ಚಿಕ್ಕಮಗಳೂರು; ಕಾರು-ಬೈಕ್ ಅಪಘಾತದಲ್ಲಿ ಹೆಡ್ ಕಾನ್ ಸ್ಟೆಬಲ್ ಸಾವು
ಚಿಕ್ಕಮಗಳೂರು, ಡಿಸೆಂಬರ್ 03: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಇಂದು ಎಎಸ್ ಐ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಹೆಡ್ ಕಾನ್ ಸ್ಟೆಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ.
48 ವರ್ಷದ ಸಿದ್ದರಾಮಪ್ಪ ಮೃತ ದುರ್ದೈವಿ. ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ಚಿಕ್ಕಮಗಳೂರು ನಗರದಲ್ಲಿ ವಾಸವಿದ್ದರು. ಬುಧವಾರ ಕರ್ತವ್ಯ ಮುಗಿಸಿ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗುವಾಗ ಹಿರೇಗೌಜ ಬಳಿ ಕಾರು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಮೂಲತಃ ಅಜ್ಜಂಪುರ ತಾಲೂಕಿನ ತಮ್ಮಟದಹಳ್ಳಿ ನಿವಾಸಿಯಾದ ಸಿದ್ದರಾಮಪ್ಪ 25 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಗುರುವಾರ ಎಎಸ್ ಐ ಆಗಿ ಬಡ್ತಿ ಪಡೆಯಲಿದ್ದರು. ಪ್ರಮೋಷನ್ ಸಿಕ್ಕ ಖುಷಿಯಲ್ಲಿ ಎಎಸ್ ಐ ಸಮವಸ್ತ್ರ ಕೂಡ ಸಿದ್ಧ ಮಾಡಿಕೊಂಡಿದ್ದ ಸಿದ್ದರಾಮಪ್ಪ ಕರ್ತವ್ಯ ಮುಗಿಸಿ ಖುಷಿಯಿಂದ ಮನೆಗೆ ಬರುವಾಗ ಅಪಘಾತ ಸಂಘವಿಸಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸಿಬ್ಬಂದಿಯನ್ನು ಕಳೆದುಕೊಂಡ ಇಲಾಖೆ ಸಿಬ್ಬಂದಿ ಮರುಗಿದ್ದಾರೆ.












Click it and Unblock the Notifications