ಅಂಬೇಡ್ಕರ್ ತುಕ್ಡೆ ಗ್ಯಾಂಗ್ಗಳನ್ನು ಬೆಂಬಲಿಸುವ ಮನಸ್ಥಿತಿ ಹೊಂದಿರಲಿಲ್ಲ-ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್ 7: ಕೆಲವು ವಿಛಿದ್ರಕಾರಿ ಶಕ್ತಿಗಳು ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಮತ್ತು ಹೆಸರು ಬಳಸಿ ಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದರು.
ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಚಿಕ್ಕಮಗಳೂರು ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ತುಕ್ಡೆ ಗ್ಯಾಂಗ್ಗಳನ್ನು ಬೆಂಬಲಿಸುವ ಮನಸ್ಥಿತಿಯನ್ನು ಯಾವತ್ತೂ ಹೊಂದಿರಲಿಲ್ಲ ಎಂದರು.
ಚಿಕ್ಕಮಗಳೂರಿನಲ್ಲಿ ಇಂದು ಬೃಹತ್ ಶೋಭಾಯಾತ್ರೆ: ಭದ್ರತೆ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್
ಥಡ್ಸ್ ಆಫ್ ಪಾಕಿಸ್ತಾನ ಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳನ್ನು ನೋಡಬಹುದಾಗಿದೆ. ಒಡಕಿನ ಮನಸ್ಥಿತಿಯವರು ಜನರನ್ನು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಬೇಕಾದ ಅವಶ್ಯಕತೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ರಾಷ್ಟ್ರಹಿತದ ಜೊತೆಗೆ ರಾಜೀಯಾಗದ ಬದುಕು ಅಂಬೇಡ್ಕರ್ ಅವರದ್ದು, ಅವರು ಅಂಧಾಭಿಮಾನವನ್ನು ಬಯಸಲಿಲ್ಲ. ರಾಷ್ಟ್ರದ ಹಿತವನ್ನು ಬದುಕಾಗಿಸಿಕೊಂಡರು. ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಚಿಂತನೆ ಮಾಡದೆ. ಅವರ ಯೋಚನೆಯಲ್ಲಿ ಸಮಷ್ಟಿಯ ಹಿತ, ರಾಷ್ಟದ ಹಿತ ಅಡಕವಾಗಿತ್ತು. ಭಾರತ ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಕೆಲವರು ದಲಿತರಿಗೆ ಪ್ರತ್ಯೇಕ ರಾಷ್ಟ್ರ ಕೇಳುವಂತೆ ಅಂಬೇಡ್ಕರ್ ಅವರಿಗೆ ತಿಳಿಸಿದಾಗ, ರಾಷ್ಟ್ರಹಿತ ದೃಷ್ಟಿಯಿಂದ ಅದನ್ನು ತಿರಸ್ಕರಿಸಿ, ದೇಶದ ಪರ ನಿಂತರು ಎಂದು ಸಿ.ಟಿ ರವಿ ಹೇಳಿದರು.
ಸಂವಿಧಾನದ ಮೂಲಕ ಭವಿಷ್ಯದ ಭಾರತದ ಆಶೋತ್ತರಗಳು ಏನಿರಬೇಕೆಂಬುದನ್ನು ಸಂವಿಧಾನದಲ್ಲಿ ಕಟ್ಟಿಕೊಡುವ ಕೆಲಸವನ್ನು ಮಾಡಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಸದಾ ಕಾಲ ಬೆಳಗುವ ಸೂರ್ಯನಾಗಿಯೇ ನಮ್ಮೊಂದಿಗೆ ಪ್ರಕಾಶಮಾನವಾಗಿ ಇರುತ್ತಾರೆ. ಅವರ ಬದುಕಿನ ಜೊತೆ ನಮ್ಮ ಬದುಕಿನ ಹೆಜ್ಜೆ ಹಾಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನವೇ ಒಂದು ಪಾಠವಾಗಿದ್ದು, ಸಾಕಷ್ಟು ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶಗಳು ಎಲ್ಲರಿಗೂ ಮಾದರಿಯಾಗಿದ್ದು, ಅದರಲ್ಲೂ ವಿಶೇಷವಾಗಿ ಎಷ್ಟೇ ಕಷ್ಟಗಳಿದ್ದರು ಆತ್ಮಸ್ಥೈರ್ಯದಿಂದ ಸಾಧನೆ ಮಾಡಬಹುದು ಎಂಬ ಸಂದೇಶ ನೀಡಿದ್ದಾರೆ. ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ ಹಾಗೂ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕೆಂಬ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಅವರ ಸಂದೇಶ ಎಲ್ಲರಿಗೂ ಮಾದರಿ. ಅವರು ನೀಡಿದ ಸಂದೇಶವನ್ನು ಎಲ್ಲರೂ ಚಾಚುತಪ್ಪದೆ ಪಾಲಿಸಬೇಕು ಎಂದು ಕರೆ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚೈತ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.