ಮಳೆ ರೌದ್ರ ನರ್ತನ ಮಲೆನಾಡು ತತ್ತರ, ಕಾಫಿ ಬೆಳೆಗಾರರ ಬದುಕು ದುಸ್ತರ
ಚಿಕ್ಕಮಗಳೂರು,ಜು.12: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಆರ್ಭಟಿಸುತ್ತಿರುವ ಮಳೆ ಮುಂದುವರೆದಿದ್ದು, ಎರಡು ದಿನಗಳಿಂದ ಇನಷ್ಟು ತೀವ್ರತೆ ಪಡೆದುಕೊಂಡಿದೆ. ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಹಲವೆಡೆ ಗುಡ್ಡ ಕುಸಿದಿದೆ. ಕಲ್ಲು ಮಣ್ಣು ರಸ್ತೆ ಮೇಲೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಚಿಕ್ಕಮಗಳೂರು ತಾಲ್ಲೂಕು ಅರೆನೂರು ಗ್ರಾಮದ ರಾಮು ಎಂಬುವರಿಗೆ ಸೇರಿದ ಕಾಫಿತೋಟದಲ್ಲಿ ಗುಡ್ಡಕುಸಿದು ಅಪಾರ ಹಾನಿಯಾಗಿದೆ. ಅಂದಾಜು 100 ಅಡಿಗಳಿಂದ ಗುಡ್ಡ ಕುಸಿದು ಕಾಫಿ ಅಡಿಕೆ, ಕಾಳುಮೆಣಸು ಬೆಳೆಗಳಿಗೆ ಹಾನಿಯಾಗಿದೆ.
ಕರಾವಳಿ ಕಡೆಗೆ ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ: ಇಲ್ಲಿದೆ ಕೆಲ ಸೂಚನೆಗಳು!
ಆವತಿ ಹೋಬಳಿ ಕಸ್ಕೆಮನೆ ಗ್ರಾಮದ ಧರ್ಮೇಗೌಡ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಗುಡ್ಡಕುಸಿದು ಕಾಫಿಗಿಡಗಳು ಮಣ್ಣು ಪಾಲಾಗಿದೆ. ಕಳಸ ತನೂಡಿ ಗ್ರಾಮದ ಉಮೇಶ್ ಮನೆ ಕುಸಿದು ಬಿದ್ದಿದೆ. ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ತಾಲ್ಲೂಕು ಸಬ್ಬಿಗ್ರಾಮದ ರಾಮಮ್ಮ ಎಂಬುವರ ಮನೆ ನೆಲಸಮಗೊಂಡಿದೆ.
ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಚಿಕ್ಕಮಗಳೂರು ತಾಲ್ಲೂಕು ಬಾಳೆಹೊನ್ನೂರು ಸಮೀಪ ಮಣಬೂರು ಗ್ರಾಮದ ಕಿರುಸೇತುವೆ ಹಳ್ಳದ ನೀರಿನಲ್ಲಿ ಮುಚ್ಚಿದ್ದು, ಹಳ್ಳದಾಟಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ರಸ್ತಬದಿ ಧರೆಕುಸಿದಿದೆ.
ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್!
24 ಗಂಟೆಯಲ್ಲಿ 33 ಮನೆಗಳಿಗೆ ಹಾನಿಯಾಗಿದೆ. 19.40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 147 ವಿದ್ಯುತ್ ಕಂಬ, 9 ಸೇತುವೆ, 2.9 ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದೆ ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಪಾತ್ರದ ತೋಟಗಳು ಜಾಲವೃತಗೊಂಡಿವೆ. ಮಂಗಳವಾರ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹೊಸಪೇಟೆ ಗ್ರಾಮದ ತೋಟದ ಹಳ್ಳದಲ್ಲಿ ಕೊಚ್ಚಿಹೋದ ವಿದ್ಯಾ ರ್ಥಿನಿ ಸುಪ್ರೀತ ಶೋಧ ಕಾರ್ಯ 8ನೇ ದಿನವು ಮುಂದೂವರೆದಿದೆ. ನಿರಂತರವಾಗಿ ಸುರಿಯು ತ್ತಿರುವ ಮಳೆ ಕಾಫಿನಾಡಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಅಬ್ಬರಕ್ಕೆ ಮನೆಗಳು, ವಿದ್ಯುತ್ ಕಂಬ, ಸೇತುವೆ, ಗುಡ್ಡಗಳು ಕುಸಿಯಲಾರಂಭಿಸಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ
ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮ
ಚಂದ್ರದ್ರೋಣ ಪರ್ವತ ತಪ್ಪಲಿನ ಗಿರಿಪ್ರದೇಶದಲ್ಲಿ ನಿರಂತರ ಮಳೆಯಿಂದ ಗುಡ್ಡಗಳು ಕುಸಿದಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿಯಲ್ಲಿ ಸಾಗುವ ಮಾರ್ಗದಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಹೆಚ್ಚು ವಾಹನಗಳಿಗೆ ತೆರಳಲು ಜಿಲ್ಲಾಡಳಿತ ಅವಕಾಶ ನೀಡದೆ, ಕೇವಲ 300 ವಾಹನಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕಾಫಿ, ಅಡಿಕೆ, ಮೆಣಸು ಬೆಳೆಗಳು ಮಣ್ಣುಪಾಲು
ಬಾಳೆಹೊನ್ನೂರು ಮಾರ್ಗದ ಮಾಗೋಡು ಸಮೀಪದ ಅರೆನೂರು ಗ್ರಾಮದಲ್ಲಿ 100 ಅಡಿ ಎತ್ತರದಿಂದ ಗುಡ್ಡ ಕುಸಿದಿದ್ದು, ರಾಮು ಎಂಬುವರಿಗೆ ಸೇರಿದ ಕಾಫಿ, ಅಡಿಕೆ, ಮೆಣಸು ಬೆಳೆಗಳಿಗೆ ಹಾನಿಯಾಗಿದೆ. ಆವತಿ ಹೋಬಳಿಯ ಕಸ್ಕೆಮನೆಯಲ್ಲಿ ಗುಡ್ಡಕುಸಿತ ಪರಿಣಾಮ ಧರ್ಮೇಗೌಡ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಮಣ್ಣು ಬಿದ್ದು,ಫಸಲಿಗೆ ಬಂದಿದ್ದ ಕಾಫಿ ಮಣ್ಣುಪಾಲಾಗಿದೆ. ಸಾವಿರಾರು ಕಾಫಿಗಿಡಗಳು ನಾಶವಾಗಿ ಹೆಚ್ಚು ನಷ್ಟ ಉಂಟಾಗಿದೆ. ಸ್ಫೋಟಗೊಳ್ಳುವ ವೇಳೆ ಇಡೀ ಊರೇ ಬೆಚ್ಚಿ ಬೀಳುವ ಹಾಗೆ ಶಬ್ದ ಕೇಳಿಸಿತು. ತೋಟಕ್ಕೆ ಬಂದು ನೋಡಿದರೆ ಪ್ರವಾಹದ ರೀತಿಯಲ್ಲಿ ತೋಟದಲ್ಲಿ ನೀರು ಹರಿಯುತ್ತಿತ್ತು.
ನನ್ನ ಜೀವಮಾನದಲ್ಲೇ ಈ ರೀತಿಯ ಘಟನೆಯನ್ನು ಕಂಡಿಲ್ಲ ಎಂದು ರೈತ ಧರ್ಮೇಗೌಡ ಹೇಳಿದರು. ಘಟನಾ ಸ್ಥಳಕ್ಕೆ ಶಾಸಕ ಎಂ. ಪಿ. ಕುಮಾರಸ್ವಾಮಿ ಭೇಟಿ ನೀಡಿ ಪರೀಶಿಲಿಸಿದ್ದಾರೆ. ಅರೇನೂರು ಗ್ರಾಮ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಈ ಭಾರೀ ಮಳೆಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ನೊಂದಿರುವ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ನೀರು ನುಗ್ಗುವ ಆತಂಕ ರೈತರು
ಸತತ ಮಳೆಗೆ ನಗರ ಹೊರವಲಯದ ನಲ್ಲೂರು ಕೆರೆ ಕೊಡಿ ಬಿದ್ದಿದೆ. ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲೇ ಕೆರೆ ಕೋಡಿ ಬಿದ್ದಿದೆ. ಕೆರೆಕೋಡಿ ಬಿದ್ದಿದ್ದರಿಂದ ಹೊಲ ಗದ್ದೆಗಳಿಗೆ ನೀರು ನುಗ್ಗುವ ಆತಂಕ ರೈತರಲ್ಲಿ ಮನೆಮಾಡಿದೆ. ಮಳೆ, ಗಾಳಿ ಹೊಡೆತಕ್ಕೆ ಮೂಡಿಗೆರೆ ತಾಲೂಕು ಸಬ್ಬಿಗ್ರಾಮದ ರಾಮಮ್ಮ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ನೆಲಸಮಗೊಂಡಿದೆ. ಮನೆಯವರು ನೆಂಟರಮನೆಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೋಟದ ಕೆಲಸ ಕಾರ್ಯಗಳು ಸ್ಥಗಿತ
ಗ್ರಾಮೀಣ ಪ್ರದೇಶದಲ್ಲಿ ಮಳೆ ನಿರಂತವಾಗಿ ಸುರಿಯುತ್ತಿರುವುದರಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಗದ್ದೆಗಳ ಜಲಾವೃತಗೊಂಡಿವೆ. ಕೃಷಿ ಮತ್ತು ತೋಟದ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಮಳೆ ಇಲ್ಲದೆ ಆಗಸದಿಟ್ಟಿಸಿ ನೋಡುತ್ತಿದ್ದ ಸಸಿಮಡಿಗಳು ನೀರಿನಿಂದ ಆವೃತಗೊಂಡಿವೆ. ಶೃಂಗೇರಿಯಲ್ಲಿ ತುಂಗಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಬಾಳೆಹೊನ್ನೂರಿನಲ್ಲಿ ಭದ್ರಾನದಿ ಮತ್ತು ಮೂಡಿಗೆರೆಯ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿಪಾತ್ರದ ತೋಟಗಳು ಜಲಾವೃತಗೊಂಡಿವೆ.
ಒಟ್ಟಾರೆಯಾಗಿ ದಿನವಿಡಿ ಮಳೆನಿರಂತವಾಗಿ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತೋಟಗಳಲ್ಲಿ ಮರಗಳು ಬೀಳುತ್ತಿರುವುದರಿಂದ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಮಳೆಬಿಡುವು ನೀಡುತ್ತಿಲ್ಲ ಹಾಗಾಗಿ ಬೇಸಾಯ ಕಾರ್ಯಸ್ಥಗಿತಗೊಳಿಸಲಾಗಿದೆ.
ಹಳ್ಳದಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿನಿ
ಹೊಸಪೇಟೆ ಗ್ರಾಮದಲ್ಲಿ ತೋಟದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿನಿ ಪತ್ತೆಕಾರ್ಯ 8ನೇ ದಿನದಲ್ಲಿ ಮುಂದುವರೆದಿದೆ. ಬೆಂಗಳೂರಿನ ಎನ್ಡಿಆರ್ಎಫ್, ಅಗ್ನಿಶಾಮಕದಳ, ಸ್ಥಳೀಯ ಈಜುಗಾರರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಿಪತ್ತು ನಿರ್ವಹಣೆ ಘಟಕಗಳು ಶೋಧಕಾರ್ಯ ಮುಂದುವರೆದಿದೆ. ವಿದ್ಯಾರ್ಥಿನಿ ನೀರಿನಲ್ಲಿ ಕೊಚ್ಚಿಹೋಗಿ 8 ದಿನವಾದರೂ ಪತ್ತೆಯಾಗಿಲ್ಲ, ಹೊಸಪೇಟೆಯಿಂದ ಮದಗದಕೆರೆಯವರೆಗೆ ಶೋಧಕಾರ್ಯ ಮುಂದುವರೆದಿದ್ದು, ಗ್ರಾಮದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಳ್ಳತುಂಬಿ ಹರಿಯುತ್ತಿದ್ದು, ಪತ್ತೆಕಾರ್ಯಕ್ಕೆ ಸ್ವಲ್ಪ ಅಡಚರಣೆಯಾಗುತ್ತಿದೆ.
ಗರಿಷ್ಠ 152 .4 ಮಿ.ಮೀ.ಮಳೆ
ಶೃಂಗೇರಿ ತಾಲೂಕಿನ ಕಿಗ್ಗದಲ್ಲಿ ಗರಿಷ್ಠ 152 .4 ಮಿ.ಮೀ.ಮಳೆಯಾಗಿದ್ದರೆ, ತರೀಕೆರೆ ತಾಲೂಕಿನ ಹುಣಸಘಟ್ಟದಲ್ಲಿ ಕನಿಷ್ಠ 1 ಮಿಲಿಮೀಟರ್ ಮಳೆಯಾಗಿದೆ. ಕಳೆದ 24ಗಂಟೆಗಳಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಹಲವೆಡೆ ಬಿದ್ದಿರುವ ಮಳೆವಿವರ ಮಿಲಿ ಮೀಟರ್ಗಳಲ್ಲಿ ಇಂತಿದೆ.
ಚಿಕ್ಕಮಗಳೂರು ಕಸಬಾ 24, ವಸ್ತಾರೆ 48, ಆಲ್ದೂರು 64, ಮೂಡಿಗೆರೆ 33 ಕೊಟ್ಟಿಗೆಹಾರ 59.8 ಜಾವಳಿ 71 .8, ಹಿರೇಬೈಲು 60 ,ಕಳಸ 73.8, ಅಜ್ಜಂಪುರ 2, ಬುಕ್ಕಾಂಬುದಿಯಲ್ಲಿ 2 ಮಿಲಿ ಮೀಟರ್ ಮಳೆಬಿದ್ದಿದೆ.