ಮಲೆನಾಡಿನಲ್ಲಿ ಮುಂದುವರೆದ ಮಳೆ ಅಬ್ಬರ: ಮೈದುಂಬಿ ಹರಿದ ಭದ್ರಾ ನದಿ
ಚಿಕ್ಕಮಗಳೂರು, ಜೂನ್ 16: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕೊಪ್ಪ ತಾಲೂಕಿನ ಜಯಪುರದಿಂದ ಬಸರಿಕಟ್ಟೆ ಹೋಗುವ ರಸ್ತೆ ಮಾರ್ಗದಲ್ಲಿ ಮರ ಉರುಳಿ ಬಿದ್ದಿದೆ. ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರವೂ ಸ್ಥಗಿತಗೊಂಡಿದೆ.
Recommended Video
ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಕಳಸ- ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿಯು ಮೈದುಂಬಿ ಹರಿಯುತ್ತಿರುವುದರಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಸಂಭವವಿದೆ.
ಹೆಬ್ಬಾಳೆ ಸೇತುವೆ ಮುಳುಗಡೆಯಾಗಲು ಎರಡೇ ಅಡಿ ಬಾಕಿ ಇದ್ದು, ಮಳೆ ಹೀಗೆ ಮುಂದುವರಿದರೆ ಸಂಜೆ ವೇಳೆಗೆ ಮುಳುಗುವ ಸಾಧ್ಯತೆಯಿದೆ. ಕಳೆದ ಮೂರು ವರ್ಷದಿಂದ ಹೆಬ್ಬಾಳೆ ಸೇತುವೆ ಮುಳುಗಡೆಯಾಗುತ್ತಿದೆ. ಈ ಬಾರಿಯೂ ಮಳೆ ಹೆಚ್ಚಾದರೆ ಮಲೆನಾಡಿಗರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದ ಬಳಿ ಧರೆ ಕುಸಿತವಾಗಿದೆ. ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಚಾರ್ಮಾಡಿ ಘಾಟಿಯಲ್ಲೂ ಭಾರೀ ಮಳೆಯಾಗುತ್ತಿದೆ.

ಪ್ರತಿ ಬಾರಿ ಮುಂಗಾರು ಸಂದರ್ಭದಲ್ಲಿ ಭಾರೀ ಗಾಳಿ, ಮಳೆಗೆ ರಸ್ತೆ ಮೇಲೆ ಮರ ಮುರಿದು ಬೀಳುವುದು, ಗುಡ್ಡ ಕುಸಿಯುವುದು, ರಸ್ತೆ ಸಂಚಾರ ಬಂದ್ ಆಗುವುದು ಸಾಮಾನ್ಯವಾಗಿದೆ. ಇದು ಇನ್ನೂ ಹೆಚ್ಚಾದರೆ ಮಲೆನಾಡಿಗರಲ್ಲಿ ಆತಂಕ ಮನೆಮಾಡಲಿದೆ. ಮುಂಗಾರು ಮಳೆ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ವೈಭವ ನೋಡಲು ಪ್ರವಾಸಿಗರು ತುದಿಗಾಲಲ್ಲಿ ನಿಂತಿದ್ದು, ಲಾಕ್ಡೌನ್ ಹಾಗೂ ಅತಿಯಾದ ಮಳೆ ಅವರ ಕನಸಿಗೆ ತಣ್ಣೀರೆರಚಬಹುದು.












Click it and Unblock the Notifications