ಶವ ಸಂಸ್ಕಾರಕ್ಕೂ ಸಮಸ್ಯೆ; ಹೊಳೆಕೂಡಿಗೆ ಗ್ರಾಮದವರ ಕರುಣಾಜನಕ ಬದುಕು
ಚಿಕ್ಕಮಗಳೂರು, ಆಗಸ್ಟ್ 28: ದುಃಖದ ಮೇಲೆ ದುಃಖದ ಸನ್ನಿವೇಶ ಅಂದರೆ ಇದೇ ಇರಬಹುದಾ? ನೀವೇ ಈ ವರದಿ ಓದಿದ ನಂತರ ನಿರ್ಧಾರ ಮಾಡಿ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮದಲ್ಲಿ ಶವ ಸಾಗಾಟಕ್ಕೆ ಕೂಡ ಸಮಸ್ಯೆ ಆಗಿದೆ. ಜಾಂಡೀಸ್ ನಿಂದ ಬಳಲುತ್ತಿದ್ದ ರಾಘವೇಂದ್ರ (35) ಅವರನ್ನು ಚಿಕಿತ್ಸೆಗೆ ಸೇರಿಸಲಾಗಿತ್ತು.
ಆ ನಂತರ ಚಿಕಿತ್ಸೆಗೆ ಸ್ಪಂದಿಸದೆ ರಾಘವೇಂದ್ರ ಸಾವನ್ನಪ್ಪಿದರು. ಮೃತರ ಗ್ರಾಮವಾದ ಹೊಳೆಕೂಡಿಗೆಗೆ ಪಾರ್ಥಿವ ಶರೀರವನ್ನು ಹರಸಾಹಸ ಮಾಡಿ, ತರಲಾಗಿದೆ. ಒಂದು ಕಿಲೋಮೀಟರ್ ತನಕ ಹೊತ್ತುಕೊಂಡು ಬಂದು, ಆ ನಂತರ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಗ್ರಾಮಕ್ಕೆ ಶವವನ್ನು ತಂದಿದ್ದರು ಕುಟುಂಬಸ್ಥರು.

ಅಂದ ಹಾಗೆ ಈ ಗ್ರಾಮಸ್ಥರ ಸಮಸ್ಯೆ ಏನೆಂದರೆ, ಹೊಳೆಕೂಡಿಗೆ ಗ್ರಾಮಕ್ಕೆ ತೆರಳುವುದಕ್ಕೆ ರಸ್ತೆ- ಸೇತುವೆ ಇಲ್ಲದೆ ಪರದಾಡುವಂತಾಗಿದೆ. ಕಣ್ಣೀರು ಹಾಕುತ್ತಲೇ ಪಾರ್ಥಿವ ಶರೀರವನ್ನು ಸಾಗಿಸಿದ್ದಾರೆ ಕುಟುಂಬಸ್ಥರು. "ಸಮಾಜದಲ್ಲಿ ಗೌರವಯುತವಾಗಿ ಬದುಕುವುದಕ್ಕೆ ನಮಗೂ ಒಂದು ಅವಕಾಶ ನೀಡಿ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿ" ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.











Click it and Unblock the Notifications