ಚಿಕ್ಕಮಗಳೂರು; ಗಿರಿಸ್ವಚ್ಚತಾ ಅಭಿಯಾನ, ರಾಶಿ-ರಾಶಿ ಕಸ ಸಂಗ್ರಹ
ಚಿಕ್ಕಮಗಳೂರು, ಫೆಬ್ರವರಿ 22: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ, ಸ್ವರ್ಗವನ್ನು ನಾಚಿಸುವ ಚೆಲುವನ್ನು ಹೊಂದಿರುವ ತಾಲೂಕಿನ ಗಿರಿಭಾಗದಲ್ಲಿ ಭಾನುವಾರ ಸ್ವಚ್ಚತೆಯ ಹಬ್ಬವೇ ಏರ್ಪಟ್ಟಿತ್ತು. ಪರಿಸರವನ್ನು ಪ್ರೀತಿಸುವ ನೂರಾರು ಮನಗಳು ಮಳೆ, ಚಳಿಯನ್ನು ಮರೆತು ತನ್ನೂರಿನ ಪ್ರಾಕೃತಿಕ ವೈಭವವನ್ನು ಸ್ವಚ್ಚಗೊಳಿಸಲು ಅಣಿಯಾಗಿ ಬಂದಿದ್ದರು.
ಯಾರೋ ಅಮಲೇರಿಸಿಕೊಂಡು ಬಿಸಾಡಿ ಹೋದ ಮದ್ಯದ ಬಾಟಲ್, ತಂಪು ಪಾನಿಯದ ತರಹೇವಾರಿ ಡಬ್ಬಿಗಳು, ಪ್ಲಾಸ್ಟಿಕ್ ಲೋಟ, ತಟ್ಟೆಗಳು, ಚಾಕ್ಲೆಟ್, ಗುಟ್ಕಾ ಪ್ಯಾಕೆಟ್ಗಳು, ಲೋಡ್ಗಟ್ಟಲೇ ಬಟ್ಟೆಗಳನ್ನು ಮಡಿ-ಮೈಲಿಗೆಯನ್ನು ಮರೆತು ತನ್ನೂರಿನ ಪರಿಸರವನ್ನು ಉಳಿಸುವ ಒಂದೇ ಕಾಳಜಿಯೊಂದಿಗೆ ಸ್ವಚ್ಚತಾ ಅಭಿಯಾನದಲ್ಲಿ ಭಾಗಿಯಾಗಿ ಗಿರಿಶ್ರೇಣಿಯ ಮೇಲಿನ ಪರಿಸರ ಪ್ರೀತಿಯನ್ನು ಮೆರೆದರು.
ಭಾನುವಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಜಿಲ್ಲೆಯ ಹಲವು ಸಂಘ ಸಂಸ್ಥೆಗಳ 600ಕ್ಕೂ ಹೆಚ್ಚು ಜನರು ಗಿರಿಭಾಗದಲ್ಲಿ ವಿವಿಧ ತಂಡಗಳಾಗಿ 'ಗಿರಿಸ್ವಚ್ಚತಾ ಅಭಿಯಾನ'ದಲ್ಲಿ ಭಾಗಿಯಾಗಿದ್ದರು.
ಬೆಳಗ್ಗೆ 8 ಗಂಟೆಗೆ ನಗರದ ಟೌನ್ ಕ್ಯಾಂಟೀನ್ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ಎಚ್. ಅಕ್ಷಯ್ ಸ್ವಚ್ಚತಾ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. "ಚಿಕ್ಕಮಗಳೂರು ನೈಸರ್ಗಿಕವಾಗಿ ಅತ್ಯಂತ ಸುಂದರವಾದ ಜಿಲ್ಲೆಯಾಗಿದ್ದು, ಹಲವಾರು ಪ್ರವಾಸಿ ತಾಣಗಳು ಹಾಗೂ ಅತ್ಯದ್ಭುತವಾದ ಗಿರಿ ಶ್ರೇಣಿಗಳನ್ನು ಒಳಗೊಂಡಿದೆ, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರಿಂದ ಕಸದ ತೊಟ್ಟಿಯಾಗಿದ್ದು, ಇದನ್ನು ಸ್ವಚ್ಛಗೊಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂದರು.

ಈ ಕಾರ್ಯಕ್ರಮ ಮಾದರಿಯಾಗಲಿದೆ
"ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಮಾದರಿಯಾಗಲಿದೆ. ಗಿರಿ ಶ್ರೇಣಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಪ್ರಕೃತಿದತ್ತವಾಗಿ ಬಂದಿರುವ ಈ ಸೌಂದರ್ಯವನ್ನು ನಮ್ಮ ಪೂರ್ವಜನರು ಈ ವರೆಗೆ ಕಾಪಾಡಿಕೊಂಡು ಬಂದಿದ್ದಾರೆ. ಅದನ್ನು ಕಾಪಾಡಿಕೊಂಡು ಉಳಿಸುವ ಮೂಲಕ ನಾವು ಮುಂದಿನ ಪೀಳಿಗೆಗೆ ಮಾದರಿಯಾಗೋಣ" ಎಂದು ಎಂ. ಎಚ್. ಅಕ್ಷಯ್ ತಿಳಿಸಿದರು.

ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗಿದೆ
ನಗರಸಭೆ ಪೌರಾಯುಕ್ತ ಎಂ. ಸಿ. ಬಸವರಾಜ್ ಮಾತನಾಡಿ, "ಜಿಲ್ಲೆಯು ಅದ್ಬುತ ಪ್ರವಾಸಿ ತಾಣಗಳನ್ನು ಹೊಂದಿದ್ದು ತನ್ನದೆ ಆದ ನೈಸರ್ಗಿಕ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದಾರೆ. ಹೀಗಾಗಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಇದರ ಸ್ವಚ್ಛತೆ ಕಾಪಾಡುವುದು ಪ್ರವಾಸಿಗರ ಕರ್ತವ್ಯ ಹಾಗೂ ನಮ್ಮೆಲ್ಲರ ಹೊಣೆಯಾಗಿದೆ" ಎಂದು ಹೇಳಿದರು.

ತಿಂಗಳಿಗೊಮ್ಮೆ ಕಾರ್ಯಕ್ರಮ
ಈ ಸ್ವಚ್ಚತಾ ಕಾರ್ಯಕ್ರಮ ಜಿಲ್ಲೆಯಲ್ಲಿಯೇ ಇತಿಹಾಸ ಸೃಷ್ಟಿಸಿದ ಕ್ಷಣವಾಗಿದೆ. ಮುಂದಿನ ದಿನಗಳಲ್ಲಿ ತಿಂಗಳಿಗೆ ಒಮ್ಮೆ ಈ ರೀತಿಯ ಕಾರ್ಯಕ್ರಮವನ್ನು ರೂಪಿಸಲು ಚಿಂತಿಸಲಾಗುತ್ತಿದೆ. ಸ್ಥಳೀಯರು ಹಾಗೂ ಸಾರ್ವಜನಿಕರು ಸಹಕರಿಸುವ ಮೂಲಕ ಮುಂಬರುವ ದಿನಗಳಲ್ಲಿ ಸ್ವಚ್ಛತಾ ಅಭಿಯಾನ ಬೃಹತ್ ಮಟ್ಟದಲ್ಲಿ ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.

ಗುಲಾಬಿ ಹೂ ನೀಡಿ ಜಾಗೃತಿ
ಗಿರಿಸ್ವಚ್ಚತಾ ಅಭಿಯಾನದ ವೇಳೆ ದತ್ತಪೀಠದಲ್ಲಿರುವ ಅಂಗಡಿ ಮಾಲೀಕರಿಗೆ ನಗರಸಭೆ ಆಯುಕ್ತ ಬಸವರಾಜ್ ಗುಲಾಬಿ ಹೂ ನೀಡಿ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಹಾಗೂ ಪ್ಲಾಸ್ಟಿಕ್ ಬಳಕೆ ವಿಭಿನ್ನವಾಗಿ ಮನವಿ ಮಾಡಿಕೊಂಡರು. ಇದೇ ರೀತಿ ಗಿರಿಭಾಗದಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದರೆ ಮುಂದಿನ ದಿನಗಳಲ್ಲಿ ಗಿರಿಭಾಗವೆಲ್ಲ ಪ್ಲಾಸ್ಟಿಕ್ ಮಯವಾಗುತ್ತದೆ. ಜೊತೆಗೆ ಇದೇ ರೀತಿ ಮುಂದುವರೆದರೆ ಜಿಲ್ಲಾಡಳಿತದ ಜೊತೆ ಚರ್ಚೆ ನಡೆಸಿ ವ್ಯಾಪಾರವನ್ನು ಸಹ ನಿಷೇಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

4-5 ಟಿಪ್ಪರ್ ಕಸ ಸಂಗ್ರಹ
ದತ್ತಪೀಠ ಹಾಗೂ ಗಿರಿಭಾಗದ ಪ್ರಮುಖ ಸ್ಥಳಗಳಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ನಗರಸಭೆಯ ಮೂಲಕ ಮುಂದಿನ ದಿನಗಳಲ್ಲಿ ಪ್ರತಿ ದಿನ ಅಥವಾ ಒಂದು ನಿಗದಿ ಮಾಡಿಕೊಂಡು ನಗರಸಭೆ ವಾಹನಗಳ ಮೂಲಕ ಗಿರಿಶ್ರೇಣಿಯಿಂದ ಹೊರ ತಗೆದುಕೊಂಡು ಹೋಗಲು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ತಗೆದುಕೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದರು.
ಬೆಳಿಗ್ಗೆ ಏಳು ಗಂಟೆಗೆ ನಗರದ ಟೌನ್ಕ್ಯಾಂಟಿನ್ ಸರ್ಕಲ್ ವೃತ್ತದಿಂದ ವಿವಿಧ ತಂಡಗಳಾಗಿ ಕಸಸಂಗ್ರಹಣೆಗೆ ತೆರಳಲಾಯಿತು. 12 ವಿವಿಧ ತಂಡಗಳಾಗಿ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು. ಸುಮಾರು 4-5 ಟನ್ ಕಸ ಸಂಗ್ರಹವಾಯಿತು.












Click it and Unblock the Notifications