ಚಿಕ್ಕಮಗಳೂರು ಕೊವಿಡ್ ಆಸ್ಪತ್ರೆಯಲ್ಲೇ ಸಿಬ್ಬಂದಿಯ ಕಳ್ಳಾಟ
ಬೆಂಗಳೂರು, ಜುಲೈ.13: ಕೊರೊನಾವೈರಸ್ ಸೋಂಕಿಗೆ ಸಿಲುಕಿ ನರಳುತ್ತಿದ್ದ ರೋಗಿಯ ಜೀವದ ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಕಳ್ಳಾಟ ಆಡುತ್ತಿದ್ದಾರೆ. ಆಂಬುಲೆನ್ಸ್ ನಲ್ಲಿ ಆಗಮಿಸಿದ ಸೋಂಕಿತನನ್ನು ದಾಖಲಿಸಿಕೊಳ್ಳಲು ಸಿಬ್ಬಂದಿ ಕಳ್ಳಾಟ ಆಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕೊರೊನಾವೈರಸ್ ಸೋಂಕಿತ ವ್ಯಕ್ತಿಯನ್ನು ಶೃಂಗೇರಿಯಿಂದ ಚಿಕ್ಕಮಗಳೂರಿನ ಕೊವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ವ್ಯಕ್ತಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಸಿಬ್ಬಂದಿ ತಮ್ಮಲ್ಲಿ ಬೆಡ್ ಗಳ ಕೊರತೆಯಿದೆ ಎಂದು ಸುಳ್ಳು ಹೇಳಿದ್ದಾರೆ.
ಕೊವಿಡ್ ಆಸ್ಪತ್ರೆಯ ಸಿಬ್ಬಂದಿಯ ವರ್ತನೆಯಿಂದ ರೋಸಿ ಹೋದ ಸೋಂಕಿತ ವ್ಯಕ್ತಿಯ ಈ ಕುರಿತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಅಲರ್ಟ್ ಆಗಿದ್ದಾರೆ. ಅಲ್ಲದೇ ಕ್ಷಣಮಾತ್ರದಲ್ಲೇ ಬೆಡ್ ವ್ಯವಸ್ಥೆ ಕಲ್ಪಿಸಿದ್ದು, ಸೋಂಕಿತನನ್ನು ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗಕ್ಕೆ ಕರೆದೊಯ್ಯಲು ತಾಕೀತು:
ಚಿಕ್ಕಮಗಳೂರಿನ ಕೊವಿಡ್ ಆಸ್ಪತ್ರೆಯಲ್ಲಿ ಸರಿಯಾದ ಬೆಡ್ ವ್ಯವಸ್ಥೆಯಿಲ್ಲ. ಹೀಗಾಗಿ ಕೊರೊನಾವೈರಸ್ ಸೋಂಕಿತನನ್ನು ಶಿವಮೊಗ್ಗದ ಕೊವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಮೊದಲಿಗೆ ಆಸ್ಪತ್ರೆಯ ಸಿಬ್ಬಂದಿ ಒತ್ತಾಯಿಸಿದ್ದರು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಸರ್ಕಾರವು ಒಂದು ಕಡೆ ಬೆಡ್ ವ್ಯವಸ್ಥೆ ಕಲ್ಪಿಸುವುದಕ್ಕೆ ಹೆಣಗಾಡುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಕೊವಿಡ್ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆಯಿದ್ದಲೂ ಸಿಬ್ಬಂದಿಯು ಸೋಂಕಿತರನ್ನು ದಾಖಲಿಸಿಕೊಳ್ಳುವುದಕ್ಕೆ ಹಿಂದುಮುಂದು ನೋಡುತ್ತಿರುವುದಕ್ಕೆ ಇದೊಂದು ಘಟನೆ ಜೀವಂತ ಸಾಕ್ಷಿಯಾಗಿದೆ.












Click it and Unblock the Notifications