ಸಹಕಾರ ಸಾರಿಗೆ ನೌಕರರಿಗೆ ಆರ್ಥಿಕ ಸಂಕಷ್ಟ: ಬಾಕಿ ಸಂಬಳ ನೀಡುವಂತೆ ಒತ್ತಾಯ
ಚಿಕ್ಕಮಗಳೂರು, ಮಾರ್ಚ್ 2: "ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆಯು ತನ್ನೆಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಒಂದು ವರ್ಷ ಕಳೆದಿದ್ದು, ಇದರಿಂದ ಕಾರ್ಮಿಕರು ಸಂಕಷ್ಟದಲ್ಲಿ ದಿನದೂಡುವಂತೆ ಆಗಿದೆ. ಆಡಳಿತ ಮಂಡಳಿಯು ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು'' ಎಂದು ಚಿಕ್ಕಮಗಳೂರು ಜಿಲ್ಲಾ ಟ್ರಾನ್ಸ್ ಪೋರ್ಟ್ ಮತ್ತು ಮಜ್ದೂರು ಸಂಘದ ಅಧ್ಯಕ್ಷ ಎಚ್.ಆರ್ ಸಂಜೀವ ಒತ್ತಾಯಿಸಿದರು.
Recommended Video
ಸೋಮವಾರದಂದು ಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಮಾತನಾಡಿದ ಅವರು, "ಕಳೆದ ಒಂದು ವರ್ಷದಿಂದ ಸಂಸ್ಥೆಯನ್ನು ಮುನ್ನೆಡೆಸುವವರು ಆರ್ಥಿಕ ಸಂಕಷ್ಟದ ನೆಪ ನೀಡಿ ಬಸ್ ಗಳ ಸೇವೆಯನ್ನು ಸ್ಥಗಿತಗೊಳಿಸಿದರು. ನೌಕರರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ವರ್ಷದಿಂದ ಹೇಳುತ್ತಾ ಬಂದಿದ್ದಾರೆ. ಇದುವರೆಗೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಆಡಳಿತ ಮಂಡಳಿ ಕೂಡಲೇ ನೌಕರರಿಗೆ ನೀಡಬೇಕಾದ ಬಾಕಿ ಸಂಬಳ ನೀಡಬೇಕು. ಭವಿಷ್ಯ ನಿಧಿಯ ಹಣವನ್ನು ಇಲಾಖೆಗೆ ಪಾವತಿಸಬೇಕು ಇಲ್ಲದಿದ್ದರೆ, ಜವಾಬ್ದಾರಿಯುತ ಪದಾಧಿಕಾರಿಗಳು ರಾಜೀನಾಮೆ ನೀಡಬೇಕು. ಸಂಸ್ಥೆಯ ನಷ್ಟದ ಬಗ್ಗೆ ಹಾಗೂ ನೌಕರರ ಹಣ ದುರುಪಯೋಗವಾದ ಬಗ್ಗೆ ತನಿಖೆ ನಡೆಸಬೇಕು. ಸಹಕಾರ ಸಾರಿಗೆ ಸಂಸ್ಥೆ ಪುನರಾರಂಭಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು'' ಎಂದು ಹೇಳಿದರು.

"ನಮ್ಮ ಬೇಡಿಕೆ ಈಡೇರುವವರೆಗೂ ಸಹಕಾರ ಸಾರಿಗೆ ಸಂಸ್ಥೆಯ ಗೇಟಿನ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಶಾಂತಿಯುತವಾದ ಪ್ರತಿಭಟನೆ ನಡೆಸುತ್ತೇವೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು'' ಎಂದು ಎಚ್.ಆರ್ ಸಂಜೀವ ಮನವಿ ಮಾಡಿದರು.
ಪ್ರತಿಭಟನೆಗೂ ಮೊದಲು ಕೊಪ್ಪ ಪಟ್ಟಣದ ಪುರಭವನದಿಂದ ಕೆಸವೆಯ ಸಹಕಾರ ಸಾರಿಗೆ ಕಚೇರಿಯವರೆಗೂ ಕಾಲ್ನಡಿಗೆ ಜಾಥಾ ನಡೆಸಿದರು. ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.

ಸಂಘದ ಉಪಾಧ್ಯಕ್ಷ ಕಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಬಿ.ರಮೇಶ್ ಗೌಡ, ಕೇಶವ್, ರಘುನಾಥ್, ಚೇತನ್, ದೇವರಾಜ್, ಹಾಲಪ್ಪ ಗೌಡ, ಮುರುಳಿ, ಕಿರಣ್ ಸೇರಿದಂತೆ ಹಲವರು ಇದ್ದರು.












Click it and Unblock the Notifications