ಯುವಕನ ಮೇಲೆ ಕಾಡುಕೋಣ ದಾಳಿ: ಅರಣ್ಯ ಇಲಾಖೆ ಮೇಲೆ ಜನರ ಆಕ್ರೋಶ
ಚಿಕ್ಕಮಗಳೂರು, ಜನವರಿ 6: ತೋಟದಲ್ಲಿ ಕೆಲಸ ಮುಗಿಸಿ ಸಂಜೆ ಮನೆಯತ್ತ ಹೊರಟಿದ್ದ ಯುವಕನ ಮೇಲೆ ಕಾಡುಕೋಣ ಏಕಾಏಕಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ನಡೆದಿದೆ. ಮನೋಜ ಗಾಯಾಳು ಯುವಕ ಎಂದು ಗುರುತಿಸಲಾಗಿದೆ.
ಮನೋಜ ತೋಟದಲ್ಲಿ ಕೆಲಸ ಮುಗಿಸಿ ವಾಪಸ್ ಆಗುವ ವೇಳೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಕೂಡಲೇ ಗಾಯಾಳು ಮನೋಜನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ದಾಖಲಿಸಲಾಗಿತ್ತು. ಕಾಡುಕೋಣ ಬಲವಾಗಿ ತಿವಿದ ಪರಿಣಾಮ ಮನೋಜ್ ಪಕ್ಕೆಲುಬಿಗೆ ಗಂಭೀರ ಗಾಯವಾಗಿದೆ.
ಕಳೆದ 15 ದಿನದಲ್ಲಿ ಜಿಲ್ಲೆಯಲ್ಲಿ ಇದು 3ನೇ ಕಾಡುಕೋಣ ದಾಳಿ ಪ್ರಕರಣವಾಗಿದೆ. ಇತ್ತೀಚೆಗಷ್ಟೆ ಬೆಟ್ಟದಮರಡಿ ಗ್ರಾಮದಲ್ಲಿ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ದಿನೇಶ್ ಎಂಬ ಪೇದೆ ಮೇಲೂ ಕಾಡುಕೋಣ ದಾಳಿ ಮಾಡಿತ್ತು. ಅವರು ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಮತ್ತೊಂದು ಕಾಡುಕೋಣ ದಾಳಿಯಾಗಿ ಆತ ಕೂಡ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಎಂಟತ್ತು ದಿನಗಳ ಹಿಂದಷ್ಟೆ ಕಳಸ ತಾಲೂಕಿನ ತೋಟದೂರು ಸಮೀಪದ ಕುಳಿಹಿತ್ಲು ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ಎನ್ನುವವರ ಮೇಲೂ ಕಾಡುಕೋಣ ದಾಳಿ ಮಾಡಿತ್ತು.
ಮೃತ ಸೋಮಶೇಖರ್ ಗುರುವಾರ ಕುಳಿಹಿತ್ಲು ಗ್ರಾಮದಲ್ಲಿ ತೋಟದ ಕೆಲಸಕ್ಕೆ ತೋಟದ ಕೆಲಸಕ್ಕೆ ತೆರಳಿದ್ದರು. ಅಡಿಕೆ ತೋಟದಲ್ಲಿ ಎಂದಿನಂತೆ ಕೆಲಸ ಮಾಡುವಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ಸೋಮಶೇಖರ್ ತಕ್ಷಣ ಓಡಿಹೋಗಲು ಯತ್ನಿಸಿದರು ಕೂಡ, ಕಾಡುಕೋಣ ಹಠಕ್ಕೆ ಬಿದ್ದಂತೆ ಅವರ ಹಿಂದೆಯೇ ಓಡಿ ಮಾರಣಾಂತಿಕವಾಗಿ ತಿವಿದಿದೆ. ಸೋಮಶೇಖರ್ ಕೂಗುತ್ತಾ ಓಡಿದ್ದಾರೆ. ಅವರು ಕೂಗುತ್ತಿದ್ದಂತೆ ತೋಟದ ಮತ್ತೊಂದು ಕಡೆಯಿಂದ ಸಹೋದರ ಓಡಿ ಬಂದಿದ್ದಾರೆ. ತಕ್ಷಣ ನೀರು ಕುಡಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ದುರಾದೃಷ್ಟವಶಾತ್ ಸೋಮಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಕಾಫಿನಾಡಿಗರ ಜೀವಕ್ಕೆ ವನ್ಯಮೃಗಗಳೇ ಕಂಟಕವಾಗುತ್ತಿವೆ. ಹುಲಿ, ಕಾಡಾನೆ, ಚಿರತೆ ದಾಳಿಗೆ ಅನೇಕರು ತಮ್ಮ ಉಸಿರು ಚೆಲ್ಲಿದ್ದು, ಕರಡಿ ದಾಳಿಯಿಂದ ಕೈ-ಕಾಲು ಕಳೆದುಕೊಂಡವರು ಇದ್ದಾರೆ. ಇದೀಗ ಕಾಡುಕೋಣ ದಾಳಿ ಕೂಡ ಆರಂಭವಾಗಿದ್ದು, ಜನ ತತ್ತರಿಸಿದ್ದಾರೆ. ಕಾಫಿನಾಡಿನಲ್ಲಿ ಇತ್ತೀಚಿಗೆ ಕಾಡಾನೆಗಳ ಹಾವಳಿ ಹೆಚ್ಚಿತ್ತು. ಈಗ ಕಾಡಾನೆ ಜೊತೆ ಕಾಡುಕೋಣಗಳ ಹಾವಳಿಯೂ ಹೆಚ್ಚಿದೆ. ಹಾಗಾಗಿ, ಸ್ಥಳೀಯರು ಅಧಿಕಾರಿಗಳು ಕಾಡುಕೋಣಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ರೀತಿಯ ಪ್ರಕರಣ ಇನ್ನೊಂದು ನಡೆದರೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications