಯಂತ್ರ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಐಟಿ ದಾಳಿ ಖಂಡಿಸಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ನಗರದಲ್ಲಿ ಧರಣಿ ನಡೆಸಿ ಬಿಜೆಪಿ ಸರಕಾರ ಹಾಗೂ ಸಿ.ಟಿ.ರವಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.
ಗಾಯತ್ರಿ ಶಾಂತೇಗೌಡ ಅವರ ಮನೆ ಮುಂದೆ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದ್ದು, ಶಾಸಕ ಸಿ.ಟಿ ರವಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಐಟಿ ದಾಳಿಯ ಹಿಂದೆ ಸಿ.ಟಿ.ರವಿ ಹುನ್ನಾರ ಇದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ಟಿ ರವಿ ಹೋದಲ್ಲೆಲ್ಲಾ ಆಸ್ತಿ, ಜಮೀನು ಮಾಡಿದ್ದಾರೆ
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು, "ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಶಾಸಕರಾಗಿರುವ ಸಿ.ಟಿ ರವಿ ಸರ್ಕಾರ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆ. ಸಿ.ಟಿ ರವಿ ಅವರ ಸಂಬಂಧಿ ಸುದರ್ಶನ್ ಎಂಬಾತ ಗುತ್ತಿಗೆದಾರ ಮೂಲಕ ಕಳಪೆ ಕಾಮಗಾರಿಗಳನ್ನು ಮಾಡಿಸಿ ಅನುದಾನವನ್ನು ಕೊಳ್ಳೆಹೊಡೆದು ಕೋಟ್ಯಧೀಶ್ವರ ಆಗಿದ್ದಾರೆ. ಸಿ.ಟಿ ರವಿ ಅವರ ತಂದೆ ಹೆಸರಿನಲ್ಲಿ ಕೇವಲ 8 ಎಕರೆ ಜಮೀನು ಈ ಹಿಂದೆ ಇತ್ತು. ಇದರ ಹೊರತಾಗಿ ಸಿಟಿ ರವಿಗೆ ಯಾವುದೇ ಆಸ್ತಿ ಇರಲಿಲ್ಲ. ಈಗ ಸಿ.ಟಿ ರವಿ ಹೋದಲ್ಲೆಲ್ಲಾ ಆಸ್ತಿ, ಜಮೀನು ಮಾಡಿದ್ದಾರೆ. ಇಷ್ಟು ಆಸ್ತಿ ಸಿ.ಟಿ ರವಿಗೆ ಎಲ್ಲಿಂದ ಬಂತು ಎಂಬುದನ್ನು ಐಟಿ ಅಧಿಕಾರಿಗಳು ಮೊದಲು ತನಿಖೆ ಮಾಡಬೇಕು. ಐಟಿ ಅಧಿಕಾರಿಗಳಿಗೆ ತಾಕತ್ತಿದ್ದರೆ ಸಿ.ಟಿ ರವಿ ಹಾಗೂ ಆತನ ಸಂಬಂಧಿ ಸುದರ್ಶನ್ ಅವರ ಮನೆಗಳ ಮೇಲೆ ದಾಳಿ ಮಾಡಲಿ" ಎಂದು ಸವಾಲು ಹಾಕಿದರು.
ಸಿ.ಟಿ ರವಿಗೆ ಚುನಾವಣೆಯಲ್ಲಿ ಸೋಲುವ ಭೀತಿ
"ಸಿ.ಟಿ ರವಿ 20 ವರ್ಷಗಳಿಂದ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಒಂದೇ ಒಂದು ಶಾಶ್ವತ ಯೋಜನೆಯನ್ನು ಜಾರಿ ಮಾಡಿಲ್ಲ. ಚುನಾವಣೆ ಎದುರಿಸಲೂ ಹಣ ಇಲ್ಲದ ಸಂದರ್ಭದಲ್ಲಿ ನಾವೇ ಹಣ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿದ್ದೇವೆ. ಆತನ ಭ್ರಷ್ಟಾಚಾರ ಕಂಡು ಬಿಜೆಪಿ ತೊರೆದಿದ್ದೇವೆ. ಈಗ ಸರಕಾರಿ ಅನುದಾನವನ್ನು ಕೊಳ್ಳೆ ಹೊಡೆದು ಕೋಟಿ ರವಿ ಆಗಿದ್ದಾನೆ. ವೈಯಕ್ತಿಕ ದ್ವೇಷ ಹಾಗೂ ಈ ಬಾರಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ತಮ್ಮ ಎದುರಾಳಿಗಳನ್ನು ಐಟಿ ಅಸ್ತ್ರ ಬಳಸಿ ನೈತಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಸಿ.ಟಿ ರವಿಗೆ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಲಿ ನೋಡೋಣ ಎಂದು ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಟಿ ಅಧಿಕಾರಿಗಳು ಸದ್ಯ ಗಾಯತ್ರಿ ಶಾಂತೇಗೌಡ ಅವರ ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಮನೆ ಮುಂದೆ ಭಾರಿ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ನೆರೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಐಟಿ ಅಧಿಕಾರಿಗಳ ಕೆಲಸಕ್ಕೆ ಭದ್ರತೆ ಒದಗಿಸಿದ್ದಾರೆ.