ಚಿಕ್ಕಮಗಳೂರು: "ಕೈ" ಮುಖಂಡ ಅಕ್ಮಲ್ ಮನೆ ಮೇಲೆ ಐಟಿ ದಾಳಿ, ನಾವೇ ಟಾರ್ಗೆಟ್ ಯಾಕೆ?, ಕಾಂಗ್ರಸ್ ಪ್ರಶ್ನೆ
ಚಿಕ್ಕಮಗಳೂರು, ಜನವರಿ, 16: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿಯಾಗಿದೆ. ಕಳೆದ ನವೆಂಬರ್ 17ರಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೂ ಐಟಿ ದಾಳಿಯಾಗಿತ್ತು. ಮದುವೆಗೆ ಹೋಗುವ ಸೋಗಿನಲ್ಲಿ 10ಕ್ಕೂ ಹೆಚ್ಚು ಕಾರಿನಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ಬಂದು ದಾಳಿ ಮಾಡಿದ್ದರು. ಸೋಮವಾರ (ಜನವರಿ 16) ಮತ್ತೆ ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಅಕ್ಮಲ್ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
8ಕ್ಕೂ ಹೆಚ್ಚು ಕಾರಿನಲ್ಲಿ ಬಂದಿರುವ ಅಧಿಕಾರಿಗಳು ಏಕಕಾಲದಲ್ಲಿ ಅಕ್ಮಲ್ ಮನೆ, ಕಚೇರಿ, ಸೋದರನ ಮನೆ ಹಾಗೂ ಕಾಫಿ ಕ್ಯೂರಿಂಗ್ ಮೇಲೂ ದಾಳಿ ಮಾಡಿದ್ದಾರೆ. ಪ್ರಸ್ತುತ ಅಕ್ಮಲ್ ಬೆಂಗಳೂರಿನಲ್ಲಿ ಇದ್ದು, ಅವರ ಅನುಪಸ್ಥಿತಿಯಲ್ಲಿ ಮನೆ-ಕಚೇರಿಯಲ್ಲಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಎರಡು ತಿಂಗಳ ಅವಧಿಯಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಐಟಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ಚುನಾವಣೆ ಸಂದರ್ಭದಲ್ಲಿ ಹೀಗೆ ಮೇಲಿಂದ ಮೇಲೆ ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದು ಬಿಜೆಪಿ ಕಾಂಗ್ರೆಸ್ಸಿಗರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ. ಐಟಿ ಅಧಿಕಾರಿಗಳು ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಹಾಗೂ ಮುಖಂಡರ ಮನೆ ಮೇಲೆ ಈ ಹೊತ್ತಿನಲ್ಲಿ ಯಾವುದೇ ದಾಳಿ ಮಾಡುವುದಿಲ್ಲ. ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಮನೆ ಮೇಲೆ ಮಾತ್ರ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಸರ್ಕಾರ ಹಾಗೂ ಐಟಿ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಗಣಿ ಉದ್ಯಮಿಗಳ ಮನೆ ಮೇಲೆ IT ದಾಳಿ
ಹಾಗೆಯೇ ಬಳ್ಳಾರಿಯಲ್ಲಿ ಪ್ರಭಾವಿ ಸಚಿವರ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ಕೆಲ ಗಣಿ ಉದ್ಯಮಿಗಳ ಮನೆ ಮೇಲೆ (ಜನವರಿ 14) ಐಟಿ ದಾಳಿ ನಡೆಸಿತ್ತು. ಹಾಗೂ ಅವರ ಸ್ಪಾಂಜ್ ಉಕ್ಕಿನ ಕಾರ್ಖಾನೆಗಳ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದರು.
ಆಪ್ತನ ಕಚೇರಿ, ನಿವಾಸದ ಮೇಲೆ ಐಟಿ ದಾಳಿ ವಿಚಾರವಾಗಿ ಬಳ್ಳಾರಿಯಲ್ಲಿ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದರು. ಅಲ್ಲದೇ ತಮ್ಮ ಪಾಲುದಾರಿಕೆಗೆ ಸೇರಿದ್ದೆನ್ನಲಾದ ಸ್ಪಾಂಜ್ ಉಕ್ಕಿನ ಕಾರ್ಖಾನೆ ಮೇಲೆ ಐ.ಟಿ ದಾಳಿ ನಡೆದಿದೆ ಎಂಬ ಆರೋಪವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ತಳ್ಳಿಹಾಕಿದ್ದರು. "ನಾನು ಯಾವ ಕಾರ್ಖಾನೆಯಲ್ಲೂ ಪಾಲುದಾರಿಕೆ ಹೊಂದಿಲ್ಲ. ಗಣಿಗಾರಿಕೆ ನಡೆಯುವ ಸಂದರ್ಭದಲ್ಲಿ ಕಾರ್ಖಾನೆ ಮಾಡಲಿಲ್ಲ. ಐಟಿ ದಾಳಿಗಳು ನಡೆಯುವುದು ಸಾಮಾನ್ಯವಾಗಿದೆ. ಐಟಿ ದಾಳಿಯ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಯಾರ ಮೇಲೆ ದಾಳಿ ನಡೆದರೂ ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ," ಎಂದು ಹೇಳಿದ್ದರು.