10ನೇ ತರಗತಿ ಪರೀಕ್ಷೆ ನಡೆಸುವುದು ಸರಿಯಲ್ಲ; ವೈ. ಎಸ್. ವಿ. ದತ್ತಾ
ಚಿಕ್ಕಮಗಳೂರು, ಜುಲೈ 02; "ರಾಜ್ಯ ಸರ್ಕಾರ ಎಸ್. ಎಸ್. ಎಲ್. ಸಿ. ಪರೀಕ್ಷೆ ನಡೆಸಲು ಮುಂದಾಗಿರುವುದು ಸುತಾರಂ ಸರಿಯಲ್ಲ" ಎಂದು ಕಡೂರು ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ನಾಯಕ ವೈ. ಎಸ್. ವಿ. ದತ್ತ ಹೇಳಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾತನಾಡಿದ ಅವರು, "ಸ್ಪರ್ಧಾತ್ಮಕ ಜಗತ್ತಿನೊಳಗೆ ಮಕ್ಕಳು ಪೈಪೋಟಿ ಮಾಡುತ್ತಿರುವ ಹೊತ್ತಿನಲ್ಲಿ ಪಿಯುಸಿ ಪರೀಕ್ಷೆ ಬಹಳ ಮುಖ್ಯ. ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವಿವಿಧ ರೀತಿಯ ಸ್ಪರ್ಧಾತ್ಮಕ ಜಗತ್ತಿನೊಳಕ್ಕೆ ಮಕ್ಕಳು ಹೋಗಲು ಪರೀಕ್ಷೆ ಮುಖ್ಯವಾಗುತ್ತದೆ" ಎಂದರು.
"ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ ಎಸ್. ಎಸ್. ಎಲ್. ಸಿ ಪರೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ. ಸರ್ಕಾರ ಪರೀಕ್ಷೆ ನಡೆಸುವುದನ್ನು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ಮಕ್ಕಳ ದೃಷ್ಟಿಯಿಂದ ಯೋಚನೆ ಮಾಡಿದರೆ ಗ್ರಾಮೀಣ ಮಕ್ಕಳಿಗೆ ಸರ್ಕಾರ ಘೋರವಾದ ಅನ್ಯಾಯ ಮಾಡುತ್ತಿದೆ. ಸರಿಯಾಗಿ ಪಾಠ ನಡೆದಿಲ್ಲ, ಆನ್ಲೈನ್ ಪಾಠದಲ್ಲಿ ಅನೇಕ ಮಕ್ಕಳು ವಿವಿಧ ಕಾರಣಗಳಿಂದ ಭಾಗಿಯಾಗಿಲ್ಲ ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡುವ ನಿರ್ಧಾರ ಸರಿಯಲ್ಲ" ಎಂದು ತಿಳಿಸಿದರು.

ಪಕ್ಷದ ಬಿಕ್ಕಟ್ಟುಗಳು; ಮುಖ್ಯಮಂತ್ರಿ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳ ಹಗ್ಗಜಗ್ಗಾಟದ ಬಗ್ಗೆ ಪ್ರತಿಕ್ರಿಯಿಸಿದ ದತ್ತ, "ಇದು ಆಯಾ ಪಕ್ಷದ ಆಂತರಿಕ ವಿಚಾರ. ರಾಷ್ಟ್ರೀಯ ಪಕ್ಷದಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳು ಪ್ರಾದೇಶಿಕ ಪಕ್ಷಗಳಿಗೆ ಆರೋಗ್ಯಕರವಾದ ಬೆಳವಣಿಗೆ" ಎಂದರು.
"ನೀವು ಪಕ್ಷದ ಆಂತರೀಕವಾಗಿ ಹೊಡೆದಾಡಿಕೊಳ್ಳಿ. ಆದರೆ ಕೊರೊನಾದಂತಹ ಸಂಕಷ್ಟದಲ್ಲಿ ಜನರ ಬಗ್ಗೆ ಚಿಂತಿಸುವ ಬದಲು ಮುಖ್ಯಮಂತ್ರಿ ಸ್ಥಾನಕ್ಕೆ ಅವರಬಿಟ್ಟು, ಇವರಬಿಟ್ಟು ಅವರ್ಯಾರು ಅಂತಾ ಜಗಳವಾಡುತ್ತಿರುವುದರಿಂದ ಅಧಿಕಾರಿಗಳು ಇಂತಹ ಸಮಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ" ಎಂದು ಅಸಮಾಧಾನ ವ್ತಕ್ತಪಡಿಸಿದರು.












Click it and Unblock the Notifications