ಸಿ.ಟಿ. ರವಿಗೆ ದತ್ತಪೀಠದ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ; ಚಿಕ್ಕಮಗಳೂರಿನಲ್ಲಿ ಮುತಾಲಿಕ್ ಆಕ್ರೋಶ
ಚಿಕ್ಕಮಗಳೂರು, ನ.13: ''ರಾಮನ ಜನ್ಮಸ್ಥಾನಕ್ಕಾಗಿ ಐನೂರು ವರ್ಷ ಹೋರಾಟ ಮಾಡಬೇಕಾಯಿತು. ಅದೇ ಮಾದರಿಯಲ್ಲಿ ದತ್ತಪೀಠದ ಹೋರಾಟವನ್ನು 500 ವರ್ಷಕ್ಕೆ ತೆಗೆದುಕೊಂಡು ಹೋಗುತ್ತಿದ್ದೀರಿ, ನಿಮಗೆ ನಾಚಿಕೆ ಆಗಬೇಕು. ನಮ್ಮ ಕೊನೆ ಉಸಿರು ಇರುವವರೆಗೂ ದತ್ತಪೀಠಕ್ಕಾಗಿ ಹೋರಾಟ ಮಾಡುತ್ತೇವೆ'' ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
"ಅಧಿಕಾರ ಇರುವಾಗಲೇ ಹಿಂದೂ ಅರ್ಚಕರನ್ನು ನೇಮಿಸಿ ಸಂಸ್ಯೆಯನ್ನು ಪರಿಹರಿಸಿ ಎಂದು ಕೋರ್ಟ್ ಹೇಳಿದೆ. ಕೋರ್ಟ್ ಹೇಳಿದ 24 ಗಂಟೆಯ ಒಳಗಡೆ ಅರ್ಚಕರನ್ನು ನೇಮಿಸಬಹುದಿತ್ತು. ಅರ್ಚಕರನ್ನು ನೇಮಿಸಿ ಪೂಜೆ ಪ್ರಾರಂಭ ಮಾಡಿದರೆ ನಿಮ್ಮಪ್ಪನ ಗಂಟು ಏನು ಹೋಗುತ್ತಿತ್ತು ಸಿ.ಟಿ ರವಿಯವರೇ?
ದತ್ತಮಾಲಾ ಅಭಿಯಾನ ಶೋಭಾಯಾತ್ರೆ : ಬಿಗಿ ಪೊಲೀಸ್ ಬಂದೋಬಸ್ತ್, ಸಂಚಾರ ಮಾರ್ಗ ಬದಲಾವಣೆ
ಸ್ಟೇ ತರುತ್ತಾರೆ ಅಂತಾ ಭಾರಿ ದೊಡ್ಡ ದೊಡ್ಡ ಮಾತಾನಾಡುತ್ತೀರಿ. ಯಾರು ಸ್ಟೇ ತರುತ್ತಾರೆ? ಮುಸ್ಲಿಮರ ಜೊತೆ ಕುಳಿತುಕೊಂಡು ಸೌಹಾರ್ದತೆಯಿಂದ ಬಗೆಹರಿಸಲು ಆಗುವುದಿಲ್ಲವಾ? ಪರಿಹರಿಸಲು ಇಚ್ಛಾಶಕ್ತಿ ಬೇಕಾಗಿದೆ. ಅದಿಲ್ಲದ ಪರಿಣಾಮದಿಂದ ರಾಜಕೀಯ ನಾಟಕ ಆಡುತ್ತಿದ್ದೀರಿ ನೀವು. ಆದರೆ ನಾವು ನಮ್ಮ ಕೊನೆ ಉಸಿರು ಇರುವವರೆಗೂ ದತ್ತಪೀಠಕ್ಕಾಗಿ ಹೋರಾಡುತ್ತೇವೆ," ಎಂದು ಶಾಸಕ ಸಿ.ಟಿ ರವಿ ವಿರುದ್ಧ ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ.
ನಗರದಲ್ಲಿ ಶ್ರೀರಾಮಸೇನೆಯಿಂದ ದತ್ತಮಾಲಾ ಅಭಿಯಾನ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಶೋಭಾಯಾತ್ರೆಯಲ್ಲಿ ದತ್ತವಿಗ್ರಹ ಮೆರವಣಿಗೆಯನ್ನು ಮಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಆರಂಭಿಸಿದ್ದು, ಶೋಭಾಯಾತ್ರೆಯಲ್ಲಿ ಸಾವಿರಾರು ದತ್ತಮಾಲಾಧಾರಿಗಳು ಭಾಗಿ ಆಗಿದ್ದರು. ಹೊರಜಿಲ್ಲೆಗಳಿಂದಲೂ ಸಾವಿರಾರು ದತ್ತಮಾಲಾಧರಿಗಳು ಆಗಮಿಸಿದ್ದರು. ಒಂದು ಸಾವಿಕ್ಕೂ ಅಧಿಕ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆಯಲ್ಲಿ ಶೋಭಾಯಾತ್ರೆ ಸಾಗಿಸಲಾಗಿದೆ.
ಶೋಭಾಯಾತ್ರೆ ಬಳಿಕ ದತ್ತಪಾದುಕೆ ದರ್ಶನ
ನಾಸಿಕ್, ಡೋಲು, ಭಗವಧ್ವಜದೊಂದಿಗೆ ಯಾತ್ರೆ ಸಾಗಿದೆ. ಶೋಭಾಯಾತ್ರೆ ಬಳಿಕ ದತ್ತಪಾದುಕೆ ದರ್ಶನ ದತ್ತಪೀಠಕ್ಕೆ ತೆರಳಿದ್ದು, ದತ್ತಪೀಠದಲ್ಲೂ ಸಹ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶ್ರೀರಾಮಸೇನೆ ವತಿಯಿಂದ ನಡೆದ ದತ್ತಮಾಲಾ ಅಭಿಯಾನಕ್ಕೆ ಇಂದು ತೆರೆ ಬಿದ್ದಂತಾಗಿದೆ. ಕಳೆದ ಏಳು ದಿನಗಳಿಂದ ಮಾಲೆ ಧರಿಸಿ ದತ್ತಮಾಲಾಧಾರಿಗಳು ವ್ರತದಲ್ಲಿದ್ದರು. ಇಂದು ದತ್ತಭಕ್ತರು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಪಡೆದಿದ್ದಾರೆ. 9 ಗಂಟೆಗೆ ಚಿಕ್ಕಮಗಳೂರು ನಗರದ ಶಂಕರಮಠ ಮುಂಭಾಗದಲ್ಲಿ ಬಹಿರಂಗ ಸಮಾವೇಶ ನಡೆದಿತ್ತು.
ಧಾರ್ಮಿಕ ಸಭೆ ಬಳಿಕ ದತ್ತಮಾಲಾಧಾರಿಗಳಿಂದ ನಗರದಲ್ಲಿ ಶೋಭಾಯಾತ್ರೆ ಆರಂಭವಾಯಿತು. ಶೋಭಾಯಾತ್ರೆ ಬಳಿಕ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದಿದ್ದಾರೆ. ದತ್ತಮಾಲಾ ಅಭಿಯಾನದ ಹಿನ್ನೆಲೆ ನಗರದಲ್ಲಿ ಯಾವುದೇ ಘರ್ಷಣೆಗಳು ಆಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು ಹಾಗೂ ದತ್ತಮಾಲಾ ಅಭಿಯಾನ ಹಿನ್ನೆಲೆ ಪ್ರವಾಸಗರಿಗೆ ನಿರ್ಬಂಧ ಹೇರಲಾಗಿತ್ತು. ಬೆಳಗ್ಗೆ 6 ಗಂಟೆಯಿಂದ ಸೋಮವಾರ 10 ಗಂಟೆವರೆಗೆ ಗಿರಿಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ರಸ್ತೆಗಳಲ್ಲಿ ಕೇಸರಿ ಬಾವುಟಗಳಿಂದ ಅಲಂಕಾರ
ಶ್ರೀರಾಮಸೇನೆ ವತಿಯಿಂದ 18ವರ್ಷದ ದತ್ತಮಾಲಾ ಅಭಿಯಾನದ ಶೋಭಾಯಾತ್ರೆ ಮತ್ತು ದತ್ತಪಾದುಕೆ ದರ್ಶನ ನಡೆದಿದೆ. ಈ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಾವುಟಗಳಿಂದ ಅಲಂಕರಿಸಲಾಗಿತ್ತು. ದತ್ತಮಾಲಾ ಅಭಿಯಾನದ ಹಿನ್ನೆಲೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಎಸ್.ಪಿ.ಉಮಾ ಪ್ರಶಾಂತ್ ಬಂದೋಬಸ್ತ್ ಮೇಲುಸ್ತುವಾರಿ ವಹಿಸಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಮೂರು ಡಿವೈಎಸ್ಪಿ, 18ಸಿಪಿಐ, 67 ಪಿಎಸ್ಐ, 147 ಎಎಸ್ಐ, 851 ಸಿಎಚ್ಸಿ ಮತ್ತು ಸಿಪಿಸಿ, 200 ಹೋಮ್ ಗಾರ್ಡ್ಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ.
ಹೊರ ಜಿಲ್ಲೆಗಳ ವಾಹನಗಳ ಮೇಲೆ ಹದ್ದಿನ ಕಣ್ಣು
ಪೊಲೀಸರು ಹೊರ ಜಿಲ್ಲೆಗಳಿಂದ ಆಗಮಿಸುವ ವಾಹನಗಳ ಮೇಲೆ ಕಣ್ಣಿಟ್ಟಿದ್ದು, 26 ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶೋಭಾಯಾತ್ರೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ನಿಲುಗಡೆ ನಿಷೇಧ ಮಾಡಲಾಗಿತ್ತು. ಬಸವನಹಳ್ಳಿ ಮುಖ್ಯರಸ್ತೆ ಮತ್ತು ಎಂ.ಜಿ ರಸ್ತೆವರೆಗೂ ಸಂಚಾರ ಮತ್ತು ನಿಲುಗಡೆಯನ್ನು ನೀಷೇಧಿಸಲಾಗಿತ್ತು. ಮೆರವಣಿಗೆ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕ ವಾಹನಗಳು ಬಸವನಹಳ್ಳಿ ಮುಖ್ಯರಸ್ತೆ ಬದಲಾಗಿ ರತ್ನಗಿರಿ ರಸ್ತೆ (ಆರ್.ಜಿ ರಸ್ತೆ) ಮತ್ತು ಎಂ.ಜಿ ರಸ್ತೆಯ ಬದಲಾಗಿ ಐ.ಜಿ ರಸ್ತೆ ಮತ್ತು ಅಂಬೇಡ್ಕರ್ ರಸ್ತೆ (ಮಾರ್ಕೆಟ್ ರಸ್ತೆ) ಮೂಲಕ ಸಂಚರಿಸಲು ತಿಳಿಸಲಾಗಿತ್ತು.
ವಾಹನ ಸಂಚಾರದ ಮಾರ್ಗ ಬದಲಾವಣೆ
ಕಡೂರು ಕಡೆಯಿಂದ ಮೂಡಿಗೆರೆಗೆ ಹೋಗುವ ಭಾರಿ ವಾಹನಗಳು ಎಐಟಿ ಸರ್ಕಲ್, ಬೈಪಾಸ್, ಪೈ ಸರ್ಕಲ್, ಹಿರೇಮಗಳೂರು, ಕೈಗಾರಿಕಾ ಪ್ರದೇಶ, ರಾಂಪುರದ ಮೂಲಕ ಸಂಚರಿಸಲು ತಿಳಿಸಲಾಗಿದೆ. ಹಾಗೂ ಮೂಡಿಗೆರೆ ಕಡೆಯಿಂದ ಕಡೂರು ಕಡೆಗೆ ಹೋಗುವ ಭಾರಿ ವಾಹನಗಳು ರಾಂಪುರ, ಕೈಗಾರಿಕಾ ಪ್ರದೇಶ, ಹಿರೇಮಗಳೂರು, ಪೈ ಸರ್ಕಲ್, ಬೈಪಾಸ್, ಎಐಟಿ ಸರ್ಕಲ್ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ತಿಳಿಸಿದ್ದರು.