ನೈಸರ್ಗಿಕ ಕೃಷಿಯಲ್ಲಿನ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಂದ್ರಶೇಖರ್
ಚಿಕ್ಕಮಗಳೂರು, ಅಕ್ಟೋಬರ್ 31: ಕರ್ನಾಟಕ ಸರಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಮೂಗ್ತಿಹಳ್ಳಿಯ ಕೃಷಿಕ ಎನ್.ಎಸ್. ಚಂದ್ರಶೇಖರ ನಾರಣಾಪುರ ಆಯ್ಕೆಯಾಗಿದ್ದಾರೆ. ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಂದ್ರಶೇಖರ ನಾರಾಯಣಪುರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಜುಲೈ 7, 1960ರಲ್ಲಿ ಜನಿಸಿದ ಚಂದ್ರಶೇಖರ ನಾರಾಯಣಪುರ ಅವರು, ಮೂಲತಃ ತರೀಕೆರೆ ತಾಲ್ಲೂಕಿನವರಾಗಿದ್ದು, ಸದ್ಯ ಚಿಕ್ಕಮಗಳೂರು ತಾಲ್ಲೂಕು ಮೂಗ್ತಿಹಳ್ಳಿಯಲ್ಲಿ ವಾಸವಾಗಿದ್ದು, ಅಲ್ಲೇ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2009ರಿಂದಲೂ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡಿರುವ ಅವರು 12 ಎಕರೆ ಜಮೀನು ಹೊಂದಿದ್ದು ನೈಸರ್ಗಿಕ ಕೃಷಿ ಮೂಲಕ ಯಶಸ್ವಿ ರೈತನಾಗಿದ್ದಾರೆ.
12 ಎಕರೆ ಭೂ ಪ್ರದೇಶದಲ್ಲಿ ಅಡಿಕೆ, ಕಾಫಿ, ಕೋ ಕೋ, ಬಾಳೆ ಸೇರಿದಂತೆ ವಿವಿಧ ಜಾತಿಯ 10 ಹಣ್ಣಿನ ಗಿಡಗಳು, ಜಾಯಿಕಾಯಿ ಹಾಗೂ ಒಂದು ಎಕರೆ ಪ್ರದೇಶದಲ್ಲಿ ಗೋವಿನ ಮೇವು ಬೆಳೆಯುತ್ತಿದ್ದಾರೆ. ಕೃಷಿ ಚಟುವಟಿಕೆ ಜೊತೆಗೆ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಿಂಗಳಿಗೆ 2 ಬಾರಿ ಮಾಡುತ್ತಿದ್ದಾರೆ.

ತೋಟಕ್ಕೆ ಭೇಟಿ ನೀಡುವ ಆಸಕ್ತ ರೈತ ಯುವಕರಿಗೆ ಕೃಷಿ ಬಗ್ಗೆ ಮಾಹಿತಿ ನೀಡುತ್ತಾರೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ನಬಾರ್ಡ್ ಬ್ಯಾಂಕ್, ಎನ್ಜಿಓ ನಡೆಸುವ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡುತ್ತಾರೆ. ಅಂದಾಜು 1000ದಿಂದ 1500 ಜನರಿಗೆ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸುವ ಕಾಯಕ ಮಾಡುತ್ತಿದ್ದಾರೆ. ಸಾಂಸ್ಕೃತಿಕ, ಸಾಹಿತ್ಯ, ಜಾನಪದ, ಧಾಮೀಕ ಸಮ್ಮೇಳನಗಳಲ್ಲಿ ನೈಸರ್ಗಿಕ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಕೃಷಿ ಸಾಧನೆಗೆ ಹಲವು ಪ್ರಶಸ್ತಿಗಳು; ಬೆಂಗಳೂರಿನ ಜಿಕೆವಿಕೆಯಿಂದ ಪ್ರಗತಿಪರ ಕೃಷಿಕ ಪ್ರಶಸ್ತಿ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ, 2014ರಲ್ಲಿ ಗುಜರಾತ್ ಸರ್ಕಾರದಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ, ವಂದೇ ಮಾತರಂ ಸಂಸ್ಥೆಯಿಂದ ಕೃಷಿ ಋಷಿ ಪ್ರಶಸ್ತಿ, ವಾರಣಾಸಿ ಜಂಗಮವಾಡಿ ಮಠದ ಗುರುಕುಲ ನೀಡುವ ಕೃಷಿ ರತ್ನ ಪ್ರಶಸ್ತಿ, ಶ್ರೀ ರೇಣುಕಾಚಾರ್ಯ ಪ್ರಶಸ್ತಿ, ಕರ್ನಾಟಕ ಸರ್ಕಾರ ಕೊಡಮಾಡುವ 2022ರ ಕೃಷಿ ಪಂಡಿತ ಪ್ರಶಸ್ತಿ, ರಾಜ್ಯ ಪಶುಸಂಗೋಪನಾ ಇಲಾಖೆ ನೀಡುವ ಶ್ರೇಷ್ಠ ಕೃಷಿಕ ಪ್ರಶಸ್ತಿ, ಗೊ.ರು.ಚ ಪ್ರತಿಷ್ಠಾನದ ಸೇವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಇವರ ಅಸಾಮಾನ್ಯ ಸೇವೆಯನ್ನು ಪರಿಗಣಿಸಿರುವ ರಾಜ್ಯ ಸರಕಾರ 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅರ್ಜಿ ಹಾಕದೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಸಂತಸ; ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಂದ್ರಶೇಖರ್ ನಾರಾಯಣಪುರ " ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕಿರಲಿಲ್ಲ. ಕೃಷಿ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಕಳೆದ ಕೆಲವು ದಿನಗಳ ಹಿಂದೆ ಕೃಷಿ ಕ್ಷೇತ್ರದಲ್ಲಿ ಚಟುವಟಿಕೆಯನ್ನು ಗುರುತಿಸಿ ಇಲಾಖೆ ಸ್ವವಿವರ ಕೇಳಿತ್ತು. ಆದರೆ, ಪ್ರಶಸ್ತಿಗೆ ಆಯ್ಕೆಯಾಗುವ ಯಾವ ನಂಬಿಕೆಯೂ ಇರಲಿಲ್ಲ. ನೈಸರ್ಗಿಕ ಕೃಷಿ ಮುಖ್ಯಧ್ಯೇಯವಾಗಿದ್ದು, ಸಹಕರಿಸಿದ ಸ್ನೇಹಿತರು ಹಿತೈಷಿಗಳನ್ನು ಅಭಿನಂದಿಸುತ್ತೇನೆ.

12 ವರ್ಷಗಳಿಂದ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದ್ದು, 12 ಎಕರೆ ಪ್ರದೇಶದಲ್ಲಿ ಅಡಿಕೆ, ಕಾಫಿ, ಕೋ ಕೋ, ಬಾಳೆ ಸೇರಿದಂತೆ ಹಣ್ಣಿನ ಗಿಡಗಳನ್ನು ಬೆಳೆದಿದ್ದೇನೆ. ಆಧುನಿಕ ಕೃಷಿ ಪದ್ಧತಿಗಿಂತ ನೈಸರ್ಗಿಕ ಕೃಷಿ ಪದ್ಧತಿ, ಸಾವಾಯವ ಕೃಷಿ ಪದ್ಧತಿ ಶ್ರೇಷ್ಠ ಎನ್ನುವ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ" ಎಂದರು.












Click it and Unblock the Notifications