ಬಿಹಾರ ಚುನಾವಣೆ: ಉಚಿತ ಕೋವಿಡ್ ಲಸಿಕೆ ವಿಚಾರವನ್ನು ಸಮರ್ಥಿಸಿದ ಸಿ.ಟಿ ರವಿ
ಚಿಕ್ಕಮಗಳೂರು, ಅಕ್ಟೋಬರ್ 23: ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಎನ್ಡಿಎ ಪ್ರಣಾಳಿಕೆಯಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ವಿಚಾರವನ್ನು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಮಾತನಾಡಿದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಚಿತ ಅಕ್ಕಿ ಕೊಡ್ತೀವಿ, ಲ್ಯಾಪ್ ಟಾಪ್ ಕೊಡ್ತೀವಿ ಅಂತಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಕೊಡ್ತೀವಿ ಅನ್ನುವುದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.
ಜೀವ ಉಳಿಸಲು ನೆರವಾಗುವ ಕೆಲಸಕ್ಕೆ ಉಚಿತವಾಗಿ ಕೊಡ್ತೀವಿ ಅನ್ನುವುದರಲ್ಲಿ ತಪ್ಪೇನಿಲ್ಲ, ಆಯಷ್ಮಾನ್ ಭಾರತ್ ಜಗತ್ತಿನ ದೊಡ್ಡ ಅರೋಗ್ಯ ವಿಮಾ ಯೋಜನೆ ನಾವು ಹೇಳಿದ್ದೇವು ಮಾಡುತ್ತಿದ್ದೇವೆ, ಅದರಲ್ಲಿ ತಪ್ಪೇನಿದೆ? ಎಂದು ಮರು ಪ್ರಶ್ನಿಸಿದರು.

ಬಿಹಾರದಲ್ಲಿ ಉಚಿತ ಲಸಿಕೆ ಕೋಡ್ತಿವಿ ಅಂತ ಹೇಳಿದ್ದೇವೆ, ಲಸಿಕೆ ಸಿಕ್ಕಾಗ ಉಚಿತವಾಗಿ ಕೊಡುವ ವ್ಯವಸ್ಥೆಯನ್ನು ಖಂಡಿತ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾಡುಮನುಷ್ಯ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ ರವಿ, ""ನಾವ್ಯಾರು ಶತ್ರುಗಳಲ್ಲ, ರಾಜಕೀಯ ವಿರೋಧಿಗಳಷ್ಟೆ. ರಾಜಕೀಯ ಟೀಕೆಯನ್ನು ವ್ಯಕ್ತಿಗತ ದ್ವೇಷಿಸುವುದಕ್ಕೆ ಬಳಕೆಯಾಗಬಾರದು ಎಂದು ತಿಳಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಸಿದ ಭಾಷೆ, ಪ್ರತಿಕ್ರಿಯಿಸಿದ ರೀತಿಯನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಸಿದ್ದರಾಮಯ್ಯನವರಿಗೆ ಬುದ್ಧಿ ಹೇಳುವಷ್ಟು ನಾವು ದೊಡ್ಡವರಲ್ಲ. ಮಕ್ಕಳು ಬೀದಿಯಲ್ಲಿ ಜಗಳ ಆಡಿದ ರೀತಿಯಲ್ಲಿ ಭಾಷೆ ಬಳಸಿರುವುದು ಸೂಕ್ತವಲ್ಲ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಿಪ್ರಾಯಪಟ್ಟರು.












Click it and Unblock the Notifications