Congress Bus Yatra: ಬಸ್ ಯಾತ್ರೆ ಮೂಲಕ ಬಿಜೆಪಿ ಸರ್ಕಾರದ ವೈಫಲ್ಯಗಳ ಅನಾವರಣ: ಕೆಪಿಸಿಸಿ ಉಪಾಧ್ಯಕ್ಷ
ಚಿಕ್ಕಮಗಳೂರು, ಜನವರಿ, 10: ಬಸ್ ಯಾತ್ರೆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯಗಳನ್ನು ಅನಾವರಣಗೊಳಿಸುವುದರೊಂದಿಗೆ ಜನರ ಮನ ಮುಟ್ಟುವಂತೆ ಮಾಡಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಬಿ.ಎಲ್.ಶಂಕರ್ ಚಿಕ್ಕಮಗಳೂರಿನಲ್ಲಿ ಹೇಳಿದರು.
ಮಂಗಳವಾರ ನಗರದ ಕ್ಯಾಥೋಲಿಕ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಬಸ್ ಯಾತ್ರೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ 5 ಸಾವಿರ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ 15 ಸಾವಿರ ಜನರು ಭಾಗವಹಿಸುವಂತೆ ಎಲ್ಲಾ ಮುಖಂಡರು ಕ್ರಮ ಕೈಗೊಳ್ಳಬೇಕು. ಈ ಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಆಗುತ್ತದೆ. ಹಾಗೆಯೇ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಳ್ಳುವ ಮೂಲಕ ಯಾತ್ರೆಯ ಸಂದೇಶವನ್ನು ಜಿಲ್ಲೆಯ ಪ್ರತಿ ಮನೆಗೆ ತಲುಪುವಂತೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಸೂಚಿಸಿದರು.

ಬಸ್ ಯಾತ್ರೆ ಅತ್ಯಂತ ಯಶಸ್ವಿ ಆಗಬೇಕು
ವೀಕ್ಷಕ ಮತ್ತು ಎಐಸಿಸಿ ಕಾರ್ಯದರ್ಶಿ ವಿ.ವಿ.ಮೋಹನ್ ಮಾತನಾಡಿ, ಬಸ್ ಯಾತ್ರೆ ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಬೇಕು. ಇಂದಿನಿಂದಲೇ ಸಿದ್ಧತೆಗಳನ್ನು ನಡೆಸಲು ಜಿಲ್ಲಾ ಕಾಂಗ್ರೆಸ್ ಕಾರ್ಯ ಆರಂಭ ಮಾಡಬೇಕು ಎಂದು ಸಲಹೆ ಮಾಡಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಜಿಲ್ಲೆಯ ಎಲ್ಲಾ 12 ಬ್ಲಾಕ್ಗಳಲ್ಲಿ ಅಧ್ಯಕ್ಷರು ಜಾಗೃತರಾಗಬೇಕು. ಇದರೊಂದಿಗೆ ಬಸ್ ಯಾತ್ರೆಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಕಾರ್ಯಕ್ರಮ ಯಶಸ್ವಿಗೊಳಿಸಲು ಹಿರಿಯರ ಸಲಹೆಯಂತೆ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ ಎಂದರು.

ಮಹಿಳೆಯರಿಗಾಗಿ ಕಾರ್ಯಕ್ರಮ
ಮಾಜಿ ಸಚಿವೆ ಡಾ.ಮೋಟಮ್ಮ ಮಾತನಾಡಿ, "ನಾ ನಾಯಕಿ" ಎಂಬ ಉತ್ತಮವಾದ ಕಾರ್ಯಕ್ರಮವನ್ನು ಮಹಿಳೆಯರಿಗಾಗಿ ಕೆಪಿಸಿಸಿ ರೂಪಿಸಿದೆ. ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಹಾಸನ ಜಿಲ್ಲೆಗಳ ಉಸ್ತುವಾರಿಯ ಹೊಣೆಗಾರಿಕೆಗೆ ನನ್ನನ್ನು ಕೆಪಿಸಿಸಿ ನಿಯೋಜಿಸಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಯಕಿ ಪ್ರಿಯಾಂಕ ಗಾಂಧಿ ಅವರು ಭಾಗವಹಿಸಲಿದ್ದಾರೆ. ಆ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ನಡೆದಿವೆ ಎಂದು ಮಾಹಿತಿ ನೀಡಿದರು.












Click it and Unblock the Notifications